ಸಾಧನೆಗೆ ಬಡತನ ಅಡ್ಡಿಯಾಗದು; ಗೆಣ್ಣೂರ
ವಿಜಯಪುರ: ಸಾಧನೆಗೆ ಬಡತನ, ಕಷ್ಟ ಕಾರ್ಪಣ್ಯಗಳು ಅಡ್ಡಿಯಾಗಲಾರವು, ಸತತ ಓದಿನಿಂದ ಇಚ್ಚಿಸಿದ ಗುರಿಯನ್ನು ನಾವು ತಲುಪಬಹುದು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ನಗರದ ಟಕ್ಕೆಯಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (ಬಿಸಿಎಂ)ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಹಿರಿಯ ವಿದ್ಯಾರ್ಥಿಗಳ ಸಹಯೋಗದಿಂದ ಆರನೇ ಹಾಸ್ಟೆಲ್ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಮ್ಮ ಜೀವನದ ಕೆಲವು ಘಟನೆಗಳನ್ನು ಮೆಲಕು ಹಾಕುತ್ತ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಮಾನವರ ಮಾತನಾಡಿ ಹಾಸ್ಟೆಲ್ ಗಳು ಕೇವಲ ಅನ್ನವನ್ನು ಮಾತ್ರ ಕೊಡುವುದಿಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ನಿವೃತ್ತ ನಿಲಯಪಾಲಕ ಎಂ. ಎಸ್. ಕಟಬು ಮಾತನಾಡಿ ಜನನಿ ಜನ್ಮಭೂಮಿ ಸ್ವರ್ಗಕಿಂತಲೂ ಮಿಗಿಲು ಎಂಬ ವಿಷಯವನ್ನು ಹೇಳಿದರು.
ಹಲವು ಹಳೆಯ ವಿದ್ಯಾರ್ಥಿಗಳು ತಮ್ಮ ನೆನಪಿನಂಗಳದಲ್ಲಿ ಅಚ್ಚಳಿಯದಂತಿರುವ ಭಾವನೆಗಳ ಬುತ್ತಿಯನ್ನು ತಮ್ಮ ಅನಿಸಿಕೆಗಳ ಮೂಲಕ ತೆರೆದಿಟ್ಟರು. ಒಟ್ಟಾರೆಯಾಗಿ ಈ ವರ್ಷದ ಹಾಸ್ಟೆಲ್ ಹಬ್ಬ ದೀಪಾವಳಿ ಹಬ್ಬದ ಮುನ್ನವೇ ಹಬ್ಬದ ವಾತಾವರಣ ಸೃಷ್ಟಿ ಮಾಡಿ ಸ್ನೇಹಿತರ ಪುನರಮಿಲನಕ್ಕೆ ಸಾಕ್ಷಿಯಾಗಿತ್ತು.
ಈ ಸಂದರ್ಭದಲ್ಲಿ ಲಕ್ಷ್ಮಣ ಸನದಿ, ಶಿಂಧೆ, ಎಸ್.ಎಸ್. ಕಬಾಡೆ, ರವಿಕುಮಾರ ಬಿರಾದಾರ, ನಾಗೇಶ ಅಳ್ಳಿ, ಎಚ್.ಎಲ್.ದೊಡ್ಡಮನಿ, ಸಂತೋಷ ಬಗಲಿ, ಮಹೇಶ ಸಾಲಿಕೇರಿ, ಅವಜಿ, ಗಿರಿಗೌಡರ,ಸಂತೋಷ ಗುದಳಿ, ಚಂದ್ರು ಗುಳಬಾಳ, ಹುಸನಪ್ಪ, ಸಿದ್ದನಗೌಡ, ಕಾಡೇಶ, ಮನಸೂರ್ ಬೀಳಗಿ, ಶ್ರೀಕಾಂತ ಇಚೂರ್, ಪ್ರವೀಣ್ ಮ್ಯಾಗೇರಿ, ಜೋತೆಪ್ಪ, ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು, 6ನೇ ಹಾಸ್ಟೆಲ್ ಹಬ್ಬ ಅತ್ಯಂತ ಯಶಸ್ವಿಯಾಗಿ, ಅರ್ಥಪೂರ್ಣವಾಗಿ ನೆರವೇರಲು ಸಹಕರಿಸಿದರು.



















