ರಾಯಚೂರು: ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗ ನೈಜೇಶನ್ ಹಾಗೂ ವಿದ್ಯಾರ್ಥಿಗಳು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಥಿತಿ ಉಪನ್ಯಾಸಕರು ಕಳೆದ ೨೦ ಕ್ಕೂ ಹೆಚ್ಚು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚಿಗೆ ತೀರ್ಥಹಳ್ಳಿಯ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರಾದ ಹರ್ಷ
ಶಾನುಭೋಗ ಅವರ ಕರುಣಾಜನಕ ಆತ್ಮಹತ್ಯೆಯ ಘಟನೆ ನಮ್ಮ ಉಪನ್ಯಾಸಕರ ಅತ್ಯಂತ ಕಷ್ಟಮಯ ಜೀವನವನ್ನು ತೋರಿಸುತ್ತದೆ.ಉದ್ಯೋಗದ ಭದ್ರತೆ ಇಲ್ಲದೆ, ಎಷ್ಟೋ ತಿಂಗಳುಗಳ ಕಾಲ ಸಂಬಳವೇ ಇಲ್ಲದ ಇಂತಹ ಸಾವಿರಾರು ಅತಿಥಿ ಉಪನ್ಯಾಸಕರು ಅತ್ಯಂತ ಯಾತನಾಮಯ ಜೀವನ ನಡೆಸುತ್ತಿದ್ದಾರೆ. ಉನ್ನತ ಪದವಿ ಪಡೆದವರು , ನೆಟ್ ಪರೀಕ್ಷೆ ಉತ್ತೀರ್ಣರಾದವರು,ಡಾಕ್ಟರೇಟ್ ಮಾಡಿರುವವರು,ಕಾಲೇಜುಗಳಲ್ಲಿ ೧೦-೧೫ ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.ಕನಿಷ್ಟ ಭದ್ರತೆ , ಸಂಬಳ ದೊರಕಿಸುವಲ್ಲಿ ಸರ್ಕಾರದ ಕಡೆಯಿಂದ ಸ್ಪಂದನೆಯಾಗಲಿ ದೊರಕದೆ ಇರುವುದು ಅತ್ಯಂತ ಬೇಸರದ ವಿಷಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮಹತ್ತರ ಪಾತ ವಹಿಸುತ್ತಾರೆ.
ಈಗ ಅವರುಗಳ ಜೀವನ ಬಿಕ್ಕಟ್ಟಿಗೆ ಬಂದಿದೆ.ಅತಿಥಿ ಉಪನ್ಯಾಸಕರ ಸಂಘವು ಪ್ರಬಲ ಚಳುವಳಿಗೆ ಮುನ್ನುಗಿದ್ದಾರೆ. ಸರ್ಕಾರ ಅವರ ಬೇಡಿಕೆ ಈಡೇರಿಸುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂಬ ನಿರ್ಧಾರ ಮಾಡಿದ್ದಾರೆ . ವಿವಿಧ ಹಂತಗಳ ಚಳುವಳಿಗೆ ಕರೆ ನೀಡಿದ್ದಾರೆ. ಇದು ಅವರುಗಳ ವೈಯುಕ್ತಿಕ ಹೋರಾಟಕ್ಕಿಂತ ಹೆಚ್ಚಾಗಿ , ಅಳಿವು – ಉಳಿವಿನ ಸಂಘರ್ಷವಾಗಿದೆ. ರಾಜ್ಯದಲ್ಲಿ ಶೈಕ್ಷಣಿಕ ಗೊಂದಲವನ್ನು ಸರಕಾರ ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಹೇಶ್ ಚಿಕಲಪರ್ವಿ, ಪೀರ್ ಸಾಬ,ವೀರೇಶ್, ಹೇಮಂತ್,ಸೇರಿದಂತೆ ಇತರರು ಉಪಸ್ಥಿತರಿದ್ದರು.