ಹಾಸನದಲ್ಲಿ ಕಿರು ಚಲನಚಿತ್ರೋತ್ಸವದ ಸಂಭ್ರಮ
ಆಯ್ಕೆಯಾದ ಕಿರು ಚಿತ್ರಗಳಿಗೆ ಪ್ರಶಸ್ತಿ ಪ್ರದಾನ
ಬೆಂಗಳೂರು: ಹಾಸನಾಂಬೆ ದರ್ಶನ ಸಂದರ್ಭದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹಾಸನಾಂಬ ಚಲನಚಿತ್ರೋತ್ಸವ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಭ್ರಮ ಸಡಗರದಿಂದ ನಡೆಯಿತು.
ಹಾಸನ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್ ಮತ್ತು ವೆಂಚರ್ ಮೂವೀಸ್ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಹಾಸನಾಂಬ ಚಲನಚಿತ್ರೋತ್ಸವ-2025 ಅನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಉದ್ಘಾಟಿಸಿದರು.
ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕಿರು ಚಿತ್ರಗಳ ಚಲನಚಿತ್ರೋತ್ಸವ ಏರ್ಪಾಡು ಮಾಡುವ ಮೂಲಕ ಹಾಸನದ ಹಿರಿಮೆಯನ್ನು ಸಾಂಸ್ಕೃತಿಕವಾಗಿ ಹೆಚ್ಚಿಸಲು ಹೊಸ ಪ್ರಯತ್ನ ಮಾಡಿದಂತಾಗಿದೆ ಎಂದರು.
ಹಾಸನ ಕಲಾವಿದರಿಗೆ ಹುಟ್ಟು ನೀಡಿದ ಭೂಮಿ. ಹಾಸನದ ದನಗಳ ಜಾತ್ರೆ ಒಂದು ಕಾಲಕ್ಕೆ ನಾಡಿಗೆ ಹೆಸರುವಾಸಿ. ಇಂಥ ನೆಲದಲ್ಲಿ ಕಿರು ಚಿತ್ರೋತ್ಸವ ನಡೆಯುತ್ತಿರುವುದು ಅಭಿನಂದನಾರ್ಹ ಎಂದರು.
ಎರಡು ದಿನಗಳ ಕಾಲ ನಡೆದ ಈ ಚಲನಚಿತ್ರೋತ್ಸವದಲ್ಲಿ 10 ಕಿರುಚಿತ್ರಗಳು, 2 ವಿಶೇಷ ಕಿರುಚಿತ್ರಗಳು ಹಾಗೂ 3 ಕನ್ನಡ ಚಲನಚಿತ್ರಗಳು ಪ್ರದರ್ಶನಗೊಂಡವು. ಪ್ರೇಕ್ಷಕರಿಂದ ಉತ್ತಮ ಉತ್ಸಾಹಭರಿತ ಪ್ರತಿಕ್ರಿಯೆ ದೊರೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಹಾಸನ ಮಹಾನಗರ ಪಾಲಿಕೆಯ ಉಪ ಮಹಾಪೌರ ಹೇಮಲತಾ ಕಮಲ್ ಕುಮಾರ್, ನಗರಸಭೆಯ ಮಾಜಿ ಸದಸ್ಯ ಕಮಲ್ ಕುಮಾರ್, ನಮ್ಮ ಹಾಸನ ಟಿವಿ ಪ್ರಧಾನ ಸಂಪಾದಕ ತೌಫಿಕ್ ಅಹಮ್ಮದ್, ಹಾಗೂ ಆಯೋಜಕರಾದ ಗುರು ಪ್ರಸಾದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು.
ವಿಭಿನ್ನ ವಿಭಾಗಗಳಲ್ಲಿ ಆಯ್ಕೆಯಾದ ಅತ್ಯುತ್ತಮ ಕಿರುಚಿತ್ರಗಳಿಗೆ ಪ್ರಶಸ್ತಿಗಳನ್ನು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಪ್ರದಾನ ಮಾಡಿದರು. ಬಳಿಕ ಸಾಧಕರಿಗೆ ಸನ್ಮಾನಿಸಲಾಯಿತು.
ಆಯೋಜನಾ ಸಮಿತಿಯಲ್ಲಿ ಗುರು ಪ್ರಸಾದ್, ಸ್ಟಾನಿ ಜೋಯ್ಸನ್, ಶಕೀಲ್ ಅಹಮ್ಮದ್, ಪ್ರಶಾಂತ್ ಹಾಸನ್, ಪರಮೇಶ್ ದೊಡ್ಡಮಗ್ಗೆ, ದೇವರಾಜ್ ರಾಯಚೂರು, ಜೀವನ್ ರತ್ನ, ವಿನಾಯಕ್ ಬಿದಾರ್ ಹಾಗೂ ನಾಗರಾಜ್ ಭಂಡಾರಿ ಹಾಜರಿದ್ದರು.
ಹಾಸನದ ನಿರೂಪಕರಾದ ಕಾರ್ತಿಕ್, ರಕ್ಷಿತಾ ಕಾರ್ತಿಕ್ ಮತ್ತು ಮಿಲನ ಗೌಡ ಅವರು ಮನೋಜ್ಞವಾಗಿ ನಿರೂಪಿಸಿದರು