ಮುದ್ದೇಬಿಹಾಳ:ಸ್ವಾತಂತ್ರ ಬಂದ ನಂತರ ಪ್ರಥಮ ಬಾರಿಗೆ ಜನಗಣತಿಯೊಂದಿಗೆ ಜಾತಿಗಣತಿ ತೀರ್ಮಾನವನ್ನು ಸಮಸಮಾಜ ನಿರ್ಮಾಣಕ್ಕೆ ಮುನ್ನಡಿ ಬರೆದಿದ್ದ ಮಹಾಮಾನವತಾವಾದಿ ಬಸವಣ್ಣನವರ ಜಯಂತ್ಯೋತ್ಸವದಂದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಸ್ವೀಕರಿಸಿರುವುದು ಐತಿಹಾಸಿಕ ಘಟನೆಯಾಗಿದ್ದು ಸಮಸ್ತ ಹಿಂದು ಸಮಾಜ ಸ್ವಾಗತಿಸುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದು ಸಮಾಜದಲ್ಲಿರುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಸಮಾನತೆ ತೊಡೆದುಹಾಕಲು, ಸಮಾಜದ ಪ್ರತಿಯೊಬ್ಬ ವ್ಯಕ್ತಿ ಸರ್ವ ರಂಗದಲ್ಲೂ ಸಮಾನವಾಗಿ ಬೆಳೆಯುವಂತಾಗಲು, ಹಿಂದು ಸಮಾಜದಲ್ಲಿನ ಅಶಕ್ತರನ್ನು ಸಶಕ್ತರನ್ನಾಗಿಸಲು ವೈಜ್ಞಾನಿಕ, ಸಂವಿಧಾನದ ಕಾನೂನಾತ್ಮಕ ಮನ್ನಣೆ ಇರುವ ಗಣತಿ ಹೆಚ್ಚಿನ ಬಲ ತುಂಬಲಿದೆ ಎಂದರು.
ಹಿಂದು ಸಮಾಜದಲ್ಲಿನ ಜಾತಿ ವ್ಯವಸ್ಥೆಯ ಲಾಭಕ್ಕಾಗಿ ಜಾತಿ, ಉಪಜಾತಿಗಳ ಸಮೀಕ್ಷೆ ನೆಪದಲ್ಲಿ ಹಿಂದುಗಳ ಮಧ್ಯೆ ವ್ಯತ್ಯಾಸ ತಂದಿಟ್ಟು ಒಡಕುಂಟು ಮಾಡುವ ಕುತಂತ್ರ ರಾಜಕೀಯ ನೀತಿಯನ್ನು ಕಾಂಗ್ರೆಸ್ ಅನುಸರಿಸಲು ಪ್ರಾರಂಭಿಸಿತ್ತು. ರಾಹುಲ್ಗಾಂಧಿ ಭಾಷಣದಿಂದ ಇದೆಲ್ಲ ಅರ್ಥವಾಗುತ್ತದೆ. ಇವರು ಹಿಂದು ಸಮಾಜದಲ್ಲಿನ ಜಾತಿ ಅಸ್ತçವನ್ನು ರಾಜಕೀಯಕ್ಕೆ ಬಳಸಿಕೊಂಡರು. ಡಾ|ಬಿ.ಆರ್.ಅಂಬೇಡ್ಕರ್ ಜಾತಿ ಪದ್ಧತಿಯ ಅನಿಷ್ಠಕ್ಕಾಗಿ ಹೋರಾಟಕ್ಕೆ ಧುಮುಕಿ ಸಮಸಮಾಜ ನಿರ್ಮಾಣದ ಆಧುನಿಕ ಭಾರತದ ಪಿತಾಮಹ ಎನ್ನಿಸಿಕೊಂಡರು. ಅಂಬೇಡ್ಕರ್ ಅವರ ಹಾದಿಯಲ್ಲಿ ಮೋದಿ ಸಾಗುತ್ತಿರುವ ಸಂಕೇತ ಇದಾಗಿದೆ ಎಂದರು.
ಪ್ರಧಾನಿಗಳಾಗಿದ್ದ ಜವಾಹರಲಾಲ ನೆಹರು, ಇಂದಿರಾಗಾಂಧಿ, ರಾಜೀವ್ಗಾಂಧಿ ಅವರು ಜನಗಣತಿಯೊಂದಿಗೆ ಜಾತಿಗಣತಿ ವಿರೋಧಿಸಿದ್ದರು. ಆದರೆ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಮಂಡಲ್ ಆಯೋಗ ಅಸ್ತಿತ್ವಕ್ಕೆ ಬಂದು ಹಿಂದುಳಿದವರಿಗೆ ನ್ಯಾಯ ಕೊಡಿಸುವ ಕೆಲಸವಾಗಿತ್ತು. ಸಿಂಗ್ ಅವರ ನಂತರ ಮೋದಿ ಅವಧಿಯಲ್ಲಿ ಆಯೋಗಕ್ಕೆ ಕಾನೂನುಬದ್ದ ಗೌರವ ಸಿಕ್ಕಿತು ಎಂದರು.
೨೦೧೧ರಲ್ಲಿ ಮನಮೋಹನ್ಸಿಂಗ್ ಪ್ರಧಾನಿಯಾಗಿದ್ದಾಗ ಜನಗಣತಿಯಲ್ಲಿ ಜಾತಿ ಸೇರಿಸಲಾಯಿತಾದರೂ ಕಾಂಗ್ರೆಸ್ ಅಧಿಕಾರದಲ್ಲಿದ್ದುದರಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ದತ್ತಾಂಶ ಬಹಿರಂಗಗೊಳಿಸಲಿಲ್ಲ. ಇದು ಹಿಂದು ಸಮಾಜ, ಹಿಂದುಳಿದ ವರ್ಗದವರಿಗೆ ಮಾಡಿರುವ ಬಹಳ ದೊಡ್ಡ ದ್ರೋಹ. ದೇಶದ ಹಿಂದುಗಳು ಒಟ್ಟಾಗತೊಡಗಿದ್ದಾರೆ ಅನ್ನೋದು ಗೊತ್ತಾದ ಮೇಲೆ ಇತ್ತೀಚೆಗೆ ರಾಹುಲ್ಗಾಂಧಿ ಜಾತಿಗಣತಿ ಪ್ರಸ್ತಾಪ ಮಾಡತೊಡಗಿದ್ದಾರೆ ಎಂದರು.
ಗಣತಿ ಬೇರೆ, ಸಮೀಕ್ಷೆ ಬೇರೆ. ಹಿಂದು ಸಮಾಜದಲ್ಲಿ ಕಾಯಕ ಆಧಾರಿತ ಅನೇಕ ಉಪಪಂಗಡಗಳಿವೆ. ಗಣತಿ ನಡೆದಾಗ ಮಾತ್ರ ನೈಜತೆ ಹೊರಬರುತ್ತದೆ. ಆದರೆ ಅಂದಾಜಿನಿಂದ ಕೂಡಿರುವ, ನಿಖರತೆ ಇಲ್ಲದ ಸಮೀಕ್ಷೆಯಿಂದ ಇದು ಸಾಧ್ಯವಿಲ್ಲ. ಕಾಂಗ್ರಸ್ನವರು ಸಮೀಕ್ಷೆಯನ್ನು ತಮಗೆ ಬೇಕಾದಂತೆ ಬಳಸಿಕೊಂಡರು. ಅಲ್ಪಸಂಖ್ಯಾತರ ತುಷ್ಟೀಕರಣ, ಹಿಂದು ಸಮಾಜ ಒಡೆದು ರಾಜಕೀಯವಾಗಿ ಬಳಸಿಕೊಳ್ಳುವುದು ಕಾಂಗ್ರೆಸ್ಸಿಗರ ಉದ್ದೇಶವಾಗಿದೆ. ಹಿಂದುಳಿದ ಸಮಾಜದವರಿಗೆ ನ್ಯಾಯ ಕೊಡುವ ದೂರದೃಷ್ಟಿ ಇವರಿಗಿಲ್ಲ. ಜಾತಿಗಣತಿಗೆ ತಮ್ಮ ಸಮೀಕ್ಷೆ ಆಧಾರವಾಗಿಟ್ಟುಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಹೇಳಿರುವುದು ಹಾಸ್ಯಾಸ್ಪದ. ಕಾಂಗ್ರೆಸ್ಸಿಗರ ಸಮೀಕ್ಷೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಆದರೆ ಮೋದಿ ಅವರ ಅಸಮಾನತೆ ಹೋಗಲಾಡಿಸುವ ಜನಗಣತಿಯೊಂದಿಗೆ ಜಾತಿಗಣತಿ ತೀರ್ಮಾನ ಜನಪರವಾಗಿದ್ದು ಸಂವಿಧಾನದ, ಕಾನೂನಿನ ಮನ್ನಣೆ ಇರುತ್ತದೆ ಎಂದರು.
ಈ ವೇಳೆ ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್, ಕಾರ್ಯದರ್ಶಿ ಸಂಜು ಬಾಗೇವಾಡಿ, ಮುಖಂಡರಾದ ಮುನ್ನಾಧಣಿ ನಾಡಗೌಡ, ಎಂ.ಆರ್. ನಾಡಗೌಡ ಬಸರಕೋಡ, ಕೆಂಚಪ್ಪ ಬಿರಾದಾರ, ಪ್ರಭು ಕಡಿ, ಸೋಮನಗೌಡ ಬಿರಾದಾರ, ಎಂ.ಆರ್.ಪಾಟೀಲ ವಕೀಲರು, ಹರೀಶ ನಾಟೀಕಾರ, ಗೌರಮ್ಮ ಹುನಗುಂದ, ಶಂಕರಗೌಡ ಶಿವಣಗಿ, ಪರಶುರಾಮ ಮುರಾಳ, ರಾಜು ಬಳ್ಳೊಳ್ಳಿ, ಅಶೋಕ ಚಿನಿವಾರ, ರಾಜಶೇಖರ ಹೊಳಿ, ಶೇಖರ ಢವಳಗಿ, ಕಾವೇರಿ ಕಂಬಾರ, ಪ್ರೀತಿ ಕಂಬಾರ, ಹಣಮಂತ ನಲವಡೆ, ಅನೀಲ ರಾಠೋಡ, ಅಶೋಕ ರಾಠೋಡ, ನಿಖಿಲ್ ಮಲಗಲದಿನ್ನಿ, ಸಿದ್ದು ಹಿರೇಮಠ, ರವಿ ಹವಾಲ್ದಾರ, ಮಂಜುನಾಥ ಚಲವಾದಿ, ಲಕ್ಷö್ಮಣ ಬಿಜ್ಜೂರ, ಪವನ್ ಲಮಾಣಿ ಸೇರಿದಂತೆ ಉಪಸ್ಥಿತರಿದ್ದರು.
೧೯೪೭ರಿಂದ ಜಮ್ಮು ಕಾಶ್ಮೀರ ಹೊತ್ತಿ ಉರಿಯುತ್ತಿತ್ತು. ಮೋದಿಯವರು ಪ್ರಧಾನಿಯಾದ ೧೦ ವರ್ಷಗಳಲ್ಲಿ ಅಲ್ಲಿ ಶಾಂತಿ ನೆಲೆಸಿದೆ. ಅಲ್ಲಿನ ಸ್ಥಳೀಯರು ಉಗ್ರರಿಗೆ, ಪ್ರತ್ಯೇಕವಾದಿಗಳಿಗೆ ಬೆಂಬಲಿಸುವುದನ್ನು ಕಡಿಮೆ ಮಾಡಿದ್ದಾರೆ. ಪೆಹಲ್ಗಾಮ್ ಘಟನೆ ಕುರಿತು ಅಲ್ಲಿನ ಸಿಎಂ ಓಮರ್ ಅಬ್ದುಲ್ಲಾ ವಿಧಾನಸಭೆಯಲ್ಲಿ ಆಡಿರುವ ಹೃದಯಾಂತರಾಳದ ಮಾತುಗಳು ಮನ ಕಲಕುವಂತಿದ್ದು ಭಾರತೀಯರು ಮೆಚ್ಚುವ ರೀತಿಯಲ್ಲಿವೆ. ಶೇ.೯೫ ಪ್ರಮಾಣದಲ್ಲಿರುವ ಮುಸಲ್ಮಾನರು ಬೀದಿಗಿಳಿದು ಘಟನೆ ಖಂಡಿಸಿದ್ದಾರೆ. ಉಗ್ರರಿಂದ ಹತ್ಯೆಗೀಡಾದ ೨೬ ಹಿಂದುಗಳಿಗೆ ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಿಸಿದ್ದಾರೆ.
ಮೋದಿಜಿ ಭಯೋತ್ಪಾದಕತೆ ಮಟ್ಟಹಾಕಿ ಪಾಕಿಸ್ತಾನ ಉಗ್ರರ ಸದೆಬಡಿಯಿರಿ ನಿಮ್ಮ ಜೊತೆ ನಾವಿದ್ದೇವೆ ಎಂದು ಬೆಂಬಲಿಸಿದ್ದಾರೆ. ಇದು ಮೋದಿ ನಾಯಕತ್ವದಲ್ಲಿ ಆಗಿರುವ ಬದಲಾವಣೆ. ಅಲ್ಲಿನ ಮುಸ್ಲೀಮರಲ್ಲಿ ಮೋದಿ ಬಗ್ಗೆ ಇರುವ ನಂಬಿಕೆ, ವಿಶ್ವಾಸ ತೋರಿಸುತ್ತದೆ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿರುವುದನ್ನು ಈ ದೇಶದ ಮುಸ್ಲೀಮರು ಅರಿತುಕೊಳ್ಳಬೇಕು. ಪಾಕಿಸ್ತಾನದ ಭಯೋತ್ಪಾದಕ ಘಟನೆ ಖಂಡಿಸಬೇಕು. ಮೋದಿ ಪರ ನಿಲ್ಲುವ ಅಭಿಪ್ರಾಯಗಳು ಬೀದಿಯಲ್ಲಿ ವ್ಯಕ್ತವಾಗಬೇಕು. ಇದು ಹಿಂದು, ಮುಸ್ಲೀಮರ ಒಗ್ಗಟ್ಟು ತೋರಿಸಲು ಇರುವ ಸದವಕಾಶ. ಸಿದ್ದರಾಮಯ್ಯ, ಸಂತೋಷ ಲಾಡ್, ಬಿ.ಕೆ.ಹರಿಪ್ರಸಾದ, ಪ್ರಿಯಾಂಕ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರಂಥವರ ಮಾತು ಕೇಳಲು ಹೋಗಬೇಡಿ. ಭಾರತದ ಕಾಂಗ್ರೆಸ್ಸು ಈಗ ಪಾಕಿಸ್ತಾನಿಯರ ಕಾಂಗ್ರೆಸ್ಸಾಗಿ ಬದಲಾಗುತ್ತಿದೆ. ಸಿದ್ದರಾಮಯ್ಯನವರಂತಹ ಹಿರಿಯ ರಾಜಕಾರಣಿಯ ಹೇಳಿಕೆಗಳು ದೇಶದ್ರೋಹಕ್ಕೆ ಸಮನಾದದ್ದಾಗಿದೆ. ಶಾಸಕರಾಗುವಾಗ ತೆಗೆದುಕೊಳ್ಳುವ ಪ್ರತಿಜ್ಞೆ ನೆನಪಲ್ಲಿಟ್ಟುಕೊಂಡು ಸಚಿವ, ಶಾಸಕರು ಮಾತನಾಡಬೇಕು ಎಂದು ನಡಹಳ್ಳಿ ಹೇಳಿದರು.
ಇತ್ತೀಚೆಗೆ ಮುದ್ದೇಬಿಹಾಳದಲ್ಲಿ ಪೊಲೀಸ್ ವ್ಯವಸ್ಥೆ ಹಾಳಾಗಿದೆ. ಪಿಎಸೈ ಅತ್ಯಂತ ಕೆಳಮಟ್ಟದಲ್ಲಿ ನಡೆದುಕೊಳ್ಳುತ್ತಿದ್ದಾರೆ. ಅತ್ಯಾಚಾರ, ಆತ್ಮಹತ್ಯೆ, ಕೊಲೆ ಪ್ರಕರಣಗಳಲ್ಲಿ ಇವರ ನಡವಳಿಕೆ ಅಯೋಗ್ಯತನದಿಂದ ಕೂಡಿದೆ. ಮಟ್ಕಾ, ಇಸ್ಪೇಟ್ ಕ್ಲಬ್, ಅಕ್ರಮ ಮದ್ಯ, ಮರಳು ಮಾಫಿಯಾ ನಿಯಂತ್ರಿಸಲಾಗುತ್ತಿಲ್ಲ. ಓಸಿ ಆಡುವವರಿಗೆ, ಕೊಲೆಗಡುಕರಿಗೆ, ಕಳ್ಳರಿಗೆ ಬೆಂಬಲಿಸುವAತೆ ನಡೆದುಕೊಳ್ಳುತ್ತ ಸರ್ವಾಧಿಕಾರಿಯಂತಾಗಿದ್ದಾರೆ. ಎಸ್ಪಿಯವರು ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಮತ್ತು ಈಗಿರುವ ಪಿಎಸೈ ಹಿಂದಕ್ಕೆ ಕರೆಸಿಕೊಂಡು ಬೇರೊಬ್ಬ ದಕ್ಷರನ್ನು ನಿಯೋಜಿಸಬೇಕು. ಸ್ಥಳೀಯ ಶಾಸಕರು ಇಂಥವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ ನಡಹಳ್ಳಿಯವರು ತಾಲೂಕಿನ ಜನರ ರಕ್ಷಣೆಗಾಗಿ ಬಿಜೆಪಿ ಬೀದಿಗಿಳಿದು ಪೊಲೀಸರು, ಪಿಎಸೈ ವಿರುದ್ಧ ಹೋರಾಟ ನಡೆಸುವ ಸಂದರ್ಭ ಬರಬಹುದು ಎಂದರು.
ರಾಹುಲ್ ಗಾಂಧಿ, ಸಿದ್ದರಾಮಯ್ಯ ಜನಗಣತಿಯೊಂದಿಗೆ ಜಾತಿಗಣತಿಯನ್ನು ಸ್ವಾಗತಿಸಿದ್ದಾರೆ. ಪಾಕಿಸ್ತಾನ ಉಗ್ರರು ನಮ್ಮ ದೇಶದ ಮೇಲೆ ದಾಳಿ ಮಾಡಿದಾಗ ಇವರ ಮಾತುಗಳು ಹೇಗಿದ್ದವು, ನಂತರ ಹೇಗೆ ಬದಲಾದವು ಅನ್ನೋದು ನಮ್ಮ ಜನಕ್ಕೆ ಗೊತ್ತಿದೆ. ಮುಂದೆ ಇವರ ಹೇಳಿಕೆ ಬದಲಾಗಬಹುದು.
-ಎ.ಎಸ್.ಪಾಟೀಲ ನಡಹಳ್ಳಿ, ರಾಜ್ಯಾಧ್ಯಕ್ಷರು, ಬಿಜೆಪಿ ರೈತ ಮೋರ್ಚಾ.