ಬೇಂದ್ರೆ ಆಧುನಿಕ ಕನ್ನಡ ಕಾವ್ಯ ಪರಂಪರೆಯ ನಿರ್ಮಾಪಕ- ಸಂತೋಷ ಬಂಡೆ
ವಿಜಯಪುರ: ತಮ್ಮ ಬದುಕಿನ ನೋವನ್ನು ಕಾವ್ಯಮಯ ಮಾಡಿ ಆಧುನಿಕ ಕನ್ನಡ ಕಾವ್ಯ ಪರಂಪರೆಯನ್ನು ನಿರ್ಮಿಸಿದ ರೂವಾರಿಗಳಲ್ಲಿ ದ ರಾ ಬೇಂದ್ರೆ ಬಹುಮುಖ್ಯರು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಶನಿವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ದ ರಾ ಬೇಂದ್ರೆ ಅವರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಬೇಂದ್ರೆ ಅವರು ತಮ್ಮ ಕಾವ್ಯ ಸೃಷ್ಟಿಗೆ ಬಳಸಿಕೊಂಡ ಭಾಷೆ, ಛಂದಸ್ಸು, ಲಯ, ವಸ್ತು ಎಲ್ಲವೂ ದೇಸಿಗುಣಗಳಿಂದ ಕೂಡಿರುವುದು ವಿಶೇಷ. ಹಾಗಾಗಿ ಬೇಂದ್ರೆಯವರ ಕಾವ್ಯಗಳು ಕೇವಲ ಹಾಳೆಯ ಮೇಲಿನ ಕವಿತೆಗಳಾಗಿರದೇ, ಜನಸಾಮಾನ್ಯರ ನಾಲಿಗೆಯ ಮೇಲೆ ಹಾಡುಗಳಾಗಿ ಅನುರಣಿಸುತ್ತಿವೆ ಎಂದು ಹೇಳಿದರು.
ಶಿಕ್ಷಕ ಸಿದ್ದು ರತ್ನಾಕರ ಮಾತನಾಡಿ, ಕನ್ನಡ ಕಾವ್ಯಲೋಕಕ್ಕೆ ವಿಶಿಷ್ಟ ಶೈಲಿ ಪರಿಚಯಿಸಿದ ಶಬ್ದ ಗಾರುಡಿಗ ಬೇಂದ್ರೆ ಅವರು ತಮ್ಮ ಕಾವ್ಯ ಶಕ್ತಿಯಿಂದ ಉತ್ಸಾಹದ ಚಿಲುಮೆಯನ್ನುಕ್ಕಿಸಿ ನೊಂದ ಜೀವಕ್ಕೆ ಸಾಂತ್ವನ ನೀಡಿ ಪ್ರೀತಿ, ಪ್ರೇಮ ಮೂಡಿಸಿ, ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ದ ರಾ ಬೇಂದ್ರೆ ಅವರ ಮನಸ್ಸು, ಭಾಷೆ, ಪ್ರಕೃತಿ ಹೃದಯ ಹಾಗೂ ವಿಚಾರವು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಮಾನವೀಯ ನೆಲೆಯಲ್ಲಿ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಬೇಂದ್ರೆ ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ, ಸಚೀನ ಅವಟಿ, ರಾಜಶೇಖರ ಶಿರಶ್ಯಾಡ, ಲಕ್ಷ್ಮೀ ಮಸೂತಿ, ಜಯಶ್ರೀ ಬಂಗಾರಿ, ಶ್ರುತಿ ಪೂಜಾರಿ, ರೇಣುಕಾ ಭಜಂತ್ರಿ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.


















