ಅಫಜಲಪುರ: ಶುದ್ಧ ಕುಡಿಯುವ ನೀರಿನ ಸೇವನೆಯಿಂದ ಮನುಷ್ಯ ಉತ್ತಮ ಆರೋಗ್ಯ ಪಡೆಯಬಲ್ಲ ಎಂದು ಮಾಶಾಳ ಗ್ರಾಮದ ಹಿರಿಯ ಮುಖಂಡ ಬಾಬಾಸಾಹೇಬ ಪಾಟೀಲ ಹೇಳಿದರು. ಅವರು ತಾಲೂಕಿನ ಮಾಶಾಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ ಸುವರ್ಣ ಮಾತನಾಡಿ, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು ಎಂಬ ಧ್ಯೇಯದೊಂದಿಗೆ ಧರ್ಮಸ್ಥಳ ಸಂಸ್ಥೆಯಿಂದ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ. ಗ್ರಾಮಸ್ಥರಿಗೆ ಕೇವಲ 3 ರೂ.ಗೆ 20 ಲೀಟರ್ ನೀರು ದೊರೆಯಲಿದೆ. ಈ ಅವಕಾಶವನ್ನು ಬಳಸಿಕೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಶಿವರಾಜ ಆಚಾರ್ಯ, ವಲಯ ಮೇಲ್ವಿಚಾರಕ ಅನೀಲ ದಾವನೆ, ಮೇಲ್ವಿಚಾರಕಿ ಗೀತಾಂಜಲಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಗಲಾಬಾಯಿ ಹತ್ತಳ್ಳಿ, ಉಪಾಧ್ಯಕ್ಷೆ ಶರೀಪಾಬಿ ಪಠಾಣ, ಶಿವಣ್ಣ ಪಾರಗೊಂಡ, ದೊಡ್ಡಪ್ಪ ಹತ್ತಳ್ಳಿ, ಶಿವು ಪ್ಯಾಟಿ, ಶಿವರುದ್ರಪ್ಪ ಅವಟೆ, ಚಂದ್ರಶಾ ಕುದುರೆ ಸೇರಿದಂತೆ ಗ್ರಾಮಸ್ಥರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.