ಮಾಸ್ತಿ ಕನ್ನಡ ಸಾಹಿತ್ಯ ಸಮೃದ್ಧಗೊಳಿಸಿದ ಸಾಧಕ-
ಸಂತೋಷ ಬಂಡೆ
ವಿಜಯಪುರ: ಮಾಸ್ತಿ ಅವರು ಸಣ್ಣಕಥೆಗಳ ಹರಿಕಾರರಾಗಿ ಹಳ್ಳಿಯ ಬದುಕು, ರೈತ, ಪರಿಸರ, ಜನರ ಸಂಸ್ಕೃತಿ ಆಚಾರ-ವಿಚಾರದ ಬಗ್ಗೆ ಬಿಂಬಿಸಿದ್ದಾರೆ. ಇಂದಿನ ಜನತೆಗೆ ತಮ್ಮ ಬದುಕು ಕಟ್ಟಿಕೊಳ್ಳಲು ಮಾಸ್ತಿ ಅವರ ಸಾಹಿತ್ಯ ಪ್ರೇರಣೆಯಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರದಂದು ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ‘ಮಾಸ್ತಿ ವೆಂಕಟೇಶ ಅಯ್ಯಂಗಾರ್’ ಅವರ ಜಯಂತಿ ನಿಮಿತ್ತ ಹಮ್ಮಿಕೊಂಡ ‘ಮಾಸ್ತಿ: ಬದುಕು ಬರಹ’ ಕುರಿತು ಅವರು ಮಾತನಾಡಿದರು.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಸಾಹಿತ್ಯ ನಮ್ಮ ನಿಜವಾದ ಆಸ್ತಿ, ಮಾಸ್ತಿ ಕನ್ನಡದ ಆಸ್ತಿ ಎಂಬ ಮಾತು ನಿಜವಾಗಬೇಕಾದರೆ ಪ್ರತಿಯೊಬ್ಬ ಪ್ರಜೆ, ಸಾಹಿತಿಗಳು ಮಾಸ್ತಿಯವರ ಸಾಹಿತ್ಯವನ್ನು ಓದಿ ತಮ್ಮ ಜೀವನದಲ್ಲಿ ಸಾರ್ಥಕತೆ ಪಡೆಯಬೇಕು ಹೇಳಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರರು ಸಾಹಿತ್ಯದ ಸರ್ವಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಸಾಧಕ. ತಮ್ಮ ಉನ್ನತ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ಕನ್ನಡನಾಡು ನುಡಿಯ ಉತ್ಕರ್ಷಕ್ಕೇ ತಮ್ಮ ಬದುಕನ್ನು ಮುಡಿಪಾಗಿಟ್ಟವರು ಎಂದು ಹೇಳಿದರು.
ಶಿಕ್ಷಕ ರಾಘು ಮೊಗಳ ಮಾತನಾಡಿ, ಮಾಸ್ತಿಯವರ ಲೇಖನಿಯಲ್ಲಿ ಸಣ್ಣಕಥೆ, ಕಾವ್ಯ, ನಾಟಕ, ಕಾದಂಬರಿ, ಜೀವನ ಚರಿತ್ರೆ, ವಿಮರ್ಶೆ, ಅನುವಾದ ಸಾಹಿತ್ಯ, ಸಂಪಾದಕೀಯದಂತಹ ವೈವಿಧ್ಯಮಯವಾದ ಸಾಹಿತ್ಯ ಸೃಷ್ಟಿಯಾಯಿತು. ಕನ್ನಡಕ್ಕೆ ಅವರ ಸೇವೆ ಸದಾ
ಅನುಪಮವಾದುದು ಎಂದು ಹೇಳಿದರು.
ರಾಜು ಕತ್ನಳ್ಳಿ, ಆನಂದ ಗಂಗನಳ್ಳಿ, ಶಂಕರ ಮಾನೆ, ಪ್ರವೀಣ ಕೊಣಶಿರಸಗಿ ಸೇರಿದಂತೆ ಅನೇಕ ಶಾಲಾ ಮಕ್ಕಳು ಭಾಗವಹಿಸಿದ್ದರು.