*”ಅರ್ಥಪೂರ್ಣ ಮತ್ತು ಆರೋಗ್ಯ ಪೂರ್ಣ ಜೀವನಕ್ಕೆ ಯೋಗವೊಂದೇ ರಾಜಮಾರ್ಗ”*
ಇದೇ ತಿಂಗಳು 21ನೇ ತಾರೀಕಿಗೆ “ಜಾಗತಿಕವಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆ” ನಿಮಿತ್ತ ಈ ಲೇಖನ
ಧರ್ಮಾರ್ಥಕಾಮಮೋಕ್ಷಾಣಾಮಾರೋಗ್ಯಂ ಮೂಲಮುತ್ತಮಂ | ಅನ್ನುವ ಸಂಸ್ಕೃತ ಯುಕ್ತಿಯಂತೆ ಮನುಷ್ಯನ ಜೀವಿತ ಅವಧಿಯ ಸಾರ್ಥಕತೆ ವ್ಯಕ್ತಿಗತ ಆರೋಗ್ಯವನ್ನು ಅವಲಂಬಿಸಿದೆ ಎನ್ನುವುದನ್ನು ಅರಿತ ಭಾರತ ದೇಶದ ಋಷಿಮುನಿಗಳು ಯೋಗವಿಜ್ಞಾನವನ್ನು ಮನುಕುಲಕ್ಕೆ ಪರಿಚಯಿಸಿದರು.
ಯೋಗ ಎಂದರೆ ಕೇವಲ ಶಾರೀರಿಕ ಕಸರತ್ತು ಅಥವಾ ಭಂಗಿಗಳಲ್ಲ ಅಥವಾ ಕೇವಲ ದೇಹವನ್ನು ಬಗ್ಗಿಸುವ ಕಠಿಣ ಆಸನಗಳನ್ನು ಮಾಡುವ ದೈಹಿಕ ಶ್ರಮ ಎಂದು ಭಾವಿಸಬಾರದು. ಯೋಗ ಯೂಜ್ ಎಂಬ ಧಾತುವಿನಿಂದ ಬಂದ ಪದವಾಗಿದೆ “ಯೂಜ್” ಎಂದರೆ ಕೂಡುವಿಕೆ,ಸೇರ್ಪಡೆ ಅಥವಾ ಮಿಲನ ಎಂದರ್ಥ.
ದೇಹ,ಮನಸ್ಸು,ಬುದ್ಧಿ ಮತ್ತು ಆತ್ಮವನ್ನು ಒಂದೇ ಸೂತ್ರದಲ್ಲಿ ಬೆಸೆಯುವುದೇ ನಿಜವಾದ ಯೋಗ.
ಮಹರ್ಷಿ ಪತಂಜಲಿಗಳು ಪ್ರತಿಪಾದಿಸಿದ ಅಷ್ಟಾಂಗ ಯೋಗ (ಯಮ,ನಿಯಮ,ಆಸನ,ಪ್ರಾಣಾಯಾಮ, ಪ್ರತ್ಯಾಹಾರ,ಧಾರಣ, ಧ್ಯಾನ ಮತ್ತು ಸಮಾಧಿ ) ಕೇವಲ ದೈಹಿಕ ಸದೃಢತೆಯನಷ್ಟೇ ಅಲ್ಲದೆ ವ್ಯಕ್ತಿಯ ನೈತಿಕ ಮತ್ತು ಆಧ್ಯಾತ್ಮಿಕ ವಿಶ್ವಾಸಕ್ಕೂ ದಾರಿ ಮಾಡಿಕೊಡುತ್ತದೆ.
ಯಮ (ಸಾಮಾಜಿಕ ನಿಯಮಗಳು- ಅಹಿಂಸೆ,ಸತ್ಯ ಅಸ್ತೇಯ,(ಕದಿಯದಿರುವುದು) ನಿಯಮ (ವೈಯಕ್ತಿಕ, ನೈತಿಕತೆ), ಆಸನ(ಸ್ಥಿರ ಮತ್ತು ಸುಖಕರಭಂಗಿ),ಪ್ರಾಣಾಯಾಮ (ಉಸಿರಾಟದ ನಿಯಂತ್ರಣ), ಪ್ರತ್ಯಾಹಾರ (ಇಂದ್ರಿಯಗಳ ನಿಯಂತ್ರಣ), ಧಾರಣ (ಏಕಾಗ್ರತೆ), ಧ್ಯಾನ (ನಿರಂತರ ಚಿಂತನೆ),ಸಮಾಧಿ (ಪರಮಾನಂದ,ಮುಕ್ತಿ) ಹೀಗೆ ಬಾಹ್ಯ ಮತ್ತು ಅಂತರಂಗದ ಸಾಧನೆ ಒಳಗೊಂಡಿದೆ.
ಆಯುರ್ವೇದ ಮತ್ತು ಯೋಗ ವಿಜ್ಞಾನಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇವೆರಡು ಒಂದೇ ತತ್ವ ಜ್ಞಾನದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತವೆ.
ಆಯುರ್ವೇದವು ಆಹಾರ-ವಿಹಾರ, (ಜೀವನ ಶೈಲಿ) ಮತ್ತು ಔಷಧಿಗಳ ಮೂಲಕ ಶರೀರದಲ್ಲಿ ವಾತ ಪಿತ್ತ ಮತ್ತು ಕಫ ಎಂಬ ತ್ರಿದೋಷಗಳನ್ನು ಸಮತೋಲನದಲ್ಲಿಡಲು ಪ್ರಯತ್ನಿಸಿ ಶರೀರದ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ.
ಯೋಗವು ಶರೀರದಲ್ಲಿಯ ಧನಾತ್ಮಕ ಶಕ್ತಿಯನ್ನು ವೃಧಿಸಿ, ಆರೋಗ್ಯ ಸ್ಥಿತಿಯನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ನೆರವಾಗುತ್ತದೆ ಆದ್ದರಿಂದಲೇ ಇವೆರಡರ ಸಮನ್ವಯವನ್ನು ಪರಿಪೂರ್ಣ ವೈದ್ಯಕೀಯ ಪದ್ಧತಿ ಎನ್ನಬಹುದು.
ಪಾಶ್ಚಾತ್ಯ ವೈದ್ಯಲೋಕವು ಸಹ ಯೋಗದ ಚಿಕಿತ್ಸಕ ಗುಣಗಳನ್ನು(Therapy Benefits) ಒಪ್ಪಿಕೊಂಡಿದೆ. ಆಧುನಿಕ ಸಂಶೋಧನೆಗಳ ಪ್ರಕಾರ ಅನುಕಂಪನಾ ನರಮಂಡಲ (Sympathetic nervous system) ಕಾರ್ಯವನ್ನು ಕಡಿಮೆ ಮಾಡಿ ಪರಾನುಕಂಪನ ನರಮಂಡಲವನ್ನು (Parasympathetic nervous system) ಉತ್ತೇಜಿಸುತ್ತದೆ.ಇದರಿಂದ ಹೃದಯಬಡಿತ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
ಮನೋದೈಹಿಕ ಕಾಯಿಲೆಗಳಾದ ಮಧುಮೇಹ,ಅಸ್ತಮಾ, ಮೈಗ್ರೇನ್ ಮತ್ತು ಅಲ್ಸರ್ ನಂತಹ ಸಮಸ್ಯೆಗಳಿಗೆ ಯೋಗದಲ್ಲಿ ಅತ್ಯುತ್ತಮ ಪರಿಹಾರವಿದೆ. ನಿಯಮಿತ ಯೋಗಾಭ್ಯಾಸದಿಂದ ದೇಹದಲ್ಲಿ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟ ಕಡಿಮೆ ಆಗಿ ಎಂಡಾರ್ಫಿನ್ ಮತ್ತು ಸಿರೋಟೋನಿನ್ (Happy Harmons)
ಬಿಡುಗಡೆಯಾಗುತ್ತದೆ,ಇದು ಥೈರಾಯಿಡ್ ಮತ್ತು ಪಿಸಿಓಡಿ ಅಂತಹ ಸಮಸ್ಯೆಗಳಿಗೆ ಚಿಕಿತ್ಸೆಯಾಗಿದೆ.
ಪ್ರಾಣಾಯಾಮದಿಂದ ಜೀವಕೋಶಗಳ ಪುನಶ್ಚೇತನ (Anti aging) ಗೊಳಿಸುತ್ತದೆ,ಚರ್ಮದ ಕಾಂತಿ ಹೆಚ್ಚಿಸುತ್ತದೆ.
ಇಂದಿನ ಜಗತ್ತು ಯುದ್ಧ ಭಯೋತ್ಪಾದನೆ ಮತ್ತು ದ್ವೇಷದ ಜ್ವಾಲೆಯಲ್ಲಿ ಬೇಯುತ್ತಿದೆ, ಯೋಗದ ತತ್ವಗಳು ವ್ಯಕ್ತಿಯಲ್ಲಿ “ವಸುದೈವ ಕುಟುಂಬಕಂ” ಎಂಬ ಭಾವನೆಯನ್ನು ಜಾಗೃತಗೊಳಿಸುತ್ತದೆ ಪ್ರತಿ ವ್ಯಕ್ತಿಯಲ್ಲಿ, ಪ್ರತಿ ವ್ಯಕ್ತಿಯ ಮನಸ್ಸಿನಲ್ಲಿ ಶಾಂತಿ ನೆಲೆಸಿದಾಗ ಮಾತ್ರ ಕುಟುಂಬದಲ್ಲಿ, ಸಮಾಜದಲ್ಲಿ, ದೇಶದಲ್ಲಿ ಹಾಗೂ ದೇಶ-ದೇಶಗಳ ನಡುವೆ ಶಾಂತಿ,ಸೌಹಾರ್ದ ಮತ್ತು ಭಾತೃತ್ವ ಭಾವನೆ ನೆಲೆಸಲು ಸಾಧ್ಯ.
ಆಧುನಿಕ ಜಗತ್ತು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರು ಮಾನವನ ವಯಕ್ತಿಕ ಆರೋಗ್ಯ, ಮಾನಸಿಕ ಸ್ಥಿತಿ ಹಾಗೂ ನೆಮ್ಮದಿಯ ಗ್ರಾಪ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ತಂತ್ರಜ್ಞಾನದ ಅತಿಯಾದ ಬಳಕೆ,ಕ್ರಮಬದ್ಧವಲ್ಲದ ಜೀವನ ಶೈಲಿ, ರಾಸಾಯನಿಕ ಯುಕ್ತ ಆಹಾರ ಮತ್ತು ನಿರಂತರ ಮಾನಸಿಕ ಒತ್ತಡಗಳು ಮನುಷ್ಯನನ್ನು ಸಾಂಕ್ರಾಮಿಕ ವಲ್ಲದ ಕಾಯಿಲೆಗಳ ಸುಳಿಗೆ ಸಿಕ್ಕು ನಲುಗಿಸುತ್ತಿವೆ
ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಜಗತ್ತಿಗೆ ಅತ್ಯಂತ ಸರಳ ನೈಸರ್ಗಿಕ ಮತ್ತು ವೈಜ್ಞಾನಿಕ ಪರಿಹಾರ ರೂಪವಾಗಿ ಗೋಚರಿಸುತ್ತಿರುವುದು ಭಾರತೀಯ ಪರಂಪರೆಯ ಯೋಗವಿಜ್ಞಾನ ಎನ್ನುವುದನ್ನು ಮನಗಂಡು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2014ರ ಸೆಪ್ಟೆಂಬರ್ 27ರಂದು ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಯೋಗದ ಜಾಗತಿಕ ಮಹತ್ವವನ್ನು ಪ್ರಸ್ತಾಪಿಸಿದರು .ಯೋಗವು ಕೇವಲ ವ್ಯಾಯಾಮವಲ್ಲ ಅದು ಪ್ರಕೃತಿಯ ಮತ್ತು ಮಾನವನ ನಡುವಿನ ಸಾಮರಸ್ಯದ ಸೇತುವೆ ಎಂದು ಅವರು ಪ್ರತಿಪಾದಿಸಿದರು,
ಇದರ ಫಲವಾಗಿ ವಿಶ್ವಸಂಸ್ಥೆಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಬೆಂಬಲ ವ್ಯಕ್ತವಾಯಿತು. 177 ರಾಷ್ಟ್ರಗಳು ಈ ಪ್ರಸ್ತಾವನೆಯನ್ನು ಜಂಟಿಯಾಗಿ ಅನುಮೋದಿಸಿದವು. ಕೇವಲ 75 ದಿನಗಳ ದಾಖಲೆಯ ಅವಧಿಯಲ್ಲಿ ಡಿಸೆಂಬರ್ 11, 2014ರಂದು ವಿಶ್ವಸಂಸ್ಥೆಯು *ಜೂನ್ 21ನ್ನು “ಅಂತರಾಷ್ಟ್ರೀಯ ಯೋಗ ದಿನ”* ಎಂದು ಅಧಿಕೃತವಾಗಿ ಘೋಷಿಸಿತು .
ಖಗೋಳ ವಿಜ್ಞಾನದ ಪ್ರಕಾರ ಜೂನ್ 21ರಂದು ಉತ್ತರ ಗೋಳಾರ್ಧದಲ್ಲಿ ವರ್ಷದ ಅತ್ಯಂತ “ಸುದೀರ್ಘ ದಿನ” ದೊಡ್ಡ ಹಗಲು ಆಗಿದೆ ಈ ದಿನದಂದು ಸೂರ್ಯನು ದಕ್ಷಿಣಾಯನಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ.
ಈ ಎಲ್ಲಾ ಹಿನ್ನೆಲೆಗಳನ್ನೊಳಗೊಂಡ ಮೊದಲನೇ ಅಂತಾರಾಷ್ಟ್ರೀಯ ಯೋಗ ದಿನ 2015 ಜೂನ್ 21ರಂದು ಜಗತ್ತಿನಾದ್ಯಂತ ಆಚರಿಸಲ್ಪಟ್ಟು, ಬರುವ ಜೂನ್ 21 ರಂದು 12ನೇ “ಅಂತರಾಷ್ಟ್ರೀಯ ಯೋಗ ದಿನ”ವನ್ನು ಜಾಗತಿಕ ಮಟ್ಟದಲ್ಲಿ ಅತಿಉತ್ಸಾಹದಿಂದ ಆಚರಿಸಲ್ಪಡುತ್ತದೆ.
ಭಾರತ ಸರ್ಕಾರದ ಆಯುಷ್ ಸಚಿವಾಲಯ ಹಾಗೂ ವಿಶ್ವಸಂಸ್ಥೆ ಜಂಟಿಯಾಗಿ ಪ್ರತಿ ವರ್ಷ,ಯೋಗದಿನಕ್ಕೆ ಒಂದೊಂದು ವಿಶಿಷ್ಟವಾದ ಯೋಗದಿನದ ಘೋಷವಾಕ್ಯಗಳನ್ನು ನಿರ್ಧರಿಸುತ್ತದೆ, ಈ ವರ್ಷ ಅಂದರೆ 2026 ನೇ ಸಾಲಿಗೆ 12ನೇ ಯೋಗ ದಿನಕ್ಕೆ “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ”(Yoga for Self and Society) ವಯಕ್ತಿಕ ಯೋಗ ಕ್ಷೇಮದ ಜೊತೆಗೆ ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಉದ್ದೇಶಗಳೊಂದಿಗೆ ಘೋಷವಾಕ್ಯವನ್ನು ನಿರ್ಧರಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು 2021 ರಿಂದ 2030 ರವರೆಗಿನ ದಶಕವನ್ನು “ಆರೋಗ್ಯಕರ ವೃದ್ಧಾಪ್ಯದ ದಶಕ” (Decade of Healthy Aging) ಎಂದು ಘೋಷಿಸಿದೆ, ಇದರ ಭಾಗವಾಗಿ ವಯಸ್ಸಾದವರಲ್ಲಿ ದೈಹಿಕ ಸಾಮರ್ಥ್ಯ, ಮಾನಸಿಕ ಸಮತೋಲನ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯೋಗ ಅತ್ಯುತ್ತಮ ನೈಸರ್ಗಿಕ ಮಾರ್ಗವೆಂದು ಜಾಗತಿಕವಾಗಿ ಗುರುತಿಸಲು ವಿಷಯಾಧಾರಿತ ಕಾರ್ಯಕ್ರಮವಾಗಿ *”ಆರೋಗ್ಯಕರ ವೃದ್ಯಾಪಕ್ಕಾಗಿ ಯೋಗ”* ಎಂಬ ಉಪಘೋಷವಾಕ್ಯವನ್ನು ಅಭಿಯಾನ ರೂಪದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಈ ವರ್ಷ ಆಚರಿಸಲಾಗುತ್ತಿದೆ.
ಈ ದಿನವನ್ನು ಭಾರತದ ಪ್ರತಿ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದೆ,
*ಯೋಗವು ಕೇವಲ ವ್ಯಕ್ತಿಯನ್ನು ಬದಲಾಯಿಸುವುದಿಲ್ಲ ಅದು ವ್ಯಕ್ತಿಯ ದೃಷ್ಟಿಕೋನ ಬದಲಾಯಿಸುತ್ತದೆ,ದೃಷ್ಟಿಕೋನ ಬದಲಾದಾಗ ಇಡೀ ಜಗತ್ತೇ ಬದಲಾಗುತ್ತದೆ*
ಯೋಗ ಯಾವುದೇ ಒಂದು ಧರ್ಮಕ್ಕೆ ಅಥವಾ ವರ್ಗಕ್ಕೆ ಸೀಮಿತವಾದ ಆಚರಣೆ ಅಲ್ಲ, ಅದು ಇಡೀ ಮನುಕುಲದ ಕಲ್ಯಾಣಕ್ಕಾಗಿ ಇರುವ ಸಾರ್ವತ್ರಿಕ ವಿಜ್ಞಾನ. ಅಂದರೆ ನಾವು ಮಾಡುವ ಕೆಲಸದಲ್ಲಿ ದಕ್ಷತೆ ಮತ್ತು ಸಮಚಿತ್ತತೆ ತರುವುದೇ ಯೋಗವಾಗಿದೆ.
ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಆಯುಷ್ ಮಂತ್ರಾಲಯ ದ ಮಾರ್ಗಸೂಚಿ ಮತ್ತು ಕರ್ನಾಟಕದ ಆಯುಷ್ ಇಲಾಖೆಯ ನೇತೃತ್ವದಲ್ಲಿ ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳು, ಯೋಗದ ಅಂಗ ಸಂಸ್ಥೆಗಳು, ಪ್ರತಿ ಜಿಲ್ಲೆಯಲ್ಲಿ ಅದ್ದೂರಿಯ ಯೋಗ ದಿನವನ್ನು ಆಚರಿಸುತ್ತಿವೆ ಹಾಗೂ ಆಯುಷ್ ಇಲಾಖೆಯ ಪ್ರತಿ ಪಟ್ಟಣ, ಹಳ್ಳಿಗಳಲ್ಲಿ ಸರ್ಕಾರದ ಮಾರ್ಗಸೂಚಿಯ ಯೋಗ ಜಾಗೃತಿಗಾಗಿ ಯೋಗ ವಿಷಯದಲ್ಲಿ ಪೂರ್ವಭಾವಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ
*ಬನ್ನಿ ಈ ಅಂತರಾಷ್ಟ್ರೀಯ ಯೋಗ ದಿನದಂದು ನಾವು ಕೇವಲ ಪ್ರದರ್ಶನಕ್ಕಾಗಿ ಯೋಗ ಮಾಡದೆ ಅದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ನಿತ್ಯದ ದಿನಚರಿಯಾಗಿಸಿಕೊಳ್ಳೋಣ* ಸದೃಢ ಶರೀರ ಶಾಂತ ಮನಸ್ಸು ಮತ್ತು ಅಧ್ಯಾತ್ಮಿಕವಾಗಿ ಜಾಗೃತರಾಗೋಣ
ಸರ್ವೇಜನಃ ಸುಖಿನೋಭವಂತು, ಸರ್ವೇ ಸಂತು ನಿರಾಮಯ….
ಡಾ.ಶ್ರೀಶೈಲ ಪಾಟೀಲ
ರಾಜ್ಯಾಧ್ಯಕ್ಷರು
ಸರಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ,
ಹಾಗೂ
ವೈದ್ಯಾಧಿಕಾರಿಗಳು
ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್) ಸರಕಾರಿ ಆಯುರ್ವೇದ ಚಿಕಿತ್ಸಾಲಯ ಬಳೂರಗಿ
ಅಫಜಲಪುರ ತಾಲೂಕು, ಕಲಬುರಗಿ ಜಿಲ್ಲೆ



















