20 ವರ್ಷ ಕಳೆದರೂ ಸಿಗದ ಕಾಲುವೆ ಪರಿಹಾರ:ಮದರಿ-ಗರಸಂಗಿ ರೈತರಿಂದ ಆಕ್ರೋಶ, ಅಧಿಕಾರಿಗಳಿಗೆ ಅಂತಿಮ ಎಚ್ಚರಿಕೆ.
20 ವರ್ಷಗಳ ಅನ್ಯಾಯ: ಕಾಲುವೆಗೆ ಜಮೀನು ನೀಡಿದ ಮದರಿ-ಗರಸಂಗಿ ಗ್ರಾಮದ ರೈತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ!
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ರೈತರು: ಸ್ವಂತ ಖರ್ಚಿನಲ್ಲಿ ದಾಖಲೆ ಪತ್ರ ಒದಗಿಸಿ ಪರಿಹಾರಕ್ಕೆ ಆಗ್ರಹ.
ಮುದ್ದೇಬಿಹಾಳ: ತಾಲ್ಲೂಕಿನ ಮದರಿ ಮತ್ತು ಗರಸಂಗಿ ಗ್ರಾಮದ ರೈತರ ಜಮೀನುಗಳಲ್ಲಿ ಕಾಲುವೆ ನಿರ್ಮಾಣವಾಗಿ ಎರಡು ದಶಕಗಳು ಕಳೆದರೂ ಇಲ್ಲಿಯವರೆಗೆ ಯಾವುದೇ ಪರಿಹಾರ ನೀಡದಿರುವುದನ್ನು ಖಂಡಿಸಿ, ಸಂತ್ರಸ್ತ ರೈತರು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಶನಿವಾರ ಎಲ್ಲಾ ದಾಖಲೆಗಳೊಂದಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು.
ಮದರಿ ಮತ್ತು ಗರಸಂಗಿ ಗ್ರಾಮದ ವ್ಯಾಪ್ತಿಯಲ್ಲಿ ಹಾಯ್ದು ಹೋಗಿರುವ ಕಾಲುವೆ ಸಂಖ್ಯೆ 16ಎ-ಲ್ಯಾಟರಲ್ ನಂ.2 ಕ್ಕಾಗಿ ರೈತರು ತಮ್ಮ ಫಲವತ್ತಾದ ಜಮೀನನ್ನು ನೀಡಿದ್ದಾರೆ. ಕಾಲುವೆ ನಿರ್ಮಾಣವಾಗಿ 20 ವರ್ಷಗಳೇ ಗತಿಸಿವೆ. ಆದರೆ, ಈ ಭಾಗದ ರೈತರಿಗೆ ಇದುವರೆಗೂ ಸರ್ಕಾರದಿಂದ ನಯಾಪೈಸೆ ಪರಿಹಾರ ಧನ ತಲುಪಿಲ್ಲ. ಈ ಸಂಬಂಧ ರೈತರು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದೆ.
ಅಧಿಕಾರಿಗಳ ವಿರುದ್ಧ ವಂಚನೆಯ ಆರೋಪ:
ಈ ಹಿಂದೆ ಇದ್ದ ಬಿ.ಎಸ್. ಕುಂಟೋಜಿ ಎಂಬ ಅಧಿಕಾರಿಯು ರೈತರಿಗೆ ಸೂಕ್ತವಾಗಿ ಸ್ಪಂದಿಸದೆ ಕಾಲಹರಣ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಅಲ್ಲದೆ, ಖಾಸಗಿ ವ್ಯಕ್ತಿಯೊಬ್ಬರನ್ನು ಕಳುಹಿಸಿ ದಾಖಲೆಗಳ ಸಿದ್ಧತೆಯ ಹೆಸರಿನಲ್ಲಿ ಪ್ರತಿಯೊಬ್ಬ ರೈತರಿಂದ 500 ರೂ.ಗಳನ್ನು ವಸೂಲಿ ಮಾಡಲಾಗಿದ್ದರೂ, ಯಾವುದೇ ಕೆಲಸವಾಗಿಲ್ಲ ಎಂದು ರೈತರು ಪತ್ರದಲ್ಲಿ ದೂರಿದ್ದಾರೆ.
ಸ್ವಂತ ಖರ್ಚಿನಲ್ಲಿ ದಾಖಲೆ ನೀಡಿದ ರೈತರು:
ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅಶೋಕ ಬಿರಾದಾರ ಅವರ ಸೂಚನೆಯಂತೆ, ರೈತರು ತಾವೇ ಸ್ವತಃ ಹಣ ಖರ್ಚು ಮಾಡಿ ಅಕ್ರಚಾರಿ, ಆಕಾರ ಬಂಧ, ನಕ್ಷೆ, ಟಿಪ್ಪಣಿ ಉತಾರೆ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಇಂದು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. “ಅಧಿಕಾರಿಗಳು ಮಾಡಬೇಕಿದ್ದ ಕೆಲಸವನ್ನು ನಾವೇ ಮಾಡಿಕೊಟ್ಟಿದ್ದೇವೆ, ಇನ್ನು ಮುಂದಾದರೂ ಪರಿಹಾರ ನೀಡಿ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರಕ್ಕೆ ರೈತರ ಎಚ್ಚರಿಕೆ:
ಕಳೆದ 20 ವರ್ಷಗಳಿಂದ ನಾವು ಅನ್ಯಾಯ ಅನುಭವಿಸುತ್ತಿದ್ದೇವೆ. ಇಂದಿನಿಂದ ಒಂದು ತಿಂಗಳ ಒಳಗಾಗಿ ಈ ಬಗ್ಗೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ನಮಗೆ ಪರಿಹಾರ ಕೊಡಿಸಬೇಕು. ಒಂದು ವೇಳೆ ಈ ಬಾರಿಯೂ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು. ಆಗುವ ಅನಾಹುತಗಳಿಗೆ ಇಲಾಖೆಯೇ ನೇರ ಹೊಣೆಯಾಗುತ್ತದೆ” ಎಂದು ರೈತರು ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಶಾಂತ ನಾಡಗೌಡ, ಶರಣುಬಸು ಗೌಡರ,ಮಹಾಂತೇಶ ಉಗರಗೋಳ,ಸಂಗಮೇಶ ಹಿರೇಮಠ,ಶಿವರಾಜ ಮೇಟಿ ಮುತ್ತಪ್ಪ ಕಾನಿಕ್ಕಿ,ಸಂಗನಬಸಪ್ಪ ತೊಂಡಿಹಾಳ, ಮುನ್ನಾ ನದಾಪ,ಮಲ್ಲಪ್ಪ ತಿಗಳಿ,ಈರಪ್ಪ ಅಂಗಡಿ,ಶರಣಪ್ಪ ವಡ್ಡರ,ಗೋದವ್ವ ನಾಡಗೌಡ,ಹಣಮಂತ ವಾಲಿಕಾರ, ಸೇರಿದಂತೆ ಮದರಿ ಮತ್ತು ಗರಸಂಗಿ ಗ್ರಾಮದ ನೂರಾರು ರೈತರು ಉಪಸ್ಥಿತರಿದ್ದು, ತಮ್ಮ ನ್ಯಾಯಯುತ ಹಕ್ಕಿಗಾಗಿ ಧ್ವನಿ ಎತ್ತಿದರು.


















