ಜೀವನದಲ್ಲಿ ಯಶಸ್ಸಿಗೆ ಸಂವಹನ ಕೌಶಲ್ಯ ಅತ್ಯವಶ್ಯಕ – ಪ್ರೊ.ಆರ್. ಬಿ. ಬೆಳ್ಳಿ”
ವಿಜಯಪುರ: ಜೀವನದಲ್ಲಿ ಯಶಸ್ಸು ಸಾಧಿಸಲು ಸಂವಹನ ಕೌಶಲ್ಯ ಅತ್ಯಂತ ಮುಖ್ಯವಾದದ್ದು. ಸುಮಧುರ ಬಾಂಧವ್ಯವು ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವಶ್ಯಕ ಎಂದು ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಕೃಷಿ ತಜ್ಞ ಪ್ರೊ. ಆರ್. ಬಿ. ಬೆಳ್ಳಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮ ವಿಭಾಗವು ವಿಶಾಲವಾದ ಸಾಗರದಂತಿದೆ. ಪ್ರಥಮ ವರ್ಷದ ವಿದ್ಯಾರ್ಥಿಗಳು ನೂತನ ಕನಸುಗಳು ಮತ್ತು ಮಹದಾಸೆಗಳನ್ನು ಹೊತ್ತು ಬಂದಿರುವಿರಿ, ನೀವು ಪತ್ರಿಕೋದ್ಯಮ ಕೋರ್ಸ್ನಲ್ಲಿ ಕಠಿಣ ಪರಿಶ್ರಮದೊಂದಿಗೆ ಮುಂದುವರಿಯಬೇಕು ಎಂದು ಅವರು ಸಲಹೆ ನೀಡಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನಾ ನಿಗಾರ ಸುಲ್ತಾನ ಮಾತನಾಡಿ, ಪ್ರಥಮ ವರ್ಷದ ವಿದ್ಯಾರ್ಥಿನಿಯರ ಜೀವನದ ಈ ಮೊದಲ ಆರಂಭವು ವೃತ್ತಿ ಜೀವನಕ್ಕಾಗಿ ಅಗತ್ಯವಾದ ಕೌಶಲ್ಯಗಳನ್ನು ಕರಗತಗೊಳಿಸಲು ಉತ್ತಮ ವೇದಿಕೆ. ಕಠಿಣ ಪರಿಶ್ರಮ ಮತ್ತು ಛಲದಿಂದ ಆ ಕೌಶಲ್ಯಗಳನ್ನು ಬಳಸಿ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ ನಾಯಕ ಮಾತನಾಡಿ, ಅನುಭವದ ಮೂಲಕ ಕಲಿಕೆಯು ಪತ್ರಿಕೋದ್ಯಮ ವಿಭಾಗದಲ್ಲಿ ಅತ್ಯಂತ ಪ್ರಮುಖವಾಗಿದ್ದು, ಒಬ್ಬ ಮನುಷ್ಯ ಈಜು ಕಲಿಯುವಂತೆ ಪತ್ರಿಕೋದ್ಯಮದಲ್ಲಿಯೂ ಪ್ರಾಯೋಗಿಕ ಕಲಿಕೆ ಅಗತ್ಯವಿದೆ. ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿ ಸಮಾಜವನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಇಂದಿನ ಎಐ ತಂತ್ರಜ್ಞಾನದಿAದ ಅವಕಾಶಗಳ ಕೊರತೆ ಉಂಟಾಗುತ್ತದೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಬಹುದು, ಆದರೆ ಮಾನವ ಕೌಶಲ್ಯ ಇರುವವರೆಗೂ ತಂತ್ರಜ್ಞಾನ ಸಂಪೂರ್ಣವಾಗಿ ಮನುಷ್ಯನ ಕೆಲಸವನ್ನು ಬದಲಾಯಿಸಲಾರದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಮಾತನಾಡಿ, ಒಬ್ಬ ಉತ್ತಮ ಸಂವಹನಕಾರನಾಗಬೇಕಾದರೆ ಪರಿಣಾಮಕಾರಿಯಾದ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಾವಶ್ಯಕ. ಸೋಲಿನಲ್ಲೂ ಗೆಲ್ಲುವ ಮನೋಭಾವ ಇರಬೇಕು, ಸೋತು ಗೆಲ್ಲುವ ಸಂತೋಷ ವಿಭಿನ್ನವಾಗಿದೆ. ಎಡುವುದು ಸಹಜ, ಆದರೆ ತಪ್ಪಿನ ಅರಿವು ನಮಗಿರಬೇಕು. ಅಷ್ಟೇ ಅಲ್ಲದೇ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ನಿರಂತರ ಪರಿಶ್ರಮದಿಂದ ಕೌಶಲ್ಯಗಳನ್ನು ಕರಗತಗೊಳಿಸಿ ಅವಕಾಶಗಳವರೆಗೆ ತಲುಪಬೇಕು. ಚಪ್ಪಾಳೆ ಒಂದು ಕೈಯಿಂದ ಬರುವುದಿಲ್ಲ, ಎರಡೂ ಕೈಗಳು ಸೇರಿದಾಗ ಮಾತ್ರ ಚಪ್ಪಾಳೆ ಶಬ್ಧ ಕೇಳುತ್ತದೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ದ್ವಿತೀಯ ವರ್ಷದ ವಿದ್ಯಾರ್ಥಿನಿ ರಾಜೇಶ್ವರಿ ಸ್ವಾಗತಿಸಿದರು, ವಿದ್ಯಾಶ್ರೀ ಮೆಗಾಡಿ ನಿರೂಪಿಸಿದರು, ಅನ್ನಪೂರ್ಣ ಪರಿಚಯಿಸಿದರು, ಮೇಘಪುಷ್ಪ ವಂದಿಸಿದರು.


















