ಚೆನ್ನಮ್ಮ ಮೂರ್ತಿ ಅನಾವರಣ 9ಕ್ಕೆ; ಸಮಸ್ತ ನಾಗರಿಕರು ಭಾಗವಹಿಸಿ ಗೌರವ ಸಲ್ಲಿಸಿ
ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾದ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಹಾಗೂ ಮೂರ್ತಿ ಅನಾವರಣ ಇದೇ ಜ.9 ರ ಶುಕ್ರವಾರ ದಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಂದ ನೆರವೇರಲಿದ್ದು, ಜಿಲ್ಲೆಯ ಸಮಸ್ತ ನಾಗರಿಕರು, ದೇಶಭಕ್ತರು, ಸರ್ವ ಹಿಂದೂ ಕುಲಬಾಂಧವರು, ಮಹಿಳೆಯರು ಭಾಗವಹಿಸಬೇಕೆಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ, ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ದಿಟ್ಟತನದಿಂದ ಹೋರಾಟ ನಡೆಸಿ, ಮೊದಲ ಯುದ್ದದಲ್ಲೇ ವಿಜಯ ಸಾಧಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮನವರಿಗೂ ವಿಜಯಪುರ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಚೆನ್ನಮ್ಮನ ತಾಯಿ ಪದ್ಮಾವತಿಯ ತವರು ಇಂಡಿ ತಾಲ್ಲೂಕಿನ ಜಂಬಗಿ ಗ್ರಾಮದ ದೇಶಮುಖ ಮನೆತನ ಎನ್ನುವುದು ಹೆಮ್ಮೆಯ ವಿಷಯ.
ತಾಯಿ ಮಗನಂತೆ ಇದ್ದ ಕಿತ್ತೂರು ಚನ್ನಮ್ಮ ಹಾಗೂ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನರು ಕೇವಲ ಐತಿಹಾಸಿಕ ವ್ಯಕ್ತಿಗಳು ಮಾತ್ರವಲ್ಲ. ಅವರಲ್ಲಿದ್ದ ದೇಶಪ್ರೇಮ, ಧೈರ್ಯ, ಆದರ್ಶ, ಸಾಹಸ ಕಾರ್ಯಗಳು ಮುಂದಿನ ಪೀಳಿಗೆಗೆ ತಿಳಿಸುವುದು ಅತ್ಯಗತ್ಯ. ಇಂತಹ ವೀರ ಮಹಿಳೆಗೆ ಜನ್ಮ ನೀಡಿದ ತಾಯಿ ಪದ್ಮಾವತಿಯ ತವರು ನೆಲವಾದ ವಿಜಯಪುರ ಜಿಲ್ಲೆಯ ಕೇಂದ್ರ ಸ್ಥಾನವಾದ ವಿಜಯಪುರ ನಗರದಲ್ಲಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನ ವೃತ್ತ ಸ್ಥಾಪಿಸಿ, ಅಶ್ವಾರೂಢ ಮೂರ್ತಿ ನಿರ್ಮಾಣ ಮಾಡಲಾಗಿದೆ. ಇದರ ಅನಾವರಣಕ್ಕೆ ಎಲ್ಲರೂ ಸಾಕ್ಷಿಯಾಗಿ ಗೌರವ ಮತ್ತು ಶೋಭೆ ತರಲು ತಿಳಿಸಿದ್ದಾರೆ.


















