ವಿಶ್ವ ಅಪ್ಪಂದಿರ ದಿನ : ಅಪ್ಪ ಬದುಕು ರೂಪಿಸುವ ಶಿಲ್ಪಿ
ವಿಜಯಪುರ: ಅಪ್ಪ ಅಂದರೆ ಕೇವಲ ಜೀವ ಕೊಟ್ಟವನಲ್ಲ. ಬದುಕು ರೂಪಿಸುತ್ತಾ, ಧೈರ್ಯವಾಗಿ ಎಲ್ಲರ ಎದುರು ನಿಲ್ಲಲು ದಾರಿ ತೋರಿದ ಶಿಲ್ಪಿಯಾಗಿದ್ದಾನೆ ಎಂದು ವಿಜಯಪುರದ ಆರ್ಯಭಟ ಕರಿಯರ್ ಅಕಾಡೆಮಿ ಅಧ್ಯಕ್ಷ ಅಶೋಕ ಬಿರಾದಾರ ಹೇಳಿದರು.
ಗುರುವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಿಶ್ವ ಅಪ್ಪಂದಿರ ದಿನದ ನಿಮಿತ್ತ ಹಮ್ಮಿಕೊಂಡ ‘ಅಪ್ಪ-ಬದುಕಿಗೆ ಬೆಳಕು’ ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುರಾಣ ಕಾಲದಿಂದಲೂ ತಂದೆ ಮಕ್ಕಳ ಸಂಬಂಧ ಶ್ರೇಷ್ಠ ಎನಿಸಿಕೊಂಡಿದೆ. ತನ್ನ ನೋವ ನುಂಗಿ ಮಕ್ಕಳಿಗೆ ಪ್ರೀತಿ ಧಾರೆ ಎರೆಯುವ ತಂದೆಗೆ ಮಕ್ಕಳ ಭವಿಷ್ಯವೇ ಮುಖ್ಯ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಅಪ್ಪ ಅಂದರೆ ಆಸರೆ, ತ್ಯಾಗ, ಗಾಂಭೀರ್ಯ, ಪ್ರೀತಿ. ಅಪ್ಪ ದೇವರು ಕೊಟ್ಟ ವರ. ತಂದೆ ಜೊತೆಗಿದ್ದರೆ ಸಾಕು ಪ್ರಪಂಚದಲ್ಲಿ ಏನು ಬೇಕಾದರೂ ಸಾಧಿಸುತ್ತೇನೆ ಎಂಬ ವಿಶ್ವಾಸ ಸದಾ ಇರುತ್ತದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಮಾತನಾಡಿ,
ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ. ದರ್ಪ-ಕೋಪ- ಶಿಸ್ತು-ಅನುಮಾನ ಇವುಗಳ ಸಮ್ಮಿಲನವೇ ಅಪ್ಪ. ಆತ ಸರ್ವಾಧಿಕಾರಿಯಲ್ಲ. ಬದಲಿಗೆ ಸರಿ ತಪ್ಪುಗಳನ್ನು ತಿದ್ದುವ ಮಾರ್ಗದರ್ಶಕ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ಪಾಲಕ ಪ್ರತಿನಿಧಿ ಅಶೋಕ ಗಾಣಿಗೇರ ಮಾತನಾಡಿದರು. ಭೀರಪ್ಪ ಪೂಜಾರಿ, ಕಾರ್ಯದರ್ಶಿ ಸುನಂದಾ ಹುಣಶ್ಯಾಳ ಹಾಗೂ ಶಿಕ್ಷಕರಾದ ರಾಘು ಮೊಗಳ, ಸಚೀನ ಅವಟಿ, ನವೀನ ಬಂಡೆನ್ನವರ, ಜಯಶ್ರೀ ಬಂಗಾರಿ, ಲಕ್ಷ್ಮೀ ಮಸೂತಿ,ರೇಣುಕಾ ಭಜಂತ್ರಿ, ಶ್ರುತಿ ಪೂಜಾರಿ, ಸಿದ್ದು ರತ್ನಾಕರ, ರಾಜಶೇಖರ ಶಿರಶ್ಯಾಡ, ಅಲ್ಲಾಭಕ್ಷ ಇನಾಮದಾರ ಸೇರಿದಂತೆ ನೂರಾರು ಪಾಲಕರು ಮತ್ತು ಮಕ್ಕಳು ಭಾಗವಹಿಸಿದ್ದರು.