ಇಂಡಿ : ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ಜನಾಂಗವರ ಕಲ್ಯಾಣಕ್ಕಾಗಿ ಸರಕಾರ ಅನೇಕ ವಿಶೇಷ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೆ. ಆದರೆ ಇವತ್ತು ಇಂಡಿ ಪಟ್ಟಣದಲ್ಲಿ ಎಸಿ ಎಸ್ಟಿ ಕೇರಿಗಳಿಗೆ ಮತ್ತು ಅವರಿಗಾಗಿ ನಿರ್ಮಿಸಿರುವ ಸಮುದಾಯ ಭವನಗಳಿಗೆ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಕೂಡಲೇ ಎಸ್ ಸಿ ಪಿ / ಟಿ ಎಸ್ ಪಿ ಯೋಜನೆ ಬಗ್ಗೆ ವಿವರಣೆ ಮತ್ತು ತನಿಖೆಗೆ ಆಗ್ರಹಿಸಿ ಕರ್ನಾಟಕ ಪ್ರದೇಶ ಮಾದಿಗರ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಹೊಸಮನಿ ಮನವಿ ಮಾಡಿದರು.
ಪಟ್ಟಣದಲ್ಲಿ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಡಾ. ಬಾಬು ಜಗಜೀವನ ರಾಂ ಸಮುದಾಯ ಭವನವು ಕೊಳಚೆನೀರಲ್ಲಿ ಹಾಗೂ ಮಳೆಯ ನೀರಲ್ಲಿ ನಿಂತು ಹಾನಿಗೀಡಾಗುತ್ತಿದೆ. ಅದನ್ನು ಸಂರಕ್ಷಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿ ಹಲವು ಬಾರಿ ಪತ್ರ ಮತ್ತು ಪೊನ್ ಕರೆಯ ಮೂಲಕ ತಿಳಿಸಲಾಗಿದೆ. ಆದರೆ ಇಲ್ಲಿಯವರೆಗೆ ಆ ಸರಕಾರಿಯ ಆಸ್ತಿಯ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳುವ, ಕಾಳಜಿ ವಹಿಸುವಂತಹ ಯಾವುದೇ ಕ್ರಮ ವಹಿಸಿರುವುದಿಲ್ಲ. ತಾಲ್ಲೂಕು ಸಹಾಯಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಇಲಾಖೆಯ ಅಧಿಕಾರಿಗಳಿಗೆ ಪತ್ರದ ಮೂಲಕ ಹಾಗೂ ಮೌಖಿಕವಾಗಿ ಗಮನಕ್ಕೆ ತಂದಿದ್ದೆವೆ. ಆದರೆ ಇಲ್ಲಿಯವರೆಗೆ ಬದಲಾವಣೆ ಕಾಣದೆ ಮೂಲಭೂತ ಸೌಕರ್ಯಗಳಿಂದ ಆ ಪ್ರದೇಶ ವಂಚಿತಗೊಂಡಿದೆ. ಇನ್ನೂ ಪಟ್ಟಣದಲ್ಲಿರುವ ಸಾಮನ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಅಂದರೆ, ಹಳ್ಳಿ, ಹಳ್ಳಿ ಜನರ ಪರಿಸ್ಥಿತಿ ಏನು..?
ಎಸಿ ಎಸ್ಟಿ ಜನಾಂಗ ವಾಸಿಸುವ ಕಾಲೋನಿ, ಕೇರಿಗಳಿಗೆ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕಾಗಿ, ಜನರ ಕಲ್ಯಾಣಕ್ಕಾಗಿ, ಅಭಿವೃದ್ಧಿಗಾಗಿ ಸರಕಾರಗಳು ವಿಶೇಷವಾಗಿ ಬಜೆಟ್ ಮೀಸಲಾಗಿ ಇಡಲಾಗುತ್ತದೆ. ಆದರೆ ಇಲ್ಲಿ ಅನುದಾನ ವಿದ್ದರೂ ಮೂಲಭೂತ ಸೌಕರ್ಯಗಳಿಂದ ಕಾಲೋನಿ ಮತ್ತು ಸಮುದಾಯ ಭವನಗಳು ಕೆಟ್ಟ ವ್ಯವಸ್ಥೆಯಲ್ಲಿ ನರಳುತ್ತಿವೆ. ಹಾಗಾಗಿ ಅನುದಾನ ಎಲ್ಲಿ ವಿನಿಯೋಗಿಸಲಾಗುತ್ತದೆ..? ಎಂಬ ಉತ್ತರ ಸಮುದಾಯದ ಜನರಿಗೆ, ಸಾರ್ವಜನಿಕರಿಗೆ ಸಿಗಬೇಕಾಗಿದೆ. ಅದಕ್ಕಾಗಿ ಸಮಗ್ರ ತನಿಖೆ ನಡೆಯಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ ಕಾನೂನಾತ್ಮಕವಾಗಿ ಸಂಘಟನೆಯ ಮೂಲಕ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದರು.