ಮುದ್ದೇಬಿಹಾಳ: ಸಂಭ್ರಮದಿಂದ ಬಕ್ರೀದ್ ಆಚರಣೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದ ತಾಳಿಕೋಟೆ ರಸ್ತೆ ಪಕ್ಕದಲ್ಲಿರುವ ಈದಗಾದಲ್ಲಿ ಮುಸ್ಲೀಮ್ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಅಗಲಿದ ತಮ್ಮ ಹಿರಿಯರನ್ನು ಸ್ಮರಿಸುವ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಪಟ್ಟಣದ ಸಂದಲ ಮಸೀದಿ, ಬಾಗಬಾನ ಮಸೀದಿ, ಮದೀನಾ ಮಸೀದಿ, ಮಕ್ಕಾ ಮಸೀದಿ, ಮೀನಾ ಮಸೀದಿ, ಅಬೂಬಕರ ಮಸೀದಿ, ಅರ್ಫಾತ್ ಮಸೀದಿ, ಉಮರ ಫಾರೂಖ ಮಸೀದಿ, ಮುಸ್ತಲ್ಫಾ ಮಸೀದಿ, ಆಕ್ಸಾ ಮಸೀದಿ, ತಯ್ಯಬಾ ಮಸೀದಿ, ಬಿಲಾಲ ಮಸೀದಿ, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಕಿಲ್ಲಾದಲ್ಲಿರುವ ಜಾಮೀಯಾ ಮಸೀದಿ ಹತ್ತಿರ ಸೇರಿದ ಸಮಾಜದವರು ಅಲ್ಲಿಂದ ಸಾಮೂಹಿಕವಾಗಿ ತಕಬೀರ್ ಹೇಳುತ್ತ ಅಂದಾಜು ಒಂದೂವರೆ ಕಿಮಿ ಅಂತರದಲ್ಲಿರುವ ಈದಗಾಕ್ಕೆ ಆಗಮಿಸಿದರು. ಈದಗಾದಲ್ಲಿ ನೆಲದ ಮೇಲೆ ಕುಳಿತುಕೊಳ್ಳಲು ಆಗದ ಹಿರಿಯರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಜಾಮೀಯಾ ಮಸೀದಿಯೆ ಮೌಲಾನಾ ಆಫ್ತಾಬ ಧರ್ಮಬೋಧನೆ ಮಾಡಿ ತ್ಯಾಗ, ಬಲಿದಾನ ಸಾಂಕೇತವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುವುದು. ಪ್ರವಾದಿ ಇಬ್ರಾಹೀಮರು ಆ ಅಲ್ಲಾಹ್ ನಿಗಾಗಿ ತಮ್ಮ ಪ್ರೀತಿಯ ಮಗ ಇಸ್ಮಾಯಿಲ್ರನ್ನೂ ತ್ಯಾಗ ಮಾಡಲು ಸಿದ್ಧರಿದ್ದರು. ಅಲ್ಲಾಹ್ ಅವರ ತ್ಯಾಗಕ್ಕೆ ಮೆಚ್ಚಿ, ಮಗನ ಬದಲಿಗೆ ಕುರಿಯನ್ನು ಬಲಿ ಪಡೆಯುತ್ತಾರೆ ಎಂದರು. ಅಲ್ಲಾಹ್ ತ್ಯಾಗ ಬಲಿದಾನವನ್ನು ಸ್ವೀಕರಿಸಿದ ದಿನದಿಂದ ಇಂದಿನವರೆಗೂ ತ್ಯಾಗ ಬಲಿದಾನವನ್ನು ಅಲ್ಲಾಹನ ಮೇಲೆ ನಿಷ್ಠೆ ಪ್ರಾಮಾಣ ಕತೆ ಸಂಕೇತವಾಗಿ ಆಚರಿಸುತ್ತೇವೆ ಎಂದರು. ಈದಗಾದಲ್ಲಿ ದಟ್ಟಣೆ ಹೆಚ್ಚಾಗಿ ಪ್ರಾರ್ಥನೆಗೆ ಸ್ಥಳಾವಕಾಶದ ಕೊರತೆ ಉಂಟಾಗಿದ್ದರಿಂದ ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲೂ ಕುಳಿತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದರಿಂದ ಕೆಲ ಹೊತ್ತು ಸಂಚಾರಕ್ಕೆ ಅಡಚಣೆ ಆಗಿತ್ತು. ಪೊಲೀಸರು ಉಪಸ್ಥಿತರಿದ್ದು ಪರ್ಯಾಯ ಮಾರ್ಗದ ಮೂಲಕ ಜನದಟ್ಟಣೆಯ ನಡುವೆಯೂ ಸಂಚಾರವನ್ನು ಸುವ್ಯವಸ್ಥಿತವಾಗಿ ನಿರ್ವಹಿಸಿದರು.
ಪ್ರಮುಖರಾದ ಡಾ.ಎ.ಎಂ.ಮುಲ್ಲಾ, ಡಿ.ಡಿ.ಬಾಗವಾನ, ಅಲೀಮ್ ಮೋಮೀನ್, ಅಬ್ದುಲ್ಗನಿ ನದಾಫ ಜನಾಬ, ಉಸ್ಮಾನ್ ಗನಿ ಮುಲ್ಲಾ,ಅಬ್ದುಲ್ ಗಫೂರ ಮಕಾನದಾರ, ಸದ್ದಾಂ ಕುಂಟೋಜಿ, ಏನ್ ಬಿ ಮುದ್ನಾಳ, ವಹಾಬ ಮೋಮೀನ್, ಅಬ್ದುಲ್ ಖಾದಿರ್ ಮತ್ತೆದಾರ, ಅಲ್ಲಾಭಾಕ್ಷ ನಾಯ್ಕೋಡಿ, ಹಾಜಿ ತೆಗ್ಗಿ, ಅಬ್ದುಲ್ ಮಜೀದ್ ಮಕಂದಾರ್ , ಮೈಬೂಬ್ ಹಳ್ಳಿ, ಗುಲಾಂ ದಫೇದಾರ್, ಅಮೀನಸಾಬ ಮುಲ್ಲಾ, ಎಂ.ಎ.ಮುದ್ದೇಬಿಹಾಳ, ಮಹಿಬೂಬ ಗೊಳಸಂಗಿ, ಪಿಂಟೂ ಸಾಲಿಮನಿ, ಸೇರಿದಂತೆ ಸಾವಿರಾರು ಮುಸ್ಲೀಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಪಿಎಸೈ ಸಂಜಯ್ ತಿಪ್ಪರಡ್ಡಿ ಸಿಬ್ಬಂದಿ ಸೂಕ್ತ ಬಿಗಿ ಭದ್ರತೆ ವಹಿಸಿದ್ದರು.
ಮಹಿಳೆಯರು ತಮ್ಮ ಅಕ್ಕಪಕ್ಕದವರ ಮನೆಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಸಿಹಿ ಖಾದ್ಯ ಸುರಕುರಮಾ ತಯಾರಿಸಿ ಅನ್ಯ ಜಾತಿಯ ಸ್ನೇಹಿತರನ್ನು ಮೆನೆಗೆ ಆಹ್ವಾನಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಈ ವೇಳೆ ಅಗಲಿದ ಹಿರಿಯರನ್ನು ಸ್ಮರಿಸಿಕೊಳ್ಳಲಾಯಿತು.