ವಿಜಯಪುರದಲ್ಲಿ ಅಖಿಲ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಷನಿ ಗೌಡ ಪತ್ರಿಕಾಗೋಷ್ಠಿ
ಮಹಿಳಾ ನೌಕರರಲ್ಲಿ ಸಂಘಟನೆಯ ಬಗ್ಗೆ ಅರಿವು, ಸದಸ್ಯತ್ವ ಅಭಿಯಾನ
ವಿಜಯಪುರ : ಸರ್ಕಾರಿ ಆಡಳಿತ ಯಂತ್ರದಲ್ಲಿ ಮಹಿಳಾ ನೌಕರರ ಪಾತ್ರ ಪ್ರಮುಖ, ಮಹಿಳಾ ನೌಕರರ ಸಮಸ್ಯೆ ನಿವಾರಣೆಗಾಗಿ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಅಸ್ತಿತ್ವಗೊಂಡಿದ್ದು ಪ್ರತಿ ಜಿಲ್ಲಾ ಕೇಂದ್ರಕ್ಕೂ ಭೇಟಿ ನೀಡಿ ಮಹಿಳಾ ನೌಕರರ ಜೊತೆ ಸಮಾಲೋಚನೆ ನಡೆಸುವ ಕಾರ್ಯ ನಡೆಸುವ ಜೊತೆಗೆ ಸದಸ್ಯತ್ವ ಅಭಿಯಾನಕ್ಕೂ ಆದ್ಯತೆ ನೀಡಲಾಗಿದ್ದು, ವಿಜಯಪುರ ಜಿಲ್ಲೆಯಲ್ಲಿಯೂ ಸಹ ಶೀಘ್ರದಲ್ಲಿಯೇ ಸಂಘದ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ ಎಂದು ವಿಜಯಪುರದಲ್ಲಿ ಅಖಿಲ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಷನಿ ಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆಡಳಿತ ಯಂತ್ರದಲ್ಲಿ ೨.೫ ಲಕ್ಷಕ್ಕೂ ಮಹಿಳಾ ನೌಕರರಿದ್ದಾರೆ, ಈ ಎಲ್ಲ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಅವರ ಧ್ವನಿಯಾಗುವ ನಿಟ್ಟಿನಲ್ಲಿ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಭೇಟಿ ನೀಡಿ ಮಹಿಳಾ ನೌಕರರಲ್ಲಿ ಸಂಘಟನೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದ್ದು, ಸದಸ್ಯತ್ವ ಅಭಿಯಾನಕ್ಕೂ ಆದ್ಯತೆ ನೀಡಲಾಗಿದೆ ಎಂದರು.
ವಿಜಯಪುರದಲ್ಲಿಯೂ ಸಂಘಟನೆಯ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದಿದೆ, ಇನ್ನೂ ಶೀಘ್ರದಲ್ಲಿಯೇ ವಿಜಯಪುರದಲ್ಲಿ ಸಮಾವೇಶ ಸಂಘಟಿಸಿ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಂಘದ ಕಾರ್ಯಚಟುವಟಿಕೆಗಳಿಗೆ ವೇಗ ನೀಡಲಾಗುವುದು ಎಂದರು.
ಮಹಿಳಾ ಸರ್ಕಾರಿ ನೌಕರರು ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದನ್ನು ಸಂಬAಧಿಸಿದ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಅದನ್ನು ನಿವಾರಿಸುವುದು, ನೌಕರರಿಗೆ ತೊಂದರೆಯಾದರೆ ಅದಕ್ಕೆ ಪೂರಕವಾಗಿ ಕಾನೂನಾತ್ಮಕ ಹೋರಾಟಕ್ಕೆ ಸಕಲ ರೀತಿಯಲ್ಲಿ ನೆರವು ನೀಡುವ ಕಾರ್ಯದ ಜೊತೆಗೆ ಮಹಿಳಾ ಸರ್ಕಾರಿ ನೌಕರರಿಗೆ ಹಕ್ಕು ಬಾಧ್ಯತೆಗಳ ಕುರಿತು ತಿಳಿವಳಿಕೆ ನೀಡಲು ರಾಜ್ಯ, ಜಿಲ್ಲಾ ಹಂತದ ಸಮಾವೇಶ, ವಿಚಾರ ಸಂಕಿರಣಗಳ ಆಯೋಜನೆ, ಕೆಸಿಎಸ್ಆರ್ ನಡತೆ ನಿಯಮಗಳ ಕುರಿತು ಅರಿವು ಮೂಡಿಸುವುದು ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಸಹಕಾರ ಸಂಘ, ಮಹಿಳಾ ಗೃಹ ನಿರ್ಮಾಣ ಮೊದಲಾದ ಯೋಜನೆಗಳನ್ನು ಭವಿಷ್ಯದಲ್ಲಿ ಕೈಗೊಳ್ಳುವ ನಿಟ್ಟಿನಲ್ಲಿ ಸಂಘಟನೆ ಕಾರ್ಯೋನ್ಮುಖವಾಗಲಿದೆ ಅನೇಕ ಧ್ಯೇಯೋದ್ದೇಶಗಳನ್ನು ಹೊಂದಿದೆ ಎಂದರು.
೮ ನೇ ವೇತನ ಆಯೋಗ ರಚನೆಗೆ ಹಕ್ಕೊತ್ತಾಯ
ರಾಜ್ಯ ಸರ್ಕಾರ ಮಹಿಳಾ ನೌಕರರಿಗೆ ಋತುಚಕ್ರ ಮಂಜೂರು ಮಾಡಿರುವುದು ಸ್ವಾಗತಾರ್ಹ, ಇದಕ್ಕೆ ನಾವು ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದೇವೆ, ಇನ್ನೂ ಸರ್ಕಾರ ಆಡಳಿತ ಯಂತ್ರದ ಭಾಗವಾಗಿರುವ ಸರ್ಕಾರಿ ನೌಕರರ ೮ ನೇ ವೇತನ ಆಯೋಗ ರಚನೆಗೆ ಅಸ್ತು ಎನ್ನುವ ಮೂಲಕ ನೌಕರರ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಸರ್ಕಾರಿ ನೌಕರರ ಪ್ರಮುಖವಾದ ಬೇಡಿಕೆಗಳಾದ ಮಾತೃತ್ವ ರಜೆಯನ್ನು ಒಂದು ವರ್ಷದವರೆಗೆ ವಿಸ್ತರಣೆ, ಗರ್ಭೀಣಿಯರಿಗೆ ಒಂದು ತಿಂಗಳು ವೇತನ ಸಹಿತ ರಜೆ ನೀಡುವುದು, ಮೇರಿ ದೇವಾಸಿಯಾ ಜನ್ಮದಿನವಾಗಿರುವ ಸೆಪ್ಟೆಂಬರ್ ೧೩ನ್ನು ಮಹಿಳಾ ಸರ್ಕಾರಿ ನೌಕರರ ದಿನಾಚರಣೆಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡುವುದು, ಮಹಿಳಾ ನೌಕರರಿಗೆ ಹಬ್ಬದ ಮುಂಗಡವಾಗಿ ನೀಡುವ ವೇತನ ಪ್ರಮಾಣವನ್ನು ೫೦ ಸಾವಿರ ರೂ.ಗೆ ಏರಿಕೆ ಮಾಡುವುದು, ವಿದೇಶ ಪ್ರವಾಸದ ಮಂಜೂರಾತಿಯನ್ನು ೧೫ ದಿನಗಳೊಳಗಾಗಿ ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಸಂಘಟನೆ ನಿರಂತರವಾಗಿ ಒತ್ತಾಯಿಸಲಿದೆ ಎಂದು ವಿವರಿಸಿದರು.
*ಪದಾಧಿಕಾರಿಗಳ ನೇಮಕ*
ಸಂಘಟನೆಯ ವಿಜಯಪುರ ಜಿಲ್ಲಾ ಘಟಕ ರಚಿಸಲಾಗಿದ್ದು, ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ ಅಪರ್ಣಾ ಹಜೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹೇಮಾ ವಸ್ತ್ರದ, ಹಿರಿಯ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಮಡಿವಾಳಮ್ಮ ನಾಡಗೌಡ, ರೇಷ್ಮಾ ಸುತಾರ ಅವರನ್ನು ನೇಮಕ ಮಾಡಲಾಗಿದೆ ಎಂದು ಇದೇ ವೇಳೆ ಪ್ರಕಟಿಸಿದರು.
ಸಂಘಟನೆಯ ರಾಜ್ಯ ಕೋಶಾಧ್ಯಕ್ಷೆ ಡಾ.ವೀಣಾ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಎಂ.ಆಶಾರಾಣಿ, ಸಂಘಟನೆಯ ವಿಜಯಪುರ ಜಿಲ್ಲಾ ಘಟಕದ ಪ್ರಮುಖರಾದ ಮಡಿವಾಳಮ್ಮ ನಾಡಗೌಡ, ಜಿಲ್ಲಾ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.


















