ವೀರಶೈವ ಲಿಂಗಾಯತ ಸಮಾಜದ ಒಳಪಂಗಡಗಳು ಒಗ್ಗೂಡಿ ಸಮಾಜ ಕಟ್ಟುವ ಕೆಲಸವಾಗಲಿ: ಶಾಸಕ ಸಿ.ಎಸ್. ನಾಡಗೌಡ
ಜಂಗಮ ಸಮಾಜಕ್ಕೆ ತಪ್ಪು ತಿದ್ದುವ ಅಧಿಕಾರವಿದೆ; ಒಳಪಂಗಡಗಳು ಮರೆತು ವೀರಶೈವ ಸಮಾಜ ಒಂದಾಗಲಿ: ಶಾಸಕ ಸಿ.ಎಸ್. ನಾಡಗೌಡ
ಪಟ್ಟಣದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಜಗದ್ಗುರು ಶ್ರೀ ರೇಣುಕಾಚಾರ್ಯ ಸಮುದಾಯ ಭವನದ ಕಾಮಗಾರಿಗೆ ಭೂಮಿ ಪೂಜೆಗೆ: ಶಾಸಕ ನಾಡಗೌಡ ಚಾಲನೆ.
ಮುದ್ದೇಬಿಹಾಳ: ವೀರಶೈವ ಲಿಂಗಾಯತ ಸಮಾಜದಲ್ಲಿನ ಒಳಪಂಗಡಗಳು ಉಪಜಾತಿಗಳನ್ನು ಬರೆಯುವ ಮೂಲಕ ಒಡೆದು ಹೋಗುತ್ತಿವೆ. ನಾವೆಲ್ಲರೂ ಒಂದಾಗಿ ಸೇರಿ ಬಲಿಷ್ಠ ವೀರಶೈವ ಸಮಾಜವನ್ನು ಕಟ್ಟುವ ಅವಶ್ಯಕತೆ ಇದೆ,” ಎಂದು ಕರ್ನಾಟಕ ರಾಜ್ಯ ಸೋಪು ಮತ್ತು ಮಾರ್ಜಕಗಳ ನಿಗಮದ (KSDL) ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರು ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಜಗದ್ಗುರು ಶ್ರೀ ರೇಣುಕಾಚಾರ್ಯ ಸಮುದಾಯ ಭವನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜಂಗಮ ಸಮಾಜದ ಜವಾಬ್ದಾರಿ ಹಿರಿದು ”ಜಂಗಮ ಎಂದರೆ ಶಿವನ ರೂಪ ಎಂದು ಭಾವಿಸಲಾಗುತ್ತದೆ. ವೀರಶೈವ ಸಮಾಜದಲ್ಲಿ ಎಲ್ಲರಿಗೂ ಸಂಸ್ಕಾರ ನೀಡುವ ಜವಾಬ್ದಾರಿ ಈ ಸಮಾಜಕ್ಕಿದೆ. ಜಂಗಮ ಸಮಾಜಕ್ಕೆ ಅತ್ಯಂತ ಉನ್ನತ ಸ್ಥಾನವಿದೆ,” ಎಂದ ಶಾಸಕರು, “ಸಮಾಜದಲ್ಲಿ ತಪ್ಪುಗಳು ಸಂಭವಿಸಿದಾಗ, ನಾನೇ ತಪ್ಪು ಮಾಡಿದ್ದರೂ ಅದನ್ನು ತಿದ್ದುವ ಮತ್ತು ಕಿವಿಹಿಂಡುವ ಅಧಿಕಾರ ಜಂಗಮ ಸಮಾಜದ ಮುಖಂಡರಿಗಿದೆ,” ಎಂದು ಮಾರ್ಮಿಕವಾಗಿ ನುಡಿದರು.
ಇಂದು ವೀರಶೈವ ಲಿಂಗಾಯತ ಸಮಾಜವು ಅನೇಕ ಒಳಪಂಗಡಗಳಾಗಿ ಒಡೆದು ಹೋಗುತ್ತಿರುವುದು ವಿಷಾದನೀಯ. ಉಪಜಾತಿಗಳನ್ನು ಪ್ರತ್ಯೇಕವಾಗಿ ಬರೆಯುವ ಮೂಲಕ ನಮ್ಮ ಸಂಘಟನಾ ಶಕ್ತಿ ಕುಂದುತ್ತಿದೆ. ಮುದ್ದೇಬಿಹಾಳ ಕ್ಷೇತ್ರದಲ್ಲಿ ಶೇ. 16 ರಷ್ಟು ವೀರಶೈವ ಸಮಾಜದವರಿದ್ದು, ನಾವೆಲ್ಲರೂ ಒಳಪಂಗಡಗಳ ಭೇದ ಮರೆತು ಒಂದಾಗಿ ಬಲಿಷ್ಠ ಸಮಾಜವನ್ನು ಕಟ್ಟಬೇಕಿದೆ. ಸಮಾಜವನ್ನು ಒಗ್ಗೂಡಿಸುವ ಗುರುತರ ಜವಾಬ್ದಾರಿ ಜಂಗಮ ಸಮಾಜದ ಮೇಲಿದೆ,” ಎಂದು ಕರೆ ನೀಡಿದರು.
ಹೆಚ್ಚಿನ ಅನುದಾನಕ್ಕೆ ಶಾಸಕರ ಭರವಸೆ
ಸಮುದಾಯ ಭವನದ ಕುರಿತು ಮಾತನಾಡಿದ ಶಾಸಕರು, “ಈಗ ನೀಡಿರುವ 20 ಲಕ್ಷ ರೂ. ಅನುದಾನ ಕಟ್ಟಡ ಪೂರ್ಣಗೊಳಿಸಲು ಸಾಕಾಗುವುದಿಲ್ಲ. ಗೋವಿಂದರಾಜು ವರದಿಯ ಪ್ರಕಾರ ನಮ್ಮ ಮುದ್ದೇಬಿಹಾಳ ತಾಲ್ಲೂಕು ಹಿಂದುಳಿದ ತಾಲ್ಲೂಕು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ನಮ್ಮ ಮತಕ್ಷೇತ್ರದ ಅಭಿವೃದ್ಧಿಗೆ ಮತ್ತು ಈ ಸಮುದಾಯ ಭವನಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡುತ್ತೇನೆ. ಸುಸಜ್ಜಿತ ಹಾಗೂ ಭವ್ಯವಾದ ಕಟ್ಟಡ ನಿರ್ಮಾಣವಾಗಲಿ,” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡ ಮಹಾಂತೇಶ ಬೂದಿಹಾಳಮಠ ಅವರು ಗುರುಗಳ ಸಮುದಾಯ ಭವನಕ್ಕೆ ಎಲ್ಲಾ ಸಮಾಜದವರು ಕೈಜೋಡಿಸಿ ಸಹಾಯ ನೀಡಬೇಕು,” ಎಂದು ಮನವಿ ಮಾಡಿದರು. ಜಂಗಮ ಸಮಾಜದ ಅಧ್ಯಕ್ಷ ದಾನಯ್ಯ ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶರಣ ಸೋಮನಾಳದ ಮಹಾದೇವ ಶಾಸ್ತ್ರೀಗಳು, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪಂಚ ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಪುರಸಭೆ ಮಾಜಿ ಅಧ್ಯಕ್ಷ ಮೈಹಿಬೂಬು ಗೊಳಸಂಗಿ, ಸತೀಶ್ ಓಸ್ವಾಲ್, ಉದ್ದಿಮೆದಾರ ಸಿ.ಪಿ. ಸಜ್ಜನ, ಸುನಿಲ್ ಇಲ್ಲೂರ, ಗಣೇಶ ಅನ್ನಾಗೋಣಿ,ನೇತಾಜಿ ನಲವಡೆ,ಶ್ರೀಕಾಂತ್ ಚಲವಾದಿ,ಹಾಗೂ ಜಂಗಮ ಸಮಾಜದ ಪ್ರಮುಖರು, ಮುಖಂಡರು ಭಾಗವಹಿಸಿದ್ದರು.










