ಪ್ರತಿಯೊಬ್ಬ ರಕ್ತದಾನಿಯು ಜೀವ ರಕ್ಷಕ-ಸಂತೋಷ ಬಂಡೆ
ವಿಜಯಪುರ: ರಕ್ತ ಒಂದು ಸಂಜೀವನಿ ಇದ್ದಂತೆ. ರಕ್ತದಾನ ಮಾಡುವುದು ಮಾನವನ ಕರ್ತವ್ಯ ಎಂದು ತಿಳಿದು ರಕ್ತದಾನ ಮಾಡಿ, ಜೀವ ಉಳಿಸಬಲ್ಲ ಉದಾರ ಮನಸ್ಸು ಎಲ್ಲರಲ್ಲೂ ಬರಬೇಕು. ಪ್ರತಿಯೊಬ್ಬ ರಕ್ತದಾನಿಯು ಜೀವ ರಕ್ಷಕನಿದ್ದಂತೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶನಿವಾರದಂದು ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ‘ವಿಶ್ವ ರಕ್ತದಾನಿಗಳ ದಿನ’ ವನ್ನು ಉದ್ಘಾಟಿಸಿ ಮಾತನಾಡಿದರು.
ಜಾತಿ, ಮತ, ಧರ್ಮವನ್ನು ಲೆಕ್ಕಿಸದೆ ಜನರನ್ನು ಒಂದುಗೂಡಿಸುವ ಮಾನವೀಯತೆಯ ಸಂಕೇತ ರಕ್ತದಾನವಾಗಿದೆ. ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸುವ ಜೊತೆಗೆ, ಭವಿಷ್ಯದಲ್ಲಿ ಬರಬಹುದಾದ ಕಾಯಿಲೆಯನ್ನು ತಪ್ಪಿಸಲು ನೆರವಾಗುತ್ತದೆ. ರಕ್ತದಾನ ಮಾಡುವಲ್ಲಿ ಯುವಕರ ಪಾತ್ರ ಬಹುಮುಖ್ಯ ಎಂದರು.
ವಿಶ್ವನಾಥ ಕಲಗೊಂಡ ಮಾತನಾಡಿ, ರಕ್ತವು ನಮ್ಮ ದೇಹಕ್ಕೆ ಅತ್ಯಗತ್ಯವಾಗಿರುವ ದ್ರವಗಳಲ್ಲಿ ಒಂದಾಗಿದೆ. ಇದು ನಮ್ಮ ದೇಹದ ಸುಗಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ರಕ್ತದಾನ ಮಾಡುವುದೆಂದರೆ ವ್ಯಕ್ತಿಯೊಬ್ಬನಿಗೆ ಮರುಜೀವ ಕೊಟ್ಟಂತೆ ಎಂದು ಹೇಳಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ,
ರಕ್ತ ಕೊಟ್ಟರೆ ದೇಹ ದುರ್ಬಲವಾಗುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವವರಿಗೆ ರಕ್ತದಾನ ಮಾಡಿ, ಅವರ ಜೀವ ಉಳಿಸುವ ಮನಸ್ಸು ಮಾಡಬೇಕು ಎಂದರು.
ವಿಶ್ವನಾಥ ಹಂಡಿ, ಬಸವರಾಜ ಸಾರವಾಡ, ಶ್ರೀಶೈಲ ಸಮಗೊಂಡ, ಆನಂದ ಗಂಗನಳ್ಳಿ ಹಾಗೂ ಅನೇಕ ಮಕ್ಕಳು ಭಾಗವಹಿಸಿದ್ದರು.