ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾದ ಉಚಿತ ಸಾಮೂಹಿಕ ವಿವಾಹ
ಅಫಜಲಪುರ: 84 ಲಕ್ಷ ಕೋಟಿ ಜೀವರಾಶಿಗಳ ನಂತರ ಭಗವಂತನು ಕರುಣಿಸಿರುವ ಶ್ರೇಷ್ಠ ಮಾನವ ಜೀವನವನ್ನು ಪರೋಪಕಾರಿ ಕಾರ್ಯಗಳಿಗೆ ತೊಡಗಿಸಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದು ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಪಟ್ಟಣದ ಜಹಾಗಿರದಾರ ಫಂಕ್ಷನ್ ಹಾಲ್ನಲ್ಲಿ ಹಜರತ್ ಮಲ್ಲಿಕಾರ್ಜುನ ದಾವಲಮಲಿಕ ಮುತ್ಯಾರವರಿಂದ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮೂಹಿಕ ವಿವಾಹಗಳು ಕೇವಲ ಎರಡು ವ್ಯಕ್ತಿಗಳನ್ನು ಮಾತ್ರವಲ್ಲ, ಎರಡು ಕುಟುಂಬಗಳನ್ನು, ಸಮಾಜವನ್ನು ಒಂದಾಗಿಸುವ ಮಹತ್ವದ ಕಾರ್ಯವಾಗಿದೆ ಎಂದರು.
ವಿವಿಧ ಧರ್ಮಗಳ ಆಚರಣೆ, ತತ್ವಗಳು ಬೇರೆಬೇರೆ ಇದ್ದರೂ ಅವು ಸಾರುವ ಸಂದೇಶ ಒಂದೇ ಆಗಿದ್ದು, ಪ್ರೀತಿ, ಶಾಂತಿ ಮತ್ತು ಸೌಹಾರ್ದತೆಯೇ ಅದರ ಮೂಲ ಎಂದು ಹೇಳಿದರು. ಹೊಸ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿಗಳು ದೇಹವಾಗಿ ಇಬ್ಬರಾದರೂ ಆತ್ಮವಾಗಿ ಒಂದಾಗಿ ಆದರ್ಶ ಜೀವನ ಸಾಗಿಸಬೇಕು ಎಂದು ಹಾರೈಸಿದರು.
ಸಾಮೂಹಿಕ ವಿವಾಹದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಬಮ್ಮಲಿಂಗೇಶ್ವರ ಬೃಹನ್ಮಠ, ರೇವೂರ (ಬಿ) ಯ ಶ್ರೀ ಷ. ಬ್ರ. ಶ್ರೀಕಂಠ ಶಿವಾಚಾರ್ಯರು ವಹಿಸಿ ಆಶೀರ್ವಚನ ನೀಡಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಹಜರತ್ ದಾವಲಮಲಿಕ ಮಲ್ಲಿಕಾರ್ಜುನ ಮುತ್ಯಾ,ಹಾಗೂ
ಶ್ರೀ ಮಳೇಂದ್ರ ಮಠದ ಪೂಜ್ಯ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀ ಕೈಲಾಸಲಿಂಗ ಶಿವಾಚಾರ್ಯರು, ಶ್ರೀ ಶಿವಾನಂದ ಶಿವಯೋಗಿ, ಮರುಳಾಧ್ಯ ಶಿವಾಚಾರ್ಯರು,ಹಜರತ್ ದಾವಲಮಲೀಕರ ವರಪುತ್ರ ಹಜರತ್ ಮಲ್ಲಿಕಾರ್ಜುನ ದಾವಲಮಲೀಕ ಮುತ್ಯಾ
ಷಡಕ್ಷರಿ ದೇವರು, ಹಜರತ್ ಸೈಯದ್ ಶಹಾ ಇಸ್ಲಾಮೊದ್ದಿನ್ ಹೈಮದ್ ಖಾದ್ರಿ ಸೇರಿದಂತೆ ಅನೇಕ ಪೂಜ್ಯರು ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಜೆ.ಎಂ. ಕೊರಬು, ಜ್ಯೋತಿ ಅರುಣಕುಮಾರ ಪಾಟೀಲ್, ತಹಸೀಲ್ದಾರ್ ಸಂಜೀವಕುಮಾರ ದಾಸರ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಎಲ್. ಪಟೇಲ್, ವಸೀಂ ಜಾಗೀರದಾರ, ಲಚಪ್ಪ ಜಮಾದಾರ, ಶಂಕರ ಮ್ಯಾಕೇರಿ, ಕೆ.ಜಿ. ಪೂಜಾರಿ, ಮಹಾಂತೇಶ ಪಾಟೀಲ್, ಮಳೇಂದ್ರ ಡಾಂಗೆ, ವಕೀಲರ ಸಂಘದ ಅಧ್ಯಕ್ಷ ಅರ್ಜುನ ಕೆರೂರ, ಪ್ರಭಾವತಿ ಮೇತ್ರಿ, ಚಂದ್ರಶೇಖರ ಕರಜಗಿ, ಶ್ರೀದೇವಿ ಪಾಟೀಲ್, ಬಿ.ಎಂ. ರಾವ್, ಕಸಾಪ ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಪ್ರತಿಭಾ ಮಹಿಂದ್ರಕರ್, ಬಾಬುಮಿಯಾ ಪುಲಾರಿ, ಭೀಮರಾಯ ಗೌರ, ನಾಗೇಶ ಕೊಳ್ಳಿ, ಎಸ್.ಎಸ್. ಪಾಟೀಲ್, ಪ್ರಮೋದ ಗಾಡಿ ವಡ್ಡರ, ಸಿದ್ದರಾಮ ಸೀತನೂರ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಭೀಮರಾವ ಅರ್ಜುಣಗಿ ನಿರೂಪಿಸಿದರು. ಡಿ.ಕೆ. ಚಂದ್ರಕಲಾ ಸ್ವಾಗತಿಸಿದರು ಹಾಗೂ ಪ್ರಿಯಾಂಕಾ ಕೋರಿ ವಂದಿಸಿದರು.
ಈ ಕಾರ್ಯಕ್ರಮವು ಧಾರ್ಮಿಕ ಸೌಹಾರ್ದತೆ, ಸಮಾಜಸೇವೆ ಮತ್ತು ಬಡವರ ಕಲ್ಯಾಣದ ಪ್ರತೀಕವಾಗಿ ಗಮನ ಸೆಳೆಯಿತು.