ಆಸಕ್ತಿಯಿಂದ ಸಾಧಕನಾಗಲು ಸಾಧ್ಯ.! ಸಾಹಿತಿ ಶಿಕ್ಷಕ ಕೋರಿ
ಇಂಡಿ-ಜೀವನದಲ್ಲಿ ಮನುಷ್ಯನಾದವನು ಶೈಕ್ಷಣಿಕವಾಗಿ ಯಶಸ್ಸಿಯಾಗಿ ಸಾಧಕನಾಗಬೇಕಾದರೆ ಮನುಷ್ಯನಿಗೆ ಆಸಕ್ತಿ,ಏಕಾಗ್ರತೆ,ಮನಃಶಾಂತಿ ಬಹಳಷ್ಟು ಮುಖ್ಯ ಎಂದು
ಸಾಹಿತಿ ಶಿಕ್ಷಕ ದಶರಥ ಕೋರಿಯವರ ತಿಳಿಸಿದರು.
ಇಂಡಿ ನಗರದ ಶಾಂತಿನಿಕೇತನ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯರ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ದಕ್ಷಿಣ ಭಾರತದ ರಾಮೇಶ್ವರದ ಕಡಲ ತೀರದಲ್ಲಿ ಹಾರುವ ಹಕ್ಕಿಗಳನ್ನು ಆಕಾಶ ಮಾರ್ಗದಲ್ಲಿ ಸಾಗುವ ವಿಮಾನವನ್ನು ನೋಡಿ ಕನಸುಗಳನ್ನು ಕಟ್ಟಿಕೊಂಡ ಪುಟ್ಟ ಬಾಲಕ ಆಸಕ್ತಿಯಿಂದಲೇ ಭಾರತದ ಪರಮಾಣು ಸಿಡಿತೆಲೆ ಹೊತ್ತುಯ್ಯುವ ರಾಕೆಟ್ ಗಳನ್ನ ತನ್ನ ಅವಿಷ್ಕಾರದಿಂದ ಕಂಡು ಹಿಡಿದು ಹೊಸ ಐತಿಹಾಸಿಕ ಮೈಲುಗಲ್ಲನ್ನು ಸ್ಥಾಪಿಸಿದ, ಅವರು ಬೇರಾರು ಅಲ್ಲ ನಮ್ಮ ದೇಶದ ಖ್ಯಾತ ವಿಜ್ಞಾನಿ ಭಾರತ ರತ್ನ ಡಾ. ಎ.ಪಿ.ಜಿ ಅಬ್ದುಕಲಾಮ್ ಎಂದರು.
ಜಿಜ್ಞಾಸೆ,ಆಸಕ್ತಿ,ಅನ್ವೇಷಣೆ,ಸಂಶೋಧನಾ ಪ್ರವೃತ್ತಿಯಿಂದ ಪುರಾಣ ಕಾಲದ ಉದ್ಧಾಲಕ ಮುನಿಯ ಮಗ ನಚೀಕೇತ ಭೂಲೋಕದಿಂದ ಯಮಪುರಿಗೆ ಹೋಗಿ ಯಮಧರ್ಮನ ಜೊತೆ ಮೃತ್ಯ-ಆತ್ಮಗಳ ಬಗ್ಗೆ ಸಂವಾದ ಮಾಡಿ ಜಗತ್ಪ್ರಸಿದ್ದನಾಗಿ ಪ್ರಶಂಸೆಗೊಳಪಟ್ಟನು.ಹಾಗೆ ನ್ಯೂಟನ್ ಗುರುತ್ವಾಕರ್ಷಣೆಯ ಸೇಬಿನ ಘಟನೆಯ ಮುನ್ನವೆ ಬಾಲ ಹನುಮ ಸೂರ್ಯನನ್ನು ಕಿತ್ತಳೆ ಹಣ್ಣು ಎಂದು ನಭೋಮಂಡಲಕ್ಕೆ ಹಾರಿ ಅದನ್ನು ಹಿಡಿಯಲು ಹೋಗಿ ಬ್ರಹ್ಮನಿಂದ ವರ ಪಡೆದುದ್ದು ಜಿಜ್ಞಾಸೆಯ ಫಲ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ನಿರ್ದೇಶಕರಾದ ಯಮುನಾಜಿ ಸಾಳುಂಕೆಯವರು ಶಾಲಾ ಮಕ್ಕಳಿಗೆ ರಾಷ್ಟ್ರಾಭಿಮಾನ ನಾಡು-ನುಡಿ ಸಂಸ್ಕೃತಿಯನ್ನು ವೀರ ಪುರುಷರ ಯಶೋಗಾಥೆಯನ್ನು ಮೈಮನಗಳಲ್ಲಿ ಅಳವಡಿಸಿಕೊಂಡು ತಾಯಿ ಭಾರತ ಮಾತೆಯ ಕೀರ್ತಿ ಪತಾಕೆ ಜಗದಗಲ ಮುಗಿಲಗಲ ಹಾರಿಸಬೇಕೆಂದು ಕರೆ ನೀಡಿದರು.
ಉದ್ಘಾಟಕರಾಗಿ ಆಗಮಿಸಿದ ಪ್ರತೀಕ ಗೌಡ ಬಿರಾದಾರವರು ಈ ಸಂದರ್ಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಗುರುಗಳು ಮಾರ್ಗದರ್ಶನದಲ್ಲಿ ಸಾಗಿದರೆ ಗುರಿ ಮಟ್ಟಲು ಸಾಧ್ಯವೆಂದರು.
ಈ ಶಾಲಾ ವಾರ್ಷಿಕೊತ್ಸವದ ಸಮಾರಂಭದಲ್ಲಿ ಊರಿನ ಗಣ್ಯರಾದ ಪ್ರತೀಕಗೌಡ ಬಿರಾದಾರ ನ್ಯಾಯವಾದಿಗಳು, ವ್ಯಾಪರಸ್ಥರಾದ ಮುರಘೇಂದ್ರ ಸುರಪುರ,ಕೇದಾರ ಕಕ್ಕಳಮೇಲಿ ಎಸ್ ಆರ್ ಪಾಟೀಲ, ಆಡಳಿತ ಮಂಡಳಿಯ ನಿರ್ದೇಶಕರಾದ ನಿತಿನ ಡಿ ಪೊದ್ದಾರ ಶಾಲಾ ಮುಖ್ಯ ಗುರುಗಳಾದ ಲಚ್ಯಾಣ ಗುರುಗಳು ಹಾಗೂ ಶಾಲಾ ಸಿಬ್ಬಂದಿಗಳು ಪಾಲಕರು ಊರಿನ ಜನರು ಉಪಸ್ಥಿತರಿದ್ದರು.