ರಾಯಚೂರು : ರಾಯಚೂರು ನಗರಸಭೆಯಲ್ಲಿ ಇದೀಗ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಗೆ ಸಿದ್ಧರಾಗಿರುವ ನಗರಸಭೆ ಸದಸ್ಯರು ಅವಿಶ್ವಾಸ ಸೂಚನಾ ಪತ್ರ ಆಯುಕ್ತರಿಂದ ಜಾರಿ ಮಾಡಲಾಗಿದೆ, ೧೫ ದಿನಗಳಲ್ಲಿ ಸಭೆ ಕರೆದು ನಿಯಮಾನುಸಾರ ಅವಿಶ್ವಾಸ ಗೊತ್ತುವಳಿ ಚರ್ಚೆ ನಿರ್ವಹಿಸಬೇಕಾಗಿದೆ.
ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಅವರ ವಿರುದ್ಧ ೩೨ ನಗರಸಭೆ ಸದಸ್ಯರಿಂದ ಮಂಡಿಸಲಾದ ಅವಿಶ್ವಾಸ ಸೂಚನಾ ಪತ್ರವನ್ನು ಆಯುಕ್ತ ಕೆ.ಮುನಿಸ್ವಾಮಿ ಅವರು ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಅವರಿಗೆ ನೀಡಿದರು. ನಗರಸಭೆಯ ಸದಸ್ಯರು ತಮ್ಮ ವಿರುದ್ಧ ಅವಿಶ್ವಾಸ ಮಂಡನೆ ಹಿನ್ನೆಲೆಯಲ್ಲಿ ಸಭೆ ಕರೆಯುವ ಪ್ರಸ್ತಾಪಕ್ಕೆ ಸಂಬಂಧಿಸಿ ಈ ಸೂಚನಾ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ನಿನ್ನೆ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಅವರು ಸೂಚನಾ ಪತ್ರವನ್ನು ಸ್ವೀಕರಿಸಿದ್ದಾರೆ. ೧೫ ದಿನಗಳಲ್ಲಿ ಸಭೆ ಕರೆದು ನಿಯಮಾನುಸಾರ ಅವಿಶ್ವಾಸ ಗೊತ್ತುವಳಿ ಚರ್ಚೆ ನಿರ್ವಹಿಸಬೇಕಾಗಿದೆ.
ನಗರಸಭೆಯ ಸದಸ್ಯರು ಮತ್ತು ಅಧಿಕಾರಿಗಳ ಚಿತ್ತ ಈಗ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಅವರ ಮೇಲೆ ಕೇಂದ್ರೀಕೃತಗೊಂಡಿದ್ದು, ಸಭೆ ದಿನಾಂಕ ಘೋಷಣೆಗೆ ಸಂಬಂಧಿಸಿ ಕುತೂಹಲ ನಿರೀಕ್ಷೆಯಲ್ಲಿದ್ದಾರೆ. ಮಾ.೦೫ ರಂದು ಜಿಲ್ಲಾಧಿಕಾರಿಗಳಿಗೆ ನಗರಸಭೆ ಸದಸ್ಯರು ಅವಿಶ್ವಾಸ ಪತ್ರ ನೀಡಿದ್ದಾರೆ. ಒಟ್ಟು ೩೨ ಸದಸ್ಯರ ಸಹಿಯುಳ್ಳ ಅವಿಶ್ವಾಸವನ್ನು ಪತ್ರವನ್ನು ನೀಡಲಾಗಿತ್ತು. ಜಿಲ್ಲಾಧಿಕಾರಿಗಳು ಇದನ್ನು ಆಯುಕ್ತರಿಗೆ ರವಾನಿಸಿದ್ದರು.
ಆಯುಕ್ತ ಕೆ.ಮುನಿಸ್ವಾಮಿ ಅವರು ಮುಂದಿನ ಕ್ರಮಕ್ಕಾಗಿ ಅವಿಶ್ವಾಸ ಪತ್ರದ ಸೂಚನೆಯನ್ನು ಮುಂದಿನ ಕ್ರಮಕ್ಕಾಗಿ ಅಧ್ಯಕ್ಷರಿಗೆ ನೀಡಿದರು. ಸದಸ್ಯರಿಂದ ಅವಿಶ್ವಾಸ ಮಂಡನೆ ನಂತರ ಅಧ್ಯಕ್ಷ ಈ.ವಿನಯಕುಮಾರ ಅವರ ನಡೆ ಏನು ಎನ್ನುವುದು ಈಗ ಭಾರೀ ಜಿಜ್ಞಾಸೆ ಮೂಡಿಸಿದೆ.
೩೨ ಸದಸ್ಯರು ಅವಿಶ್ವಾಸ ಪತ್ರಕ್ಕೆ ಸಹಿ ಹಾಕಿದ್ದರಿಂದ ನಗರಸಭೆಯಲ್ಲಿ ಅಧ್ಯಕ್ಷರ ಅಧಿಕಾರ ಈಗ ಅತಂತ್ರಕ್ಕೆ ಸಿಕ್ಕುವಂತೆ ಮಾಡಿದೆ.
ಮಾ.೨೦ ರೊಳಗೆ ಸಭೆ ಕರೆಯಲೇಬೇಕು ಎನ್ನುವುದು ನಿಯಮ. ಅಧ್ಯಕ್ಷ ಈ.ವಿನಯಕುಮಾರ ಅವರು ಸಭೆ ಎಂದೂ ಕರೆಯಲಿದ್ದಾರೆ ಎನ್ನುವ ಕುತೂಹಲ ಎಲ್ಲರನ್ನೂ ಕಾಡುವಂತೆ ಮಾಡಿದೆ. ಕಾಂಗ್ರೆಸ್, ಬಿಜೆಪಿ, ಜಾದಳ ಹಾಗೂ ಪಕ್ಷೇತರ ಸದಸ್ಯರ ಈ ಅವಿಶ್ವಾಸ ಮಂಡನೆಗೆ ಸಂಬಂಧಿಸಿ ಅಧ್ಯಕ್ಷರ ಪ್ರತಿಕ್ರಿಯೆ ಯಾವ ರೀತಿಯಲ್ಲಿ ಇರಬಹುದು ಎನ್ನುವುದು ಗಮನಾರ್ಹವಾಗಿದೆ. ಅವಿಶ್ವಾಸ ಎದುರಿಸುವರೇ ಅಥವಾ ರಾಜೀನಾಮೆಯ ಮಧ್ಯಂತರ ಮಾರ್ಗವನ್ನು ಆಯ್ದುಕೊಳ್ಳುವರೇ ಎನ್ನುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ.
ಮೂರು ಪಕ್ಷಗಳ ಸದಸ್ಯರು ಅವಿಶ್ವಾಸ ಮಂಡಿಸಿದ್ದರಿಂದ ಇದನ್ನು ತಡೆಯುವುದು ಅಧ್ಯಕ್ಷರಿಗೆ ಸವಾಲಾಗಿದೆ. ನಿನ್ನೆ ಸೂಚನಾ ಪತ್ರವನ್ನು ಸ್ವೀಕರಿಸಿದ ವಿನಯಕುಮಾರ ಅವರು ಅವಿಶ್ವಾಸಕ್ಕೆ ಸಂಬಂಧಿಸಿ ಯಾವ ರೀತಿಯ ರಾಜಕೀಯ ದಾಳ ಹಾಕಲಿದ್ದಾರೆ?. ಒಟ್ಟಾರೆಯಾಗಿ ನಗರಸಭೆ ಅವಿಶ್ವಾಸ ಪ್ರಕರಣ ಈಗ ರಾಜಕೀಯ ಚಟುವಟಿಕೆಗಳಿಗೆ ತೀವ್ರತೆ ನೀಡಿದ್ದು, ಮುಂದೇನಾಗುತ್ತದೆ ಎನ್ನುವ ಲೆಕ್ಕಚಾರ ಈಗ ಗರಿಗೆದರಿವೆ.