ಗುತ್ತೇದಾರ್ ವಿರುದ್ಧ ಪ್ರಕಾಶ ಜಮಾದಾರ ವಾಗ್ದಾಳಿ
ಅಫಜಲಪುರ: ನಾನೇನು ಶಾಸಕ ಎಂ.ವೈ. ಪಾಟೀಲ್ ಅವರ ಚೇಲಾ ಅಲ್ಲ, ನಾನೊಬ್ಬ ಅವರ ಕಟ್ಟಾ ಬೆಂಬಲಿಗ ಮಾತ್ರ. ಹೀಗಾಗಿ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ನನ್ನ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ ಪ್ರತಿಕ್ರಿಯೆ ನೀಡಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿರಿಯ ಶಾಸಕರಾಗಿರುವ ಎಂ.ವೈ. ಪಾಟೀಲ್ ಮುನೀಮ್, ಅರುಣಕುಮಾರ ಪಾಟೀಲ್ ಮಾಲೀಕರಾಗಿದ್ದಾರೆ ಎಂದು ಹೇಳುವುದು ಸರಿಯಲ್ಲ. ನೀವು 6 ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಕೆಲವೊಮ್ಮೆ ಮಾತ್ರ ಕ್ಷೇತ್ರಕ್ಕೆ ಬಂದು, ಉಳಿದ ಸಮಯ ಬೆಂಗಳೂರಲ್ಲೇ ಇರುತ್ತಿದ್ದಿರಿ. ಆಗ ನಿಮ್ಮ ಸಹೋದರ ನಿತಿನ್ ಗುತ್ತೇದಾರ್ ಎಲ್ಲವನ್ನು ನೋಡಿಕೊಳ್ಳುತ್ತಿದ್ದಾಗ, ಆಗ ನೀವೇನು ಮುನೀಮ್ ಆಗಿದ್ದೀರಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಹಿಂದುಳಿದ ಕೋಟಾದಡಿ ಟಿಕೆಟ್ ಪಡೆದುಕೊಂಡು, ಯಾವ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿದ್ದೀರಿ ಎಂಬುದನ್ನು ಹೇಳಿ ನೋಡೋಣ. ನನಗೆ ಜಿಪಂ ಸದಸ್ಯತ್ವ ಹಾಗೂ ಈಗ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸ್ಥಾನವನ್ನು ಎಂ.ವೈ. ಪಾಟೀಲ್ ನೀಡಿರುವುದರಿಂದ ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದೀರಿ ಎಂದು ಆರೋಪಿಸಿದರು.
ಹಿಂದುಳಿದ ಸಮುದಾಯಗಳ ಬಗ್ಗೆ ನಿಮಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ, ಜೆ.ಎಂ. ಕೊರಬು ವಿಧಾನಸಭೆಗೆ ಸ್ಪರ್ಧೆ ಮಾಡುವುದಾಗಿ ಹೇಳಿದಾಗ, ಅವರ ಸ್ವಂತ ಊರಾದ ಮಾಶಾಳ ಗ್ರಾಮದ ಬಹಿರಂಗ ವೇದಿಕೆಯಲ್ಲಿ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿ ಜೈಲಿಗೆ ಹಾಕುತ್ತೇನೆ ಎಂದು ಹೇಳಿದ್ದೀರಿ. ಅಲ್ಲದೇ ಮಕ್ಬೂಲ್ ಪಟೇಲ್ ಜಿಪಂ ಚುನಾವಣೆಗೆ ಸ್ಪರ್ಧಿಸಿದಾಗ, ನೀವೇ ಅವರನ್ನು ಸೋಲಿಸಿದ್ದು ಮರೆತಿದ್ದೀರಿ ಎಂದು ಟೀಕಿಸಿದರು.
ದಿ. ವಿಠ್ಠಲ್ ಹೇರೂರ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಸಂದರ್ಭದಲ್ಲಿ ಎಂ.ವೈ. ಪಾಟೀಲ್ ಸ್ಪಂದಿಸಿ ಅವರನ್ನು ರಕ್ಷಿಸಿದ್ದರು. ಆ ಕೃತಜ್ಞತೆಯ ಮನೋಭಾವದಿಂದ ಕಳೆದ 25 ವರ್ಷಗಳಿಂದ ಅವರೊಂದಿಗೆ ಇದ್ದೇನೆ. ಹೀಗಾಗಿ ತಕ್ಷಣವೇ ಹಿರಿಯರಾದ ಎಂ.ವೈ. ಪಾಟೀಲ್ ಅವರಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಫಜಲಪುರ ಹಾಗೂ ಗಾಣಗಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಕರಜಗಿ, ಕಾಂಗ್ರೆಸ್ ಮುಖಂಡ ಮೈಹಿಬೂಬ ಪಟೇಲ್ ಕಲ್ಲೂರ, ಶಿವಾನಂದ ಗಾಡಿ ಸಾಹುಕಾರ, ಸಂಗನಗೌಡ ಪಾಟೀಲ್, ಶರಣು ಈಶ್ವರಗೊಂಡ, ಪ್ರವೀಣ್ ಕಲ್ಲೂರ, ದತ್ತಾತ್ರೇಯ ಮಾತನಳ್ಳಿ ಉಪಸ್ಥಿತರಿದ್ದರು.


















