ವಿಷಾದ ‘ಮಾದಕ ವಸ್ತುಗಳಿಗೆ ದಾಸರಾಗಬೇಡಿ’
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ನಶೆ ಅಥವಾ ಮತ್ತು ಭರಿಸುವ ವಸ್ತುಗಳತ್ತ ವಿದ್ಯಾರ್ಥಿಗಳು, ಯುವಜನತೆ ಕಣ್ಣೆತ್ತಿಯೂ ನೋಡಬಾರದು. ಮಾದಕ ವಸ್ತುಗಳಾದ ಗಾಂಜಾ, ಮಾವಾ ಆಫೀಮು ಇನ್ನಿತರ ಪದಾರ್ಥಗಳಿಗೆ ದಾಸರಾದರೆ ವಿದ್ಯಾರ್ಥಿ ಜೀವನ, ಯೌವ್ವನ ಸೇರಿ ಇಡೀ ಜೀವನವೇ ಹಾಳಾಗುತ್ತದೆ ಎಂದು ಸಿಪಿಐ ಮೆಹಮೂದ್ ಹೇಳಿದರು.
ಪಟ್ಟಣದ ಶ್ರೀ ವಿಜಯಮಹಾಂತೇಶ ಮಂಗಲ ಭವನದಲ್ಲಿ ಪೊಲೀಸ್ ಇಲಾಖೆ ನೇತೃತ್ವದಲ್ಲಿ, ತಾಲೂಕಾಡಳಿತ, ಪುರಸಭೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಮಾದಕ ವಸ್ತುಗಳ ದುರುಪಯೋಗ ಮತ್ತು ಸಾಗಣೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದುಶ್ಚಟಗಳು ಜೀವನವನ್ನೇ ಬಲಿ ತೆಗೆದುಕೊಳ್ಳುತ್ತವೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನೇ ಕಳೆಯುತ್ತವೆ. ಕೌಟುಂಬಿಕ ನೆಮ್ಮದಿ ಹಾಳುಗೆಡವುತ್ತವೆ. ಸಮಾಜದಲ್ಲಿ ಇಂಥವರಿಗೆ ಬೆಲೆ ಇಲ್ಲದಂತೆ ಮಾಡುತ್ತವೆ. ಇದರಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಎಂದರೆ ಯಾರೂ ವ್ಯಸನಗಳು ಆಕರ್ಷಿತರಾಗಬಾರದು. ಮಾದಕ ದ್ರವ್ಯ ನಿಷೇಧ ದಿನಾಚರಣೆಯ ಈ ದಿನದಂದು ಎಲ್ಲರೂ ಪ್ರತಿಜ್ಞೆ ಮಾಡಿ ವ್ಯಸನಗಳಿಂದ ದೂರ ಇರಬೇಕು. ಆರೋಗ್ಯ ಚನ್ನಾಗಿದ್ದರೆ ಮಾತ್ರ ಏನಾದರೂ ಸಾಧಿಸುವುದು ಸಾಧ್ಯ ಎನ್ನುವುದನ್ನು ಮನದಟ್ಟು ಮಾಡಿಕೊಂಡು ಮುನ್ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಪಾನ್ ಶಾಪ್ ಸೇರಿ ಇನ್ನಿತರ ಅಂಗಡಿಗಳಲ್ಲಿ ನಸೆ ತರಿಸುವ ವಸ್ತುಗಳ ಮಾರಾಟ ಕಂಡು ಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದರು.
ಬಿಇಒ ಬಿ.ಎಸ್.ಸಾವಳಗಿ ಅವರು ಮಾತನಾಡಿ, ಯಾವುದೇ ಶಾಲೆ, ಕಾಲೇಜು ಆವರಣ, ಸುತ್ತಮುತ್ತ ತಂಬಾಕು ಮತ್ತು ತಂಬಾಕು ಉತ್ಪನ್ನ ಮಾರಾಟ ಮಾಡಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದರು. ಮಾದಕ ವ್ಯಸನಗಳಿಂದ ದುಷ್ಪರಿಣಾಮಗಳ ಕುರಿತು ಆಗುವ ಡಾ ಮಂಜುನಾಥ ಮಸಳಿ, ಉಪನ್ಯಾಸಕ ಐ.ಬಿ.ಹಿರೇಮಠ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಆರೋಗ್ಯಾ ಧಿಕಾರಿ ಡಾ। ಸತೀಶ ತಿವಾರಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಅಂಗಡಿ ಇದ್ದರು, ಅಕ್ಷರದಾಸೋಹ ಸಹಾಯಕನಿರ್ದೇಶಕ ಎಂ.ಎಂ.ಬೆಳಗಲ್ಲ ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಎಂ.ಎಸ್.ಕವಡಿಮಟ್ಟಿ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯಾ ತೇರದಾಳ ಇದ್ದರು. ಸಿಆರ್ಪಿ ಜಿ.ಎಚ್. ಚವ್ಹಾಣ ಸ್ವಾಗತಿಸಿದರು. ಶಿಕ್ಷಕ ಟಿ.ಡಿ.ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನ ಪಟ್ಟಣದ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರು, ಅಧಿಕಾರಿಗಳು, ಪೊಲೀಸರ ಮುಂದಾಳತ್ವದಲ್ಲಿ ಜಾಗೃತಿ ಜಾಥಾ ನಡೆಸಿ ಮಾದಕ ವಸ್ತುಗಳ ಸೇವನೆ ವಿರುದ್ಧ ಜನಜಾಗೃತಿ ಮೂಡಿಸಿದರು.