ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಮದ ಪೆಟ್ರೋಲ್ ಬಂಕ್ ತಿರುವಿನಲ್ಲಿ ಹುನಗುಂದ-ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯನ್ನು ಅಗಲೀಕರಣ ಮಾಡದೆ ಹಾಗೆಯೇ ಬಿಡಲಾಗಿದೆ. ಇದರಿಂದ ಕಿರಿದಾಗಿರುವ ಆ ರಸ್ತೆಯಲ್ಲಿ ನಿತ್ಯದ ಸಾರ್ವಜನಿಕ ಸಂಚಾರ ಕಷ್ಟಕರವಾಗಿದೆ. ಈ ರಸ್ತೆಯನ್ನು ಹೆದ್ದಾರಿಗೆ ಪರಿವರ್ತಿಸಬೇಕು. ಇಲ್ಲವಾದಲ್ಲಿ ವಿವಿಧ ಜನಪರ ಸಂಘಟನೆಗಳೊಂದಿಗೆ ಸಮಸ್ಯಾತ್ಮಕ ಸ್ಥಳದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ಯುವಜನ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಮತ್ತು ಪದಾಧಿಕಾರಿಗಳು ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದ (ಕೆಆರ್ಡಿಸಿಎಲ್) ಬೆಂಗಳೂರು ಕಚೇರಿಯ ಅಧೀಕ್ಷಕರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
ಕೆಲ ವರ್ಷಗಳ ೬೫-೭೦ ಕಿಮಿ ಉದ್ದದ ರಾಜ್ಯ ಹೆದ್ದಾರಿ ನಿರ್ಮಿಸಲಾಗಿದೆ. ಮಾರ್ಗಮಧ್ಯೆ ತಂಗಡಗಿ ಗ್ರಾಮ ಪ್ರವೇಶಿಸುವ ದುರ್ಗಾದೇವಿ ದೇವಸ್ಥಾನದಿಂದ ಪೆಟ್ರೋಲ್ ಬಂಕ್ ತಿರುವಿನವರೆಗೆ ಅಂದಾಜು ೧೦೦-೧೫೦ ಮೀಟರ್ ಉದ್ದದವರೆಗೆ ಕಿರಿದಾದ ರಸ್ತೆ ಇದ್ದು ಅಕ್ಕಪಕ್ಕ ಮನೆಗಳಿವೆ. ಹೆದ್ದಾರಿ ಮಾಡುವಾಗ ಅಲ್ಲಿನ ನಿವಾಸಿಗಳು ತಕರಾರು ಮಾಡಿದ ಕಾರಣಕ್ಕೆ ಆ ಜಾಗವನ್ನು ಹೆದ್ದಾರಿಗೆ ಮೇಲ್ದರ್ಜೆಗೇರಿಸದೆ ಹಾಗೆಯೇ ಬಿಡಲಾಗಿದೆ. ಆ ಮನೆಗಳಿಗೆ ಪರಿಹಾರವನ್ನೂ ಕೊಡಲಾಗಿದೆ. ಹೆದ್ದಾರಿ ಪೂರ್ಣಗೊಂಡು ೪-೫ ವರ್ಷ ಕಳೆದರೂ ಕಿರಿದಾದ ರಸ್ತೆಯನ್ನು ಹೆದ್ದಾರಿಯನ್ನಾಗಿ ಪರಿವರ್ತಿಸಿಲ್ಲ. ಇದರಿಂದ ಆ ಜಾಗದಲ್ಲಷ್ಟೇ ಸಂಚಾರ ಕಡುಕಷ್ಟಕರವಾಗಿದೆ ಎಂದು ವಾಲಿ ತಿಳಿಸಿದರು.
ಕೆಲವು ಪ್ರಭಾವಿಗಳು ಜನರ ಜೀವನದ ಜೊತೆ ಆಟವಾಡುತ್ತಿದ್ದಾರೆ. ರಸ್ತೆಯ ಎರಡು ಬದಿಯ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ್ದು ಮಳೆ ಬಂದಾಗಲೆಲ್ಲ ಅವು ತುಂಬಿಕೊಂಡು ಕೊಳಚೆ ನೀರು ಊರೊಳಗೆ ಹರಿದು ಜನಜೀವನ ಹೈರಾಣಾಗಿಸುತ್ತದೆ. ಗಲೀಜು ಪರಿಸರ ನಿರ್ಮಾಣಗೊಂಡು ರೋಗ ರುಜಿನಗಳು ಉಲ್ಭಣಗೊಳ್ಳುತ್ತಿವೆ. ಈ ಅವ್ಯವಸ್ಥೆ ಸರಿಪಡಿಸಿ ಹೆದ್ದಾರಿ ನಿರ್ಮಿಸುವಂತೆ ಕೋರಿ ನಾಲ್ಕು ವರ್ಷಗಳ ಹಿಂದೆಯೇ ಕೆಆರ್ಡಿಸಿಎಲ್ನ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈವರೆಗೂ ರಸ್ತೆ ಪಕ್ಕದಲ್ಲಿರುವ ಮನೆಗಳನ್ನು ತೆರವುಗೊಳಿಸಿ ಹೆದ್ದಾರಿ ನಿರ್ಮಿಸಿಲ್ಲ ಎಂದು ಅವರು ದೂರಿದರು.
ಈ ರಸ್ತೆಯಲ್ಲಿ ಸಂಚರಿಸುವ ಬಸ್ಸುಗಳು, ಕಬ್ಬು ತುಂಬಿದ ಲಾರಿಗಳು, ಇತರೆ ವಾಹನಗಳು ಎದುರು ಬದುರಾಗಿ ಬಂದರೆ ಜೀವವೇ ಹೋಗಿ ಬಂದತಾಗುತ್ತದೆ. ಒಂದು ವಾಹನ ತೂರಾಡುತ್ತಾ, ಕುಣಿದಾಡುತ್ತಾ ಆಕಡೆ ಈಕಡೆ ವಾಲಿಕೊಂಡು ಬಂದ ನಂತರವೇ ಇನ್ನೊಂದು ವಾಹನಕ್ಕೆ ಅಲ್ಲಿಂದ ಹೊಗಲು ಸಾದ್ಯವಾಗುತ್ತದೆ. ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ನಿರಂತರವಾಗಿ ಸಂಬವಿಸುತ್ತಲೇ ಇರುತ್ತವೆ. ಇಲ್ಲಿಯ ಜನಕ್ಕೆ ದಿನನಿತ್ಯವೂ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹೆದ್ದಾರಿ ನಿರ್ಮಿಸಿದರೂ ಒಂದು ಚಿಕ್ಕ ಸಮಸ್ಯೆಯನ್ನು ಪರಿಹರಿಸಲು ಆಗದಿರುವುದು ದುರಂತವೇ ಸರಿ. ೧೫ ದಿನಗಳೊಳಗಾಗಿ ಸಮಸ್ಯೆ ಬಗೆಹರಿಸಲು ರಸ್ತೆ ಪಕ್ಕದ ಪರಿಹಾರ ಪಡೆದ ಮನೆಗಳನ್ನು ತೆರವುಗೊಳಿಸಬೇಕು. ಎರಡು ಬದಿಯ ಚರಂಡಿಯನ್ನು ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಸಮಸ್ಯೆ ಇರುವ ಜಾಗದಲ್ಲಿಯೇ ಗ್ರಾಮಸ್ಥರು, ಕನ್ನಡಪರ, ದಲಿತಪರ, ಪ್ರಗತಿಪರ, ರೈತಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.