ನೂತನ ವಕೀಲರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಅಫಜಲಪುರ: ನ್ಯಾಯಾಲಯದಲ್ಲಿ ಕಕ್ಷಿದಾರರೇ ಪ್ರಮುಖರಾಗಿದ್ದು, ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿನಾಯಕ ಮಾಯಣ್ಣವರ ಹೇಳಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ನಡೆದ ನೂತನ ವಕೀಲರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನ್ಯಾಯಾಲಯದಲ್ಲಿ ಲೋಕ್ ಅದಾಲತ್ ಮೂಲಕ ಕಕ್ಷಿದಾರರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬಹುದಾಗಿದೆ. ನೂತನ ಅಧ್ಯಕ್ಷರ ನೇತೃತ್ವದಲ್ಲಿ ಸಂಘ ವಿಭಿನ್ನವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸವಿದೆ ಎಂದರು.
ಸಿವಿಲ್ ನ್ಯಾಯಾಧೀಶರಾದ ಅನಿಲ್ ಅಮಾತೆ ಮಾತನಾಡಿ, ವಕೀಲರು ನ್ಯಾಯದ ಪರವಾಗಿ ಹಾಗೂ ಕಕ್ಷಿದಾರರ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸಾಮಾನ್ಯ. ಸ್ಪರ್ಧೆ ಮುಗಿದ ನಂತರ ಅದನ್ನು ಮರೆತು ಎಲ್ಲರೂ ಒಗ್ಗೂಡಿ ಸಂಘದ ಬೇಡಿಕೆಗಳ ಈಡೇರಿಕೆಗೆ ಸಾಂಘಿಕವಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಪದಗ್ರಹಣ ಸ್ವೀಕರಿಸಿ ವಕೀಲರ ಸಂಘದ ತಾಲೂಕು ಅಧ್ಯಕ್ಷ ಅರ್ಜುನ್ ಕೇರೂರ ಮಾತನಾಡಿ, ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ. ಚುನಾವಣೆಗಳಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು, ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಬೇಕು. ಸಂಘದ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶಂಕರರಾವ್ ಹುಲ್ಲೂರ, ಕೆ.ಜಿ. ಪೂಜಾರಿ, ಸಿ.ಎಸ್. ಹಿರೇಮಠ, ವಾಸೀಮ್ ಜಾಗೀರದಾರ, ನಾಗೇಶ್ ಕೊಳ್ಳಿ, ಎಸ್.ಜೆ. ಗುತ್ತೇದಾರ, ಮಂಜುನಾಥ್ ಕೊಳ್ಳಿ, ಅನೀಲ ಜಮಾದಾರ, ಜಯಶ್ರೀ ಗಣಾಚಾರಿ, ಡಿ.ಡಿ. ದೇಶಪಾಂಡೆ, ಎಂ.ಬಿ. ಪತ್ತಾರ, ಯಲ್ಲಾಲಿಂಗ ಜಮಾದಾರ, ಸಂತೋಷ ಶೇಜುಳೆ, ರಾಮವಿಲಾಸ್ ಸುತಾರ, ರೇವಣಸಿದ್ದಪ್ಪ ಹೋಳಿಕೇರಿ, ಮಲ್ಲಣ್ಣಗೌಡ ಪಾಟೀಲ್, ಕೇದಾರ ಪೂಜಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪದಾಧಿಕಾರಿಗಳ ನೇಮಕ
ಅಫಜಲಪುರ ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಅರ್ಜುನ್ ಕೇರೂರ, ಕಾರ್ಯದರ್ಶಿಯಾಗಿ ಪ್ರಕಾಶ್ ಪಾಟೀಲ್, ಉಪಾಧ್ಯಕ್ಷರಾಗಿ ರಾಜೇಂದ್ರ ಸರ್ದಾರ್ ಹಾಗೂ ಅನಿತಾ ದೊಡ್ಮನಿ, ಜಂಟಿ ಕಾರ್ಯದರ್ಶಿಯಾಗಿ ಶಂಕರ ರಾಠೋಡ, ಖಜಾಂಚಿಯಾಗಿ ಶ್ರೀವಲ್ಲಭ್ ಪೂಜಾರಿ, ಗ್ರಂಥಾಲಯ ಕಾರ್ಯದರ್ಶಿಯಾಗಿ ರಾಜ್ ಭಾಸ್ಕರ್ ಗೋಲಗೇರಿ ಅವರನ್ನು ನೇಮಕ ಮಾಡಲಾಯಿತು.


















