ಮುದ್ದೇಬಿಹಾಳ: ಮಾರುಕಟ್ಟೆಯಲ್ಲಿ ಖರೀದಿಸುವ ಬಹುತೇಕ ತರಕಾರಿಗಳು ರಾಸಾಯನಿಕಯುಕ್ತ ಹಾಗೂ ಮಲೀನ ನೀರಿನಲ್ಲಿ ಸ್ವಚ್ಛಗೊಳಿಸಲಾಗುತ್ತಿದ್ದು, ಇವು ದೀರ್ಘಾವಧಿಯಲ್ಲಿ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಬೆಂಗಳೂರಿನ “ಅದಮ್ಯ ಚೇತನ” ಸಂಸ್ಥೆಯ ಸದಸ್ಯ ರಾಜೇಂದ್ರ ಹೆಗಡೆ ಹೇಳಿದರು. ಅವರು ಭಾನುವಾರ ಪಟ್ಟಣದ ಲಯನ್ಸ್ ಕ್ಲಬ್, ವೀರಶೈವ ಲಿಂಗಾಯತ ಮಹಾ ಸಭಾ ಹಾಗು ಹಸಿರು ತೋರಣ ಗೆಳೆಯರ ಬಳಗದ ಸಂಯುಕ್ತ ಆಶ್ರಯದಲ್ಲಿ ನಡೆದ “ಸುಸ್ಥಿರ ಜೀವನಕ್ಕೆ (ಟೆರೆಸ್ ಗಾರ್ಡನ್) ತಾರಸಿ ತೋಟ” ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಆರೋಗ್ಯಕರ ಪರಿಸರಕ್ಕೆ ಒಬ್ಬ ಮನುಷ್ಯನಿಗೆ ಕನಿಷ್ಠ ಏಳು ಮರಗಳನ್ನು ಬೆಳೆಸುವ ಅವಶ್ಯಕತೆ ಇದೆ. ಇಂದು ನಾವು ಮಳೆನೀರು ಮತ್ತು ಮಣ್ಣನ್ನು ಸರಿಯಾಗಿ ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸರಿಯಾಗಿ ಒಂದು ಕಡೆ ಮರು ಬಳಕೆ ಮಾಡದಂತೆ ವಿಲೇವಾರಿ ಮಾಡಬೇಕು.
ಹಣ್ಣುಗಳಿಗೆ ರಾಸಾಯನಿಕ ದ್ರಾವಣ, ಕೀಟನಾಶಕಗಳನ್ನು ಸಿಂಪಡಿಸುವುವ ಕೆಲಸ ನಿರಂತರವಾಗಿ ನಡೆದಿದೆ.
ಪ್ರತಿದಿನ 44 ತರಹದ ವಿಷಯುಕ್ತ ಪದಾರ್ಥಗಳು ಯಾವುದೇ ರೀತಿಯಲ್ಲಾದರೂ ನಮ್ಮ ಹೊಟ್ಟೆ ಸೇರುತ್ತಿವೆ.
ಇದರ ಪರಿಣಾಮವಾಗಿ ಹುಟ್ಟುವ ಮಕ್ಕಳು ವಿವಿಧ ರೀತಿಯಲ್ಲಿ ಅನಾರೋಗ್ಯದಿಂದ ಬಳಲುವ ಪರಿಸ್ಥಿತಿ ಇದೆ. ನಮ್ಮ
ಮನೆಯಂಗಳ, ಮೇಲ್ಛಾವಣಿಯನ್ನು ಸಮರ್ಪಕವಾಗಿ ಬಳಸಿಕೊಂಡು ಸಿಗುವ ಜಾಗದಲ್ಲಿ ಮಣ್ಣಿನ ಮಡಿಕೆ ಇಲ್ಲವೇ ಪ್ಲಾಸ್ಟಿಕ್ ಕುಂಡಗಳಲ್ಲಿ ದಿನ ನಿತ್ಯ ಬಳಸುವ ಅಗತ್ಯ ತರಕಾರಿಗಳನ್ನು ಬೆಳೆಸುವದು ಮತ್ತು ಬಳಕೆ ಮಾಡಲು ಸಾಧ್ಯವಿದೆ. ಇದರಿಂದ ಸಾವಯವ ಕೃಷಿಗೆ ಉತ್ತೇಜನ ಮತ್ತು ಅದರ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಸೇವಿಸಿ ಆರೋಗ್ಯ ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂದವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಸ್ವಚ್ಛ ಪರಿಸರದಲ್ಲಿ ನಾವೇ ನಮ್ಮ ಮನೆಯಂಗಳದಲ್ಲಿ ತರಕಾರಿ, ಹಣ್ಣು, ಹೂ ಬೆಳೆದು ಸ್ವಾವಲಂಬಿ, ಸುಸ್ಥಿರ ಬದುಕು ಸಾಗಿಸಲು ಸಾಧ್ಯವಿದೆ. ಇದಕ್ಕಾಗಿ ಆರಂಭದಲ್ಲಿ ಸಮಾನ ಮನಸ್ಕ ಗೆಳೆಯರು ಕೈ ಜೋಡಿಸಿ ಕೆಲಸ ಮಾಡಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕನಗೌಡ ಪಾಟೀಲ ಮಾತನಾಡಿ, ಲಯನ್ಸ್ ಕ್ಲಬ್ ಮತ್ತು ಹಸಿರು ತೋರಣ ಬಳಗದ ಜೊತೆಗೂಡಿ ಜನತೆಗೆ ಉಪಯೋಗ ಆಗುವ ಅನೇಕ ಕಾರ್ಯಗಳನ್ನು ಮಾಡಲಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಖ್ಯಾತ ಶಸ್ತ್ರಚಿಕಿತ್ಸಕ ಡಾ.ಉತ್ಕರ್ಷ ನಾಗೂರ ಮಾತನಾಡಿ, ಯಾವುದೇ ಕೆಲಸ ಆರಂಭಿಸುವಾಗ ತೊಂದರೆಗಳು ಸಹಜ. ಅವುಗಳನ್ನು ಮೆಟ್ಟಿ ಕೆಲಸ ಮಾಡಬೇಕು. ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿ, ಹಣ್ಣುಗಳಿಗೆ ವಿಪರೀತ ರಾಸಾಯನಿಕ, ಕೀಟನಾಶಕ ಬಳಸುವುದರಿಂದ ಅವುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಜಾಸ್ತಿ ಎಂದರು.
ರುದ್ರೇಶ್ ಕಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಸದಸ್ಯರಾದ ಶರಣಯ್ಯ ಹಿರೇಮಠ, ಮಹೇಂದ್ರ ಒಸ್ವಾಲ್, ಸೋಮಶೇಖರ ಅಣೆಪ್ಪನವರ, ರಾಜೇಂದ್ರ ಹುನಗುಂದ, ವಿರುಪಾಕ್ಷಿ ಪತ್ತಾರ, ದೀಪಾ ದೇಸಾಯಿ, ರಂಜನಾ ಹಿರೇಮಠ, ಸುಬ್ರಹ್ಮಣ್ಯ ಹೆಬ್ಬಾರ, ಪ್ರಭಾ ಹೆಬ್ಬಾರ, ಮುಕ್ತಾ ಹುನಗುಂದ, ರಾಜೇಂದ್ರ ಭೋಸಲೆ, ರವಿ ತಡಸದ, ವಿದ್ಯಾ ತಡಸದ, ಮುನ್ನಾ ಧಣಿ ನಾಡಗೌಡ, ಹಸಿರು ತೋರಣ ಬಳಗದ ಅಧ್ಯಕ್ಷ ಬಿ.ಎಚ್.ಬಳಬಟ್ಟಿ, ಅಶೋಕ ರೇವಡಿ, ಬಸವರಾಜ ಸಿದರಡ್ಡಿ , ಮಲ್ಲಿಕಾರ್ಜುನ ಓತಗೇರಿ, ವಿಲಾಸ ದೇಶಪಾಂಡೆ ನಾಗಭೂಷಣ ನಾವದಗಿ, ರವಿ ಗೂಳಿ, ಸುರೇಶ ಕಲಾಲ, ಮತ್ತು ಲಯನ್ಸ್ ಕ್ಲಬ್, ವೀರಶೈವ ಲಿಂಗಾಯತ ಮಹಾ ಸಭಾ ಹಾಗು ಹಸಿರು ತೋರಣ ಗೆಳೆಯರ ಬಳಗ ಸದಸ್ಯರು ಪಾಲ್ಗೊಂಡಿದ್ದರು.ಲಯನ್ ಮಲ್ಲಿಕಾರ್ಜುನ ಬಿದರಕುಂದಿ ನಿರೂಪಿಸಿ, ವಂದಿಸಿದರು.