ಶಿವಾಜಿ ಮಹಾರಾಜರ ಜೀವನ ಆತ್ಮಗೌರವದ ಸಂಕೇತ- ಸಂತೋಷ ಬಂಡೆ
ಇಂಡಿ: ಶಿವಾಜಿ ಮಹಾರಾಜರು ರೈತರು, ವ್ಯಾಪಾರಿಗಳು, ಮಹಿಳೆಯರ ಗೌರವವನ್ನು ರಕ್ಷಿಸುವ ಕರುಣಾಮಯಿ ಆಡಳಿತಗಾರರಾಗಿದ್ದರು. ಜಾತ್ಯಾತೀತ ಮೌಲ್ಯಗಳಿಗೆ ತಮ್ಮ ಆಡಳಿತದಲ್ಲಿ ಮಾನ್ಯತೆ ನೀಡಿದ ಅವರ ಜೀವನವು ಅಪ್ರತಿಮ ಶೌರ್ಯ, ದೂರದೃಷ್ಟಿ ಮತ್ತು ಧರ್ಮನಿಷ್ಠೆಯ ಸಂಕೇತವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಗುರುವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶರಣಾದ ಶತ್ರುಗಳನ್ನು ಕ್ಷಮಿಸುವ, ಕಷ್ಟದ ಸಂದರ್ಭದಲ್ಲಿ ತಾಳ್ಮೆ-ಧೈರ್ಯದಿಂದ ಕೆಲಸ ಮಾಡುವ ಗುಣ ಶಿವಾಜಿಯವರದ್ದಾಗಿತ್ತು. ಅವರ ಜೀವನವು ಆತ್ಮಗೌರವ, ಸಂಘಟನೆ ಮತ್ತು ರಾಷ್ಟ್ರಪ್ರೇಮವನ್ನು ನಮಗೆ ಕಲಿಸುತ್ತದೆ.
ಇದು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ ಆಯ್ ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯದಲ್ಲಿ ತಾಯಿ ಜೀಜಾಬಾಯಿ ನೆರವಿನಿಂದ ಉತ್ತಮ ಶಿಕ್ಷಣ ಪಡೆಯುವುದರ ಜತೆಗೆ ಸಂಸ್ಕೃತಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು, ಗುರು ದಾದಾಜಿಕೊಂಡರ ಗುರುಕುಲದಲ್ಲಿ ಯುದ್ಧ ಕೌಶಲ್ಯವನ್ನು ಕಲಿತ ಶಿವಾಜಿ ಮಹಾರಾಜರ ಜೀವನಾದರ್ಶ ಎಲ್ಲರಿಗೂ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಶಿಕ್ಷಕರಾದ ಎಸ್ ಎಸ್ ಅರಬ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.


















