ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ
ವಿಜಯಪುರ: ಜಿಲ್ಲೆಯ ಕತ್ನಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಮಹತ್ವ ಹೊಂದಿದ ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ವತಿಯಿಂದ ಸ್ವಚ್ಛತಾ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪುರಾತನ ಪರಂಪರೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿರುವ ಈ ದೇಗುಲದ ಪರಿಸರವನ್ನು ಸ್ವಚ್ಛವಾಗಿಡುವುದು ಹಾಗೂ ಐತಿಹಾಸಿಕ ಕಟ್ಟಡಗಳ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂಘದ ಸದಸ್ಯರು ಸೇವೆಯಲ್ಲಿ ಭಾಗವಹಿಸಿದರು.
ಈ ದೇಗುಲವು ಹಲವಾರು ವರ್ಷಗಳಿಂದ ಸಮರ್ಪಕವಾಗಿ ನೋಡಿಕೊಳ್ಳದೆ ಬಾಳು ಬಿದ್ದಂತಾಗಿದ್ದು, ದೇವಾಲಯದ ಆವರಣ ಹಾಗೂ ಒಳಭಾಗ ಮಣ್ಣು, ಕಸ-ಕಡ್ಡಿಗಳು ಮತ್ತು ವಿವಿಧ ತ್ಯಾಜ್ಯಗಳಿಂದ ಪಾಳು ಬಿದ್ದ ಸ್ಥಿತಿಯಲ್ಲಿತ್ತು. ಇದರಿಂದ ದೇವಸ್ಥಾನದ ಐತಿಹಾಸಿಕ ಸೌಂದರ್ಯ ಮಸುಕಾಗಿತ್ತು. ಈ ಹಿನ್ನೆಲೆ ಗಾನಯೋಗಿ ಸಂಘದ ಸದಸ್ಯರು ಶ್ರಮದಾನ ಮೂಲಕ ದೇವಾಲಯವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಅದರ ಮೂಲ ಸ್ವರೂಪವನ್ನು ಪುನಃ ತಂದುಕೊಡುವ ಪ್ರಯತ್ನ ನಡೆಸಿದರು.
ಸ್ವಚ್ಛತಾ ಕಾರ್ಯದ ನಂತರ ಗರ್ಭಗುಡಿಯಲ್ಲಿ ಇರುವ ಶಿವಲಿಂಗವನ್ನು ಸ್ವಚ್ಛ ನೀರಿನಿಂದ ತೊಳೆದು, ಹಾಲಿನಿಂದ ಅಭಿಷೇಕ ಮಾಡಿ, ಬಸ್ಮ ಹಚ್ಚಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಈ ಮೂಲಕ ಭಕ್ತಿಭಾವದಿಂದ ದೇಗುಲದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರಕಾಶ್ ಆರ್ ಕೆ ಮಾತನಾಡಿ, ಐತಿಹಾಸಿಕ ದೇವಸ್ಥಾನಗಳು ಕಾಲಕ್ರಮೇಣ ಜೀರ್ಣೋದ್ಧಾರ ಆಗಬೇಕಿದ್ದು, ಅವುಗಳನ್ನು ಕಾಪಾಡಿಕೊಳ್ಳುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಇಂತಹ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಬೇಕು ಹಾಗೂ ಯುವಪೀಳಿಗೆಯಲ್ಲಿ ಸಂಸ್ಕೃತಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವೆಂದು ಅವರು ಹೇಳಿದರು.
ಸ್ಥಳೀಯರು ಮತ್ತು ಭಕ್ತರು ಗಾನಯೋಗಿ ಸಂಘದ ಈ ಸೇವಾ ಮನೋಭಾವವನ್ನು ಮೆಚ್ಚಿ, ಸಮಾಜಮುಖಿ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಬಾಹುಬಲಿ, ಮಹೇಶ್ ಕುಂಬಾರ್, ರವಿ, ಸಚಿನ್, ವಿಠ್ಠಲ್, ವೀರೇಶ್, ಸಂತೋಷ್, ವಿಕಾಸ್, ರಾಜು, ಸಾಗರ್, ವಾಸು, ಪ್ರದೀಪ್, ಸಂದೀಪ್, ಮಂಜುನಾಥ್, ಅಜಿತ್, ನಿಖಿಲ್, ದೇವರಾಜ್. ಇನ್ನಿತರರು ಇದ್ದರು.


















