ಜಲಧೂತ ಜಾಗೃತಿ ಅಭಿಯಾನ ಜಲ ಸಂರಕ್ಷಣೆಗೆ ರಚನಾತ್ಮಕ ಕ್ರಮಗಳ ದಿಟ್ಟ ಪ್ರಯತ್ನ ಅಗತ್ಯ-ಸಂತೋಷ ಬಂಡೆ
ಇಂಡಿ: ನೀರು ಅತ್ಯಮೂಲ್ಯ ಸಂಪತ್ತು. ಅದರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ನದಿ, ಕೆರೆ, ಬಾವಿಯ ನೀರನ್ನು ಸಂರಕ್ಷಿಸುವ ಜತೆಗೆ ಮಳೆ ನೀರು ಕೊಯ್ಲು ಮೂಲಕ ಮಳೆ ನೀರನ್ನು ಸಂಗ್ರಹಿಸಲು ರಚನಾತ್ಮಕ ಕ್ರಮಗಳ ದಿಟ್ಟ ಪ್ರಯತ್ನ ಅಗತ್ಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್,ಯುಬಿಎಸ್ ಶಾಲೆಯಲ್ಲಿ ಶನಿವಾರದಂದು ಹಮ್ಮಿಕೊಂಡ ಜಲಧೂತ ಜಾಗೃತಿ ಅಭಿಯಾನದ ನಿಮಿತ್ತ ‘ನೀರಿನ ಸಂರಕ್ಷಣೆ-ನಮ್ಮ ಹೊಣೆ’ ಕುರಿತು ಮಾತನಾಡಿದರು.
ಜಲ ಮರುಪೂರಣ ವ್ಯವಸ್ಥೆ, ಬಾವಿ, ಕೆರೆ, ಕಟ್ಟೆಗಳ ಹೂಳೆತ್ತುವುದು, ಬಾಂದಾರ, ಇಂಗುಗುಂಡಿಗಳ ನಿರ್ಮಾಣದಂತಹ ಕ್ರಮಗಳಿಂದ ಅಮೂಲ್ಯ ಸಂಪತ್ತಾದ ನೀರನ್ನು ಸಂರಕ್ಷಿಸಬೇಕು ಮತ್ತು ಅದರ ಸದ್ಬಳಕೆಯ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ನಾಳೆಯ ಅಭಾವ ತಪ್ಪಿಸಲು ಅತ್ಯಮೂಲ್ಯವಾದ ನೀರನ್ನು ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸಿ-ಮುಂಬರುವ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯತತ್ಪರರಾಗಬೇಕಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕಿ ವ್ಹಿ ವೈ ಪತ್ತಾರ ಮಾತನಾಡಿ, ನೀರು ಮುಗಿದು ಹೋಗುವ ಸಂಪನ್ಮೂಲ. ಸಕಲ ಜೀವಿಗಳಿಗೂ ನೀರು ಅತ್ಯಗತ್ಯ. ಮಾನವ ವೈಜ್ಞಾನಿಕವಾಗಿ ಬೆಳೆದರೂ ಸಹಿತ ನೀರನ್ನು ಸೃಷ್ಟಿಸುವ ತಂತ್ರಜ್ಞಾನದ ಆವಿಷ್ಕಾರ ಮಾಡಿಲ್ಲ. ನೀರಿನ ಮಿತ ಬಳಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸಗಳು ನಿರಂತರವಾಗಿರಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಜೀವ ಜಗತ್ತಿನ ಎಲ್ಲ ಹಂತಗಳಲ್ಲಿ ನೀರಿನ ಪಾತ್ರ ಬಹುಮುಖ್ಯ. ಪಶು-ಪಕ್ಷಿಗಳಿಗೆ, ದನ-ಕರುಗಳಿಗೆ, ಬೆಳೆಗಳಿಗೆ ಜೀವನಾಡಿಯಾದ ನೀರನ್ನು ರಕ್ಷಿಸುವುದೆಂದರೆ, ಜೀವ ಸಂಕುಲ ರಕ್ಷಿಸಿದಂತೆ ಎಂದರು.
ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕರಾದ ಜೆ ಎಂ ಪತಂಗಿ, ಎಸ್ ಎಂ ಪಂಚಮುಖಿ, ಎಸ್ ಡಿ ಬಿರಾದಾರ, ಸಾವಿತ್ರಿ ಸಂಗಮದ, ಎಸ್ ಪಿ ಪೂಜಾರಿ, ಎಸ್ ಎನ್ ಡಂಗಿ, ಜೆ ಸಿ ಗುಣಕಿ, ಎಫ್ ಎ ಹೊರ್ತಿ, ಎಸ್ ವ್ಹಿ ಬೇನೂರ, ಶಾಂತೇಶ ಹಳಗುಣಕಿ, ಸುರೇಶ ದೊಡ್ಯಾಳಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಕ್ಕಳು ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.



















