ವರದಿ : ಬಸವರಾಜ ಕುಂಬಾರ ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಲಂಚಗುಳಿತನದ ವಿರುದ್ಧ ಸ್ವಪಕ್ಷೀಯರೇ ಧ್ವನಿ ಎತ್ತುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಮುಖವಾಡವನ್ನು ಕಳಿಚಿದಂತಾಗಿದೆ. ಈ ಸರ್ಕಾರದ ಜನವಿರೋಧಿ, ಅಭಿವೃದ್ದಿಶೂನ್ಯ ನೀತಿ ಖಂಡಿಸಿ ಜಾತ್ಯಾತೀತ ಜನತಾದಳದಿಂದ ಹೋರಾಟ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಪಾವಡೆಪ್ಪಗೌಡ ಹವಾಲ್ದಾರ್, ಈಚೆಗೆ ಬೆಂಗಳೂರಿನಲ್ಲಿ ಜೆಡಿಎಸ್ ಸೇರ್ಪಡೆಗೊಂಡಿರುವ ನೀರಾವರಿ ತಜ್ಞ ಬಸನಗೌಡ ಬಿ.ಪಾಟೀಲ ಹಿರೇಮುರಾಳ ತಿಳಿಸಿದರು. ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿ ಹೋರಾಟದ ರೂಪುರೇಷೆ ನಿರ್ಧರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಜನಪಕ್ಷಪಾತ ನೀತಿ, ಲಂಚಗುಳಿತನ ಹೆಚ್ಚಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಜನಸಾಮಾನ್ಯರ ಕೆಲಸ, ಕಾರ್ಯಗಳು ಈ ಸರ್ಕಾರದಲ್ಲಿ ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಆಡಳಿತ ನಿಂತ ನೀರಿನಂತಾಗಿದೆ. ಅಧಿಕಾರಿಗಳು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂಧಿಸುತ್ತಿಲ್ಲ. ತಮ್ಮದೇ ಸರ್ಕಾರದ ವಿರುದ್ಧ ಶಾಸಕರಾದ ಬಿ.ಆರ್.ಪಾಟೀಲ, ರಾಜು ಕಾಗೆ ಸೇರಿ ಹಲವರು ಧ್ವನಿ ಎತ್ತಿ ಬಹಿರಂಗವಾಗಿ ಟೀಕಿಸತೊಡಗಿದ್ದಾರೆ. ಸಾರ್ವಜನಿಕರಿಗೆ ಉಪಯುಕ್ತವಾಗಿರುವ ರಸ್ತೆ, ಕಾಲುವೆ ಕಾಮಗಾರಿಗಳು ನಿಂತು ಹೋಗಿವೆ. ಅಧಿಕಾರಿಗಳು ನಿರಂಕುಶರಾಗಿದ್ದಾರೆ. ಈ ಸರ್ಕಾರದಲ್ಲಿ ಹಗಲು ದರೋಡೆ ನಡೆಯುತ್ತಿದೆ. ಇದನ್ನು ಪ್ರತಿಭಟಿಸುವುದು ಅನಿವಾರ್ಯವಾಗಿದೆ ಎಂದರು.
ಹವಾಲ್ದಾರ್ ಅವರು ಮಾತನಾಡಿ ಆದಷ್ಟು ಬೇಗ ಮುದ್ದೇಬಿಹಾಳಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ, ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವರು ಆಗಮಿಸಿ ಪಕ್ಷದ ಬಲವರ್ಧನೆ ಕುರಿತು ಕ್ರಮ ಕೈಕೊಳ್ಳಲಿದ್ದಾರೆ. ಅವರು ಆಗಮಿಸುವ ದಿನದಂದು ಬೃಹತ್ ಕಾರ್ಯಕ್ರಮ ಆಯೋಜಿಸಿ ಹೊಸದಾಗಿ ಪಕ್ಷ ಸೇರ್ಪಡೆಯಾಗಿರುವ ನೀರಾವರಿ ತಜ್ಞ ಬಸನಗೌಡ ಬಿ.ಪಾಟೀಲ ಹಿರೇಮುರಾಳ ಸೇರಿದಂತೆ ಪಕ್ಷ ಸೇರಿದವರನ್ನು ಗೌರವಿಸುವ, ಪಕ್ಷಕ್ಕೆ ಸೇರುವವರನ್ನು ಸ್ವಾಗತಿಸಿಕೊಳ್ಳುವ ಯೋಜನೆ ಇದೆ. ಶೀಘ್ರವೇ ಪಕ್ಷದ ತಾಲೂಕು ಘಟಕ ಸೇರಿ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಎದುರಿಸುವ ಕುರಿತು ತಂತ್ರಗಾರಿಕೆ ರೂಪಿಸಲು ಪಕ್ಷದ ವರಿಷ್ಠರ ಮಾರ್ಗದರ್ಶನದಲ್ಲಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಹಲವಾರು ಯೋಜನೆ ಹಮ್ಮಿಕೊಳ್ಳುವ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ನ ಜಿಲ್ಲಾ ಉಪಾಧ್ಯಕ್ಷ ಬಸವಂತ್ರಾಯಗೌಡ ದೇಸಾಯಿ ಕೇಸಾಪುರ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಸೈಯದ್ಸುಲೇಮಾನ್ ಸಾತಿಹಾಳ, ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮೋತಿಲಾಲ ಮ್ಯಾಗೇರಿ, ಮುಖಂಡ ಲಾಳೇಮಶ್ಯಾಕ ನಾಯ್ಕೋಡಿ (ಬುಡ್ಡಾ) ಸೇರಿದಂತೆ ಉಪಸ್ಥಿತರಿದ್ದರು.
೩೦ರಂದು ಬೃಹತ್ ಹೋರಾಟ: ಕಾಂಗ್ರೆಸ್ ಸರ್ಕಾರದ ವಿರುದ್ಧ ಜೂನ್ ೩೦ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಮುದ್ದೇಬಿಹಾಳ ಪಟ್ಟಣದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಅಂಬೇಡ್ಕರ್ ವೃತ್ತದಿಂದ ತಾಲೂಕು ಆಡಳಿತ ಸೌಧವರೆಗೆ ರ್ಯಾಲಿ ನಡೆಸಿ ಈ ಸರ್ಕಾರದ ಜನವಿರೋಧಿ ನೀತಿ ಪ್ರತಿಭಟಿಸಿ, ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಗುತ್ತದೆ. ತಾಲೂಕಿನಾದ್ಯಂತ ಇರುವ ಜೆಡಿಎಸ್ ಮುಖಂಡರು, ಅಭಿಮಾನಿಗಳು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕು ಎಂದು ಪಾವಡೆಪ್ಪಗೌಡ ಹವಾಲ್ದಾರ್, ಬಸನಗೌಡ ಪಾಟೀಲ ಹಿರೇಮುರಾಳ ಮನವಿ ಮಾಡಿದ್ದಾರೆ.
© 2025 VOJNews - Powered By Kalahamsa Infotech Private Limited.