ಮುದ್ದೇಬಿಹಾಳ: ದೈಹಿಕ, ಮಾನಸಿಕ ಆರೋಗ್ಯಕ್ಕೆ ಪ್ರತಿಯೊಬ್ಬರು ಶಿಸ್ತು, ಏಕಾಗ್ರತೆಯಿಂದ ಯೋಗದ ವಿವಿಧ ಆಸನಗಳನ್ನು ನಿತ್ಯವು ನಿಯಮಿತವಾಗಿ ನಿಯಮ ಬದ್ಧ ಅಭ್ಯಾಸ ಮಾಡುವದನ್ನು ರೂಢಿಸಿಕೊಳ್ಳಬೇಕು ಎಂದು ಕೆಬಿಜೆಎನ್ಎಲ್ ಆಣೆಕಟ್ಟು ವಲಯದ ಮುಖ್ಯ ಇಂಜನೀಯರ ಆರ್. ಮಂಜುನಾಥ ಹೇಳಿದರು.
ತಾಲ್ಲೂಕಿನ ನಾಲತವಾಡ ಸಮೀಪದ ನಾರಾಯಣಪುರ ಗ್ರಾಮದ ಜೆ.ಎಸ್ ದೇಶಮುಖ ಸಂಯುಕ್ತ ಪ್ರೌಢ ಶಾಲೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ೧೧ನೇ ವರ್ಷದ ಅಂತರಾಷ್ಟೀಯ ಯೋಗ ದಿನಾಚರಣೆ ಕರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜನಕೋಳೂರ ಪಿಎಚ್ಸಿ ಆಯುಷ್ ವೈದ್ಯ ಡಾ| ಮೋಹನ್ ಕೋರಿ ಮಾತನಾಡಿ, ವಿದ್ಯಾರ್ಥಿಗಳು ದೈನಂದಿನ ಬದುಕಿನಲ್ಲಿ ಯೋಗ, ಧ್ಯಾನವನ್ನು ರೂಢಿಸಿಕೊಂಡು ಹೋಗಬೇಕು, ಶಿಕ್ಷಣ ಜ್ಞಾನದ ಜೊತೆಗೆ ಒಳ್ಳೆಯ ಆರೋಗ್ಯ ಹೊಂದುವದು ಇಂದಿನ ಅಗತ್ಯತೆಯಾಗಿದೆ ಎಂದರು.
ಈ ವೇಳೆ ಸಮಾಜ ಸೇವಕ ಹಾಗೂ ಜೆಡಿಎಸ್ ಹಿರಿಯ ಮುಖಂಡ ಬಸನಗೌಡ ಬಿ ಪಾಟೀಲ (ಮುರಾಳ) ಅವರು ಮಾತನಾಡಿ, ಒತ್ತಡದ ಜೀವನದಲ್ಲಿ ಸಮತೋಲಿತ ಆಹಾರ ಸೇವನೆ, ಓದಿನ ಜೊತೆಗೆ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು, ಇದು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ಸಾನಿದ್ಯ ವಹಿಸಿದ್ದ ಅರಸನಾಳದ ಗುರುಸ್ವಾಮಿ ಹಿರೇಮಠ ಶ್ರೀಗಳು, ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಂಗಾಧರ ಬಿರಾದಾರ,ಯುವ ಮುಖಂಡ ರಮೇಶ ಕೋಳುರ ಮಾತನಾಡಿ ಯೋಗ ದಿನಾಚರಣೆ ಜೂನ್.೨೧ ಕ್ಕೆ ಸೀಮಿತವಾಗಿಸದೆ ದಿನನಿತ್ಯವು ಯೋಗಾಭ್ಯಾಸಕ್ಕೆ ಸಮಯ ಮೀಸಲಿಡಬೇಕು ಆಗ ದೈಹಿಕವಾಗಿ ಸದೃಢರಾಗಬಹುದು ಜತೆಗೆ ಮನಸ್ಸು ಪರಿಶುದ್ದವಾಗುತ್ತದೆ, ಭಾರತ ಮೂಲದ ಪುರಾತನ ಯೋಗ ಪದ್ದತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದುವಂತೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಹಿರಿದು, ಇಡೀ ಜಗತ್ತು ಯೋಗ ದಿನವನ್ನು ಆಚರಿಸುವಂತಾಗಿದೆ ಎಂದು ಹೇಳಿದರು.
ಯೋಗ ಶಿಕ್ಷಕ ಶಂಕರದಡ್ಡಿ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿ ಅವುಗಳ ಪ್ರಯೋಜನ ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಗೀತಾ ಸಜ್ಜನ್, ಬಸವರಾಜ ಡೊಳ್ಳಿ, ಗುರು, ಕಾಶಿಪತಿ ಸೇರಿದಂತೆ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಸೇರಿದಂತೆ ಭಾಗವಹಿಸಿದ್ದರು.