ದೇವರ ಸ್ವರೂಪದಲ್ಲಿ ಶಿಕ್ಷಕರನ್ನು ಪೂಜಿಸುವ ನಮ್ಮ ಭಾರತ ದೇಶ
ವಿಜಯಪುರ: ದೇವರ ಸ್ವರೂಪದಲ್ಲಿ ಶಿಕ್ಷಕರನ್ನು ಪೂಜಿಸುವ ದೇಶ ನಮ್ಮ ಭಾರತ ದೇಶವಾಗಿದೆ ಎಂದು ಜಮಖಂಡಿಯ ಓಲೆಮಠದ ಆನಂದ ದೇವರು ಸ್ವಾಮೀಜಿ ಹೇಳಿದರು.ನಗರದ ತೊರವಿ ರಸ್ತೆಯಲ್ಲಿರುವ ಜಿ.ಕೆ.ಪಾಟೀಲ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯದ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಶುಕ್ರವಾರ ಏರ್ಪಡಿಸಿದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಒಬ್ಬ ಆಶ್ಯಕ್ತನನ್ನು ಸಶಕ್ತನನ್ನಾಗಿ ಮಾಡುವ ಶಕ್ತಿ ಗುರುವಿಗಿದೆ. ಶಿಕ್ಷಕ, ರೈತ, ಸೈನಿಕ ಈ ಮೂವರು ದೇಶಕ್ಕೆ ಅಮೂಲ್ಯವಾದ ರತ್ನಗಳಾಗಿವೆ. ಯಾವ ಸ್ವಾರ್ಥವನ್ನು ಬಯಸದೇ ಅಕ್ಷರ ಕಲಿಸುವ ಮನೋಭಾವ ಉಳ್ಳವರಾಗಿದ್ದಾರೆ. ಗುರಿ ಮುಟ್ಟಬೇಕಾದರೆ ಗುರು ಬೇಕು. ಮಕ್ಕಳಲ್ಲಿ ಒಳ್ಳೆಯ ಶಿಕ್ಷಣ ಕೊಡಬೇಕು. ಶಿಕ್ಷಕ ಒಬ್ಬ ಇರದಿದ್ದರೆ ಏನು ಆಗಲ್ಲ. ಎಲ್ಲ ಸಾಧಕರಿಗೂ ಒಬ್ಬ ಗುರು ಇದ್ದೇ ಇರತಾನೆ. ಅಂತರಾಳದ ಜ್ಞಾನ ಪಡೆದುಕೊಳ್ಳಬೇಕು ಆ ಜ್ಞಾನ ಮಾತ್ರ ನಿನ್ನ ಸಂಪತ್ತು. ಜ್ಞಾನ ಇದ್ದರೆ ಜಗತ್ತೆ ಬಾಗುತ್ತದೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ ಶಿಕ್ಷಕರ ಸ್ಥಾನ ವಿಶೇಷವಾದುದು, ಜಗತ್ತಿಗೆ ದಿವ್ಯ ಜ್ಞಾನ ಕೊಡುವ ಕಾರ್ಯ ಶಿಕ್ಷಕರ ಮೇಲಿದೆ. ತಂದೆ ತಾಯಿ ನಂತರದ ಸ್ಥಾನ ಗುರುವಿಗಿದೆ. ದೇವರ ಸಮಾನರಾದ ಶಿಕ್ಷಕ ಎಲ್ಲರಿಗಿಂತ ಹೆಚ್ಚಿನ ಸ್ಥಾನ ಸಮಾಜದಲ್ಲಿ ಹೊಂದಿದ್ದಾರೆ. ಒಬ್ಬ ವ್ಯಕ್ತಿಯನ್ನು ವಿಶೇಷ ಗೌರವಾನ್ವಿತ ವ್ಯಕ್ತಿಯನ್ನಾಗಿ ರೂಪಿಸುವ ಸಾಮರ್ಥ್ಯ ಶಿಕ್ಷಕರಿಗೆ ಮಾತ್ರ ಇದೆ ಎಂದರು.ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ದಿಗೆ ಕರ್ತವ್ಯ ನಿರ್ವಹಿಸುವವರಾಗಿದ್ದಾರೆ. ಶಿಕ್ಷಕರು ಸದಾ ತಾಯಿ ಹೃದಯದವರಾಗಿದ್ದಾರೆ. ನಮ್ಮ ಗ್ರಾಮೀಣ ಮಕ್ಕಳ ಬದುಕು ಕಟ್ಟಿಕೊಡುವವರಾಗಿದ್ದಾರೆ. ನಿಮ್ಮ ಕಾರ್ಯ ಮೆಚ್ಚುವಂತದ್ದು, ಬಬಲೇಶ್ವರ, ತಿಕೋಟಾ ಹಾಗೂ ವಿಜಯಪುರ ಗ್ರಾಮೀಣ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು ಮಕ್ಕಳ ಹಿತ ಬಯಸಿ ಕೆಲಸ ಮಾಡುತ್ತಾರೆ.
ಸಂಬಳಕ್ಕಾಗಿ ಕೆಲಸ ಮಾಡದೆ ಮಕ್ಕಳ ಹಿತಕೊಸ್ಕರ ಕರ್ತವ್ಯ ನಿರ್ವಹಿಸುತ್ತಾರೆ ಎಂದರು.ಪ್ರಾಸ್ಥಾವಿಕವಾಗಿ ಮಾತನಾಡಿದ ಬಿಇಓ ಬಸವರಾಜ ತಳವಾರ ಶಿಕ್ಷಕ ವೃತ್ತಿಗಿಂತ ಪವಿತ್ರ ವೃತ್ತಿ ಬೆರೊಂದಿಲ್ಲ. ಭೂಮಿಗೆ ಜೀವ ತುಂಬಿಕೊಂಡು ಬಂದ ಮಗುವಿನ ಭವಿಷ್ಯ ನಿರ್ಮಾಣ ಮಾಡುವ ಕಾರ್ಯ ಶಿಕ್ಷಕರ ಮೇಲಿದೆ. ಆ ಮಗು ಸುಭದ್ರ ಬದುಕು ಕಟ್ಟಿಕೊಳ್ಳಲು ಉತ್ತಮ ಶಿಕ್ಷಣವನ್ನು ನೀಡಬೇಕು. ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕಾರ್ಯ ನಾವು ಮಾಡಬೇಕಾಗಿದೆ ಎಂದರು.
ತಹಶಿಲ್ದಾರ ಪ್ರಶಾಂತ ಚನಗೊಂಡ, ಸಚಿವರ ಆಪ್ತ ಸಹಾಯಕ ಸಂತೋಷ ಲೋಕುರೆ ಮಾತನಾಡಿದರು.ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಪುಲೆ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪಾರ್ಚನೆ ಮಾಡಲಾಯಿತು. ವೇದಿಕೆಯೂ ಗ್ರಾಮೀಣ ಸೊಗಡಿನ ಹಸಿರು ತೋರಣಗಳಿಂದ ಶೃಂಗಾರಗೊಂಡಿತ್ತು.ತಿಕೋಟಾ ತಾಲ್ಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ.ಮೊಸಲಗಿ ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ಅರ್ಜುನ ಲಮಾಣಿ, ಪ್ರಪುಲಕುಮಾರ ಮಂಗನವರ, ಶಿವಗೊಂಡ ಬಿರಾದಾರ, ಎಂ.ಕೆ.ಬಿರಾದಾರ, ಎ.ಬಿ.ಧಡಕೆ, ನೀಲಾ ಇಂಗಳೆ, ಬಿ.ಎಸ್.ಮಠ, ವಸಂತ ನಾಯಕ, ಸಂದೀಪ ದೇಶಪಾಂಡೆ, ಹಣಮಂತ ಕುಡಚಿ, ಎಂ.ಎನ್.ನಾಯಕ, ರಮೇಶ ಜಾಧವ, ಚನ್ನಯ್ಯ ಮಠಪತಿ, ಮುತ್ತು ಪುಜಾರಿ, ಅಶೋಕ ಭಜಂತ್ರಿ, ಉದಯ ಕೊಟ್ಯಾಳ, ಅಕ್ಕೂಬಾಯಿ ನಾಯಕ, ಎಂ.ಎಸ್ ಟಕ್ಕಳಕಿ, ಹಣಮಂತ ಕೊಣದಿ, ಸಿ.ಟಿ. ಜತ್ತಿ, ಪುಷ್ಪಾ ಗಚ್ಚಿನಮಠ, ಅಶೋಕ ಚನಬಸಗೋಳ, ಅಶೋಕ ಬೂದಿಹಾಳ, ರಾಜಶೇಖರ ಬನಸೋಡೆ, ಎನ್.ಜಡ. ಹೊನಸೂರೆ, ಮಲ್ಲಿಕಾರ್ಜುನ ಮಾದರ, ಹುಸೇನ್, ಗಜಾನಂದ ಜುಂಜರವಾಡ ಇದ್ದರು.


















