ಅಫಜಲಪುರ: ತಾಯಿ ಮಡಿಲು ಶಾಂತವಾಗಿದ್ದರೆ ಜಗತ್ತೇ ಶಾಂತಿಯ ನೆಲೆಯಾಗುತ್ತದೆ. ತಾಯಂದಿರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಯಾಗಿದೆ. ಶ್ರಾವಣ ಮಾಸದಲ್ಲಿ ಸುಮಂಗಲಿ ತಾಯಂದಿರಿಗೆ ಉಡಿ ತುಂಬುವುದು ಕೇವಲ ಒಂದು ಆಚರಣೆಯಲ್ಲ, ಮಹಿಳಾ ಶಕ್ತಿ, ಮಾತೃತ್ವ ಮತ್ತು ಕುಟುಂಬ ಮೌಲ್ಯಗಳಿಗೆ ಸಲ್ಲಿಸುವ ಗೌರವವಾಗಿದೆ. ತಾಯಂದಿರ ಆಶೀರ್ವಾದದಿಂದ ಕುಟುಂಬದಲ್ಲಿ ಸುಖ, ಶಾಂತಿ, ಐಶ್ವರ್ಯ ಮತ್ತು ಸೌಭಾಗ್ಯ ನೆಲೆಸುತ್ತದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸಂಸ್ಕಾರ, ಭಕ್ತಿ ಹಾಗೂ ಸಾಮರಸ್ಯವನ್ನು ಬೆಳೆಸುತ್ತವೆ,” ಎಂದು ಶ್ರೀ ಷ.ಬ್ರ. ಶಾಂತಲಿಂಗ ಶಿವಾಚಾರ್ಯರ ಹಿರೇಮಠದ ಪೀಠಾಧಿಪತಿಗಳಾದ ಶ್ರೀ ಶಾಂತಲಿಂಗೇಶ್ವರ ಶಿವಾಚಾರ್ಯರು ಹೇಳಿದರು.
ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಅಳ್ಳಗಿ (ಬಿ) ಗ್ರಾಮದ ಶ್ರೀ ಷ.ಬ್ರ. ಶಾಂತಲಿಂಗ ಶಿವಾಚಾರ್ಯರ ಹಿರೇಮಠದಲ್ಲಿ ಶ್ರೀ ಶಾಂತಲಿಂಗೇಶ್ವರ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ 500ಕ್ಕೂ ಹೆಚ್ಚು ಸುಮಂಗಲಿ ತಾಯಂದಿರಿಗೆ ಉಡಿ ತುಂಬುವ ಧಾರ್ಮಿಕ ಬಹು ವಿಜೃಮಣೆಯಿಂದ ಕಾರ್ಯಕ್ರಮವು ನೆರವೇರಿತು.
ಕಾರ್ಯಕ್ರಮವನ್ನು ನಾಗರಾಜ್ ಬುಜರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನಾಗರಾಜ ಧರ್ಮಣ್ಣ ಬುಜರಿ ಅವರ ಕುಟುಂಬದ ವತಿಯಿಂದ ಆಯೋಜಿಸಲಾಗಿತ್ತು.
ಪೂಜೆ, ಧಾರ್ಮಿಕ ವಿಧಿವಿಧಾನಗಳೊಂದಿಗೆ ತಾಯಂದಿರಿಗೆ ಉಡಿ ತುಂಬಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಸಾಹೇಬಗೌಡ ಪಾಟೀಲ್, ನಾನಗೌಡ ಪಾಟೀಲ್, ಅರವಿಂದ್ ಹಾಳಕಿ, ಭೀಮರಾಯ ಬುಜರಿ, ದತ್ತು ಸಾಲೋಟಗಿ, ರಾಜಕುಮಾರ ಜಾಮಗೊಂಡ, ರಮೇಶ್ ಸುರಗೊಂಡ, ಕಲ್ಲಪ್ಪ ಬುಜರಿ, ಶಿವಶರಣ ಬುಜರಿ, ನಾಗರಾಜ್ ಹಿಂದಿನಮನಿ, ಶಾಂತಪ್ಪ ಬುಜರಿ, ಶರಣಯ್ಯ ಮಠಪತಿ, ವಿಠ್ಠಲ್ ಸಾಲೋಟಗಿ, ಶೇಕಣ್ಣ ತೆಗ್ಗೆಳ್ಳಿ, ಕಲ್ಲಪ್ಪ ಸಕರಗಿ ಸೇರಿದಂತೆ ಬಿಳಿ ವಸ್ತ್ರಧಾರಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವೇದಮೂರ್ತಿ ಗವಾಯಿ ಈರಯ್ಯ ಹಿರೇಮಠ ಅವರು ಸಂಗೀತ ಸೇವೆ ಸಲ್ಲಿಸಿದರೆ, ತಬಲಾ ವಾದನವನ್ನು ಬಾಬು ಹಿತ್ತಲಶಿರೂರು ನೆರವೇರಿಸಿದರು. ಅಳ್ಳಗಿ ಗ್ರಾಮದ ಸಕಲ ಸದ್ಭಕ್ತರು ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
.