ಸರ್ಕಾರಿ ಹಾಸ್ಟೇಲ್ನಲ್ಲಿ ವ್ಯಸನಮುಕ್ತ ಅಭಿಯಾನ:
ದುಷ್ಚಟಗಳು ಬದುಕುವ ದಿನಗಳನ್ನು ಕಡಿಮೆಗೊಳಿಸುತ್ತವೆ.
ವರದಿ : ಬಸವರಾಜ ಕುಂಬಾರ ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಮಾದಕ ವ್ಯಸನಗಳು ಯುವಜನತೆಯ ಬದುಕಿನ ದಿನಗಳನ್ನು, ಆಯಸ್ಸನ್ನು ಕಡಿಮೆಗೊಳಿಸುತ್ತವೆ. ತಂಬಾಕು, ಗುಟ್ಕಾ, ಗಾಂಜಾ, ಆಫೀಮು ಇನ್ನಿತರ ಮಾದಕ ಪದಾರ್ಥಗಳ ಸೇವನೆ, ದುಷ್ಚಟಗಳಿಂದ ಭವಿಷ್ಯದ ಸುಂದರ ಬದುಕು ನಾಶವಾಗಿ ಅಂಥ ವ್ಯಸನಿಗಳ ಕೌಟುಂಬಿಕ ಜೀವನವೇ ಅವನತಿಯತ್ತ ಸಾಗುತ್ತದೆ. ವಿದ್ಯಾರ್ಥಿಗಳು ಮಾದಕ ವ್ಯಸನಗಳಿಗೆ ಬಲಿಯಾಗದೆ ಉತ್ತಮ ಜೀವನ, ಬದುಕು ರೂಪಿಸಿಕೊಳ್ಳಬೇಕು ಎಂದು ಹಿರಿಯ ವಾರ್ಡನ್ ಎಸ್.ಜಿ.ವಾಲಿಕಾರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ತಂಗಡಗಿ ರಸ್ತೆಯ ಜ್ಞಾನಭಾರತಿ ಶಾಲೆಯ ಪಕ್ಕದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ| ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮಾದಕ ವ್ಯಸನಮುಕ್ತ ಅಭಿಯಾನ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದುಷ್ಚಟಗಳು ವಿದ್ಯಾರ್ಥಿ ಜೀವನದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತವೆ. ಇಂದಿನ ದಿನಗಳಲ್ಲಿ ಮಾನವನ ಆಯಸ್ಸು ೬೦ ವರ್ಷಗಳಿಗೆ ಸೀಮಿತವಾಗತೊಡಗಿದೆ. ಹೈಬ್ರಿಡ್ ಜೀವನ ಏರುಗತಿಯಲ್ಲಿ ಸಾಗುತ್ತಿದೆ. ನಾವು ಸೇವಿಸುವ ಎಲ್ಲ ವಸ್ತುಗಳಲ್ಲಿ ಹೈಬ್ರಿಡ್ ಅಂಶ ಇರುತ್ತವೆ. ಇಂಥ ಪರಿಸ್ಥಿತಿಯಲ್ಲಿ ದುಷ್ಚಟಗಳು ಅಂಟಿಕೊAಡಲ್ಲಿ ಬದುಕು ನರಕವಾಗುತ್ತದೆ. ದುಷ್ಚಟಗಳನ್ನು ವಿದ್ಯಾರ್ಥಿಗಳು ತ್ಯಜಿಸುವುದರ ಜೊತೆಗೆ ತಮ್ಮ ಅಕ್ಕಪಕ್ಕದವರು, ಸ್ನೇಹಿತರಿಗೂ ಇದರ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಅತಿಥಿಯಾಗಿದ್ದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಾರ್ಡನ್ ಶ್ರೀಕಾಂತ ಸಲಗರ್ ಅವರು ಮಾತನಾಡಿ ಸರ್ಕಾರಿ ಹಾಸ್ಟೇಲುಗಳಲ್ಲಿ ಗುಟ್ಕಾ, ತಂಬಾಕು ಇನ್ನಿತರ ನಿಷೇಧಿತ ಪದಾರ್ಥಗಳ ಬಳಕೆಗೆ ನಿಷೇಧ ಇದೆ. ಮೇಲಿಂದ ಮೇಲೆ ಮಾದಕ ವಸ್ತುಗಳ ಸೇವನೆಯ ಅಪಾಯಕಾರಿ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಚಟಗಳಿಗೆ ದಾಸರಾಗದೆ ಓದಿನತ್ತ ಲಕ್ಷö್ಯ ವಹಿಸಿ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಬೇಕು. ತಂದೆ, ತಾಯಿಯ ಆಸೆಯಂತೆ ನಡೆದುಕೊಂಡು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ದುಷ್ಚಟಗಳ ಕೆಟ್ಟ ಪರಿಣಾಮವನ್ನು ಅರಿತುಕೊಂಡು ನಡೆದುಕೊಳ್ಳಬೇಕು ಎಂದರು. ಪತ್ರಕರ್ತರಾದ ಸಿದ್ದು ಚಲವಾದಿ,ಹಣಮಂತ ಬೆಳಗಲ್ ಅತಿಥಿಗಳಾಗಿದ್ದರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಡಾ| ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.