ಸಚಿವ ಡಾ.ಎಂ.ಬಿ.ಪಾಟೀಲರಿಂದ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ..
2024ರ ಏಪ್ರಿಲ್ನಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ : ನೈಟ್ ಲ್ಯಾಂಡಿಗ್ಗೂ ಅವಕಾಶ..
ವಿಜಯಪುರ : ನಿರ್ಮಾಣ ಹಂತದಲ್ಲಿರುವ ಇಲ್ಲಿನ ವಿಮಾನ ನಿಲ್ದಾಣ ಕಾಮಗಾರಿಗಳು ಭರದಿಂದ ಸಾಗಿದ್ದು, 2024ರ ಏಪ್ರಿಲ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಕಾಮಗಾರಿಗಳನ್ನು ವೇಗವಾಗಿ ಕೈಗೊಂಡು ಎಲ್ಲ ಸಿವ್ಹಿಲ್ ಕಾಮಗಾರಿ, ಉಪಕರಣಗಳ ವ್ಯವಸ್ಥೆ ಹಾಗೂ ನಿರಾಪೇಕ್ಷಣಾ ಪತ್ರ ಸೇರಿದಂತೆ ಎಲ್ಲ ಕಾಮಗಾರಿಗಳನ್ನು ಫೆಬ್ರುವರಿ ಮಾಹೆಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮೂಲಸೌಲಭ್ಯ ಅಭಿವೃದ್ಧಿ ಖಾತೆ, ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ ತಿಳಿಸಿದರು.
ಅವರು ಶುಕ್ರವಾರ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಸಮಗ್ರವಾಗಿ ಪರಿಶೀಲಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 727 ಎಕರೆ ವಿಸ್ತೀರ್ಣದಲ್ಲಿ ತಲೆಯೆತ್ತುತ್ತಿರುವ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿಗಳು ಈ ವರ್ಷದ ಡಿಸೆಂಬರ್ವರೆಗೆ ಮುಗಿಯಲಿವೆ. ಅದರ ನಂತರ ಇತರ ತಾಂತ್ರಿಕ ಕೆಲಸಗಳು ನಡೆದು ಏಪ್ರಿಲ್ ವೇಳೆಗೆ ಎಲ್ಲವೂ ಮುಗಿಯುವ ವಿಶ್ವಾಸ ಇದೆ ಎಂದು ಹೇಳಿದರು.
ಈ ಹಿಂದೆ ಬೆಳಗಿನ ಹೊತ್ತು ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ನಾನು ಸಚಿವನಾದ ನಂತರ ರಾತ್ರಿ ಹೊತ್ತು ಕೂಡ ವಿಮಾನ ಬಂದಿಳಿಯುವ ಹಾಗೆ ಸೌಲಭ್ಯಗಳನ್ನು ಕಲ್ಪಿಸಲು ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಅಳವಡಿಸುವಂತೆ ನಿರ್ದೇಶನ ನೀಡಿದ್ದೇನೆ. ಇದಷ್ಟೇ ಅಲ್ಲದೇ ಏರ್ ಬಸ್ ಮಾದರಿಯ ದೊಡ್ಡ ವಿಮಾನಗಳು ಕೂಡ ಇಲ್ಲಿಗೆ ಬಂದಿಳಿಯಲು ಅನುಕೂಲವಾಗುವ ಹಾಗೆ ಯೋಜನೆಯಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಾಮಗಾರಿಗಳು ತಾಂತ್ರಿಕ ಕಾರಣಗಳಿಂದ ನಿಲ್ಲಬಾರದೆಂಬ ಉದ್ದೇಶದಿಂದ ಎರಡು ದಿನಗಳ ಹಿಂದೆ ಈ ಯೋಜನೆಗೆ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ಶೌಚಾಲಯ, ಕ್ಯಾಂಟೀನ್ ಸೇರಿದಂತೆ ಪ್ರತಿಯೊಂದು ಸೌಲಭ್ಯವೂ ದೊಡ್ಡ ವಿಮಾನ ನಿಲ್ದಾಣದಲ್ಲಿ ಇರುವಂತೆಯೇ ಇರಲಿದೆ. ಜತೆಗೆ ಏರ್ ಬಸ್ ಮಾದರಿಯ ವಿಮಾನಗಳು ಬಂದಿಳಿಯಲು ಅಗತ್ಯವಿರುವ ಭೂಸ್ವಾಧೀನ ಕೂಡ ನಡೆಯಲಿದ್ದು, ಈ ಸಂಬಂಧ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಅವರು ವಿವರಿಸಿದರು.
ಡಿಜಿಸಿಎ ಮಾನದಂಡಗಳ ಪ್ರಕಾರ ಇಲ್ಲಿನ ವಿಮಾನ ನಿಲ್ದಾಣಕ್ಕೆ ಎರಡು ವಿಮಾನ ರಕ್ಷಣಾ ಅಗ್ನಿಶಾಮಕ ವಾಹನಗಳು ಅಗತ್ಯವಿವೆ. ರಾತ್ರಿ ವೇಳೆ ಇಳಿಯುವ ಸೌಲಭ್ಯ ಕಲ್ಪಿಸಲು ಬೇಕಾಗುವ ಉಪಕರಣಗಳ ಸಂಗ್ರಹಣೆಗೆ ಕೂಡ ಸ್ಪಷ್ಟ ನಿರ್ದೇಶನ ಕೊಡಲಾಗಿದೆ. ಇದರ ಜತೆಗೆ ಹವಾಮಾನ ಕುರಿತ ಮಾಹಿತಿ ನೀಡುವ ಉಪಕರಣಗಳನ್ನು ಅಳವಡಿಸಬೇಕಾಗಿದೆ. ಈ ಎಲ್ಲದಕ್ಕೂ ಅಂದಾಜು 50 ಕೋಟಿ ರೂಪಾಯಿ ಬೇಕಾಗುತ್ತದೆ. ಹೀಗಾಗಿ ವಿಮಾನ ನಿಲ್ದಾಣದ ಅಂದಾಜು ವೆಚ್ಚ 400 ಕೋಟಿ ರೂ. ಆಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಇದುವರೆಗೂ 300 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಪರಿಸರ ಇಲಾಖೆಯ ಅನುಮತಿಗಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕಾಮಗಾರಿಗಳು ಮುಕ್ತಾಯದ ಹಂತಕ್ಕೆ ಬಂದಿರುವುದರಿಂದ ಈ ಪ್ರಕ್ರಿಯೆ ಸುಗಮವಾಗಿ ನಡೆಯಲಿದೆ. ಜತೆಗೆ ಕೇಂದ್ರ ಸರ್ಕಾರದ ಮಲ್ಟಿ ಡಿಸಿಪ್ಲಿನರಿ ತಂಡದಿಂದ ವಿಮಾನ ನಿಲ್ದಾಣ ಕಾಮಗಾರಿಯ ಪರಿಶೀಲನೆ ನಡೆಸುವಂತೆ ಕೋರಲಾಗಿದ್ದು, ಈ ತಂಡವು ಆಗಸ್ಟ್ ತಿಂಗಳಲ್ಲಿ ವಿಜಯಪುರಕ್ಕೆ ಭೇಟಿ ನೀಡಬಹುದು ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ವಿಮಾನ ನಿಲ್ದಾಣದ ಕಾಮಗಾರಿಗಳು ಒಟ್ಟು ಮೂರು ಪ್ಯಾಕೇಜ್ಗಳಲ್ಲಿ ನಡೆಯುತ್ತಿವೆ. ಪ್ಯಾಕೇಜ್-1ರಲ್ಲಿ 222.92 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಪೆರಿಫೆರಲ್ ರಸ್ತೆ, ಏಪ್ರಾನ್, ಟ್ಯಾಕ್ಸಿವೇ, ರಸ್ತೆಗಳ ಕೆಲಸ ನಡೆಯುತ್ತಿದೆ.
ಪ್ಯಾಕೇಜ್-2ರಲ್ಲಿ 86.20 ಕೋಟಿ ರೂ. ವೆಚ್ಚದಲ್ಲಿ ಪ್ಯಾಸೆಂಜರ್ ಟರ್ಮಿನಲ್, ಎಟಿಸಿ ಕಟ್ಟಡ, ವಿದ್ಯುತ್ ಉಪಕೇಂದ್ರ, ಕಾಂಪೌಂಡ್, ವೀಕ್ಷಣಾ ಗೋಪುರ, ಅಂಡರ್ ಗ್ರ್ರೌಂಡ್ ಟ್ಯಾಂಕ್ ಕಾಮಗಾರಿ ಪ್ರಗತಿಯಲ್ಲಿದೆ. ಪ್ಯಾಕೇಜ್-3ರಲ್ಲಿ 19.30 ಕೋಟಿ ರೂ. ವಿನಿಯೋಗಿಸಿ ಎಲೆಕ್ಟ್ರೋ-ಮೆಕ್ಯಾನಿಕಲ್ ಸಾಧನಗಳ ಕೆಲಸ ಚಾಲ್ತಿಯಲ್ಲಿದೆ. ಅದರಂತೆ ವಿದ್ಯುತ್ ಪೂರೈಕೆ, ಸರ್ವೇ ಇತ್ಯಾದಿ ಕೆಲಸಗಳಿಗಾಗಿ 19.41 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಹೇಳಿದರು.
ವಿಮಾನ ನಿಲ್ದಾಣ
ಸರ್ಕಾರದಿಂದ ನಿರ್ವಹಣೆಗೆ ಚಿಂತನೆ : ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗಳು ಪೂರ್ಣಗೊಂಡ ನಂತರ ರಾಜ್ಯ ಸರ್ಕಾರದಿಂದಲೇ ನಿರ್ವಹಣೆ ಮಾಡಲು ಚಿಂತಿಸಲಾಗುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹಲವು ವಿಮಾನ ನಿಲ್ದಾಣಗಳ ಕಾಮಗಾರಿಗಳಿಗೆ ಕೇಂದ್ರ ಸರಕಾರ ಹಣ ಕೊಟ್ಟಿಲ್ಲ. ಎಲ್ಲದಕ್ಕೂ ರಾಜ್ಯ ಸರ್ಕಾರವೇ ಹಣ ನೀಡಿದೆ. ಹೀಗಾಗಿ ಭಾರತೀಯ ವಿಮಾನ ಪ್ರಾಧಿಕಾರಕ್ಕೆ ನಿರ್ವಹಣೆ ವಹಿಸುವುದರಲ್ಲಿ ಅರ್ಥ ಇಲ್ಲ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರದಿಂದಲೇ ನಿರ್ವಹಣೆ ಮಾಡಲು ಸಾಧಕ-ಬಾಧಕ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ವಾಣಿಜ್ಯ ಬೆಳೆಗಳ ರಫ್ತಿಗೆ ಸಹಕಾರ :
ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ನಂತರ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ದ್ರಾಕ್ಷಿ ಸೇರಿದಂತೆ ಇತರ ಕೃಷಿ ಉತ್ಪನ್ನಗಳ ರಫ್ತಿಗೂ ಅನುಕೂಲವಾಗಲಿದೆ. ಅದರಂತೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಗೂ ಒತ್ತು ನೀಡಿ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭಧಲ್ಲಿ ನಾಗಠಾಣ ಶಾಸಕರಾದ ಶ್ರೀ ವಿಠಲ ಕಟಕದೊಂಡ, ಕೆಎಸ್ ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್ ರವಿ, ಜಿಲ್ಲಾಧಿಕಾರಿಗಳಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯತ್ ಸಿಇಒ ಶ್ರೀ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.