ಭಾರತೀಯ ಯೋಧರ ಪರಾಕ್ರಮ ಜಗತ್ತಿಗೆ ಗೊತ್ತು -ಸಚಿವ ಶಿವಾನಂದ
ಯುದ್ಧಗಳು ನಡೆಯದಿದ್ದರೆ ಭಾರತ ಅಭಿವೃದ್ಧಿಯಲ್ಲಿ ಇನ್ನೂ ಮುಂದಿರಲಿದೆ
ಬಸವನಬಾಗೇವಾಡಿ : ಯಾವುದೇ ದೇಶಕ್ಕೆ ಯುದ್ಧ ಅನಿವಾರ್ಯ ಎಂದಾಗಬಾರದು, ಆಕಸ್ಮಿಕವಾಗಿ ಯುದ್ಧ ನಡೆಯುತ್ತವೆ. ಭಾರತೀಯ ಯೋಧರ ಪರಾಕ್ರಮ ಜಗತ್ತಿಗೆ ಗೊತ್ತಿದೆ. ಎಂಥ ಭಯಾನಕ ಪರಿಸ್ಥಿತಿ ಎದುರಾದರೂ ಭಾರತೀಯ ಯೋಧರು ದೇಶದ ಗಡಿಯಲ್ಲಿ ಜೀವದ ಹಂಗು ತೊರೆದು ಹೋರಾಡಿ ದೇಶದ ನಾಗರಿಕರು ನೆಮ್ಮದಿಯ ಜೀವಿಸುವಂತೆ ಮಾಡುತ್ತಿದ್ದಾರೆ ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ತಮ್ಮ ಸ್ವಕ್ಷೇತ್ರ ಬಸವನಬಾಗೇವಾಡಿ ವ್ಯಾಪ್ತಿಯ ಉಕ್ಕಲಿ ಗ್ರಾಮದವರು ಹುತಾತ್ಮ ವೀರಯೋಧ ಸಿ.ಆರ್.ಪಿ.ಎಫ್. ಎಸ್ಐ ಶ್ರೀಶೈಲ ಯಮನಪ್ಪ ಹಿರೋಡಗಿ ಅವರ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ವೀರಯೋಧರ ದೇಶಭಕ್ತಿಯ ಬದ್ದತೆ ಸದಾ ಸ್ಮರಣೀಯ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರ ಭಾರತೀಯರನ್ನು ಎರಡು ಜಾಗತಿಕ ಯುದ್ಧದಲ್ಲಿ ತೊಡಗಿಸಿತ್ತು. ಆಗಲೇ ಭಾರತೀಯ ಯೋಧರ ಪರಾಕ್ರಮ ವಿಶ್ವಕ್ಕೆ ಮನವರಿಕೆ ಆಗಿದೆ ಎಂದರು.
ಸ್ವಾತಂತ್ರ್ಯ ನಂತರವೂ ಭಾರತವು ಯೋಧರು ಚೈನಾ, ಪಾಕಿಸ್ತಾನ ವಿರುದ್ಧ ನಡೆದ ಯುದ್ಧಗಳಲ್ಲಿ ಪರಾಕ್ರಮ ಮೆರೆದಿದ್ದಾರೆ. ನೆರೆಯ ದೇಶ ಅನಗತ್ಯವಾಗಿ ಯುದ್ಧದ ಪರಿಸ್ಥಿತಿ ನಿರ್ಮಿಸುತ್ತಿದೆ. ಇದಕ್ಕೆ ನಮ್ಮ ವೀರ ಯೋಧರೂ ತಕ್ಕ ಉತ್ತರ ನೀಡುತ್ತಲೇ ಬಂದಿದ್ದಾರೆ ಎಂದು ಬಣ್ಣಿಸಿದರು.
ರಷ್ಯಾ-ಉಕ್ರೇನ್ ದೇಶಗಳ ಮಧ್ಯೆ ನಡೆಯುತ್ತಿರುವ ಯುದ್ಧ ಇವನ ಉಲ್ಲೇಖಿಸಿದ ಸಚಿವರು, ಯಾವುದೇ ದೇಶ, ನಾಗರಿಕರು ಯುದ್ಧ ಬಯಸುವುದಿಲ್ಲ. ಪ್ರಸಕ್ತ ಸಂದರ್ಭದಲ್ಲಂತೂ ವಿಜ್ಞಾನದ ತಾಂತ್ರಿಕತೆ ಬೆಳೆದಂತೆ ಎಲ್ಲೋ ಕುಳಿತು ಹತ್ತಾರು ಸಾವಿರ ಕಿ.ಮೀ. ದೂರಕ್ಕೆ ಬಾಂಬ್ ಹಾಕುವ ತಂತ್ರಜ್ಞಾನ ಬೆಳೆದಿದೆ. ಆದರೆ ಯುದ್ಧಗಳು ಅಭಿವೃದ್ಧಿ ಪರ ದೇಶಗಳ ಪ್ರಗತಿಗೆ ಮಾರಕ ಎಂದು ವಿಶ್ಲೇಷಿಸಿದರು.
ದೇಶದ 140 ಕೋಟಿ ನಾಗರಿಕರ ರಕ್ಷಣೆಗಾಗಿ
ಭಾರತೀಯ ಸುಮಾರು 15-20 ಲಕ್ಷ ಸೇನಾ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 14 ಲಕ್ಷ ಸೈನಿಕರು ಭೂದಳದಲ್ಲೂ, 1.5 ಲಕ್ಷದಷ್ಟು ಯೋಧರು ವಾಯುದಳದಲ್ಲೂ ಹಾಗೂ 1.5 ಲಕ್ಷ ಸೈನಿಕರು ನೌಕಾದಳದಲ್ಲೂ ಕರ್ತವ್ಯದ ನಿರ್ವಹಿಸುತ್ತಿದ್ದಾರೆ. ಯುದ್ಧ ಬೇಡವೆಂದರೂ ಭಾರತ ವಾರ್ಷಿಕವಾಗಿ ಸುಮಾರು 6 ಲಕ್ಷ ಕೋಟಿ ಹಣವನ್ನು ವ್ಯಯಿಸುತ್ತಿದೆ. ಒಂದೊಮ್ಮೆ ಯುದ್ದವೇ ನಡೆಯದಿದ್ದರೆ ಭಾರತ ಸಮೃದ್ಧ ರಾಷ್ಟ್ರವಾಗಿರುತ್ತಿತ್ತು ಎಂದು ವಿವರಿಸಿದರು.
ಈ ಯೋಧರು ಕೆಚ್ಚೆದೆಯಿಂದ ವೈರಿಗಳ ವಿರುದ್ಧ ಕಣ್ಣಿಟ್ಟು, ನಮ್ಮನ್ನೆಲ್ಲ ಕಣ್ಣರೆಪ್ಪೆಯಂತೆ ಕಾಯುತ್ತಿದ್ದು, ಸೈನಿಕರ ತ್ಯಾಗ, ಬಲಿದಾನಗಳು ಸದಾ ಸ್ಮರಣೀಯ ಎಂದರು.
ಭಾರತಾಂಬೆಯ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವ ವೀರಯೋಧರನ್ನು ಪಡೆದಿರುವ ಉಕ್ಕಲಿ ಗ್ರಾಮಸ್ಥರೆ ಧನ್ಯರು, ಪುಣ್ಯವಂತರು. ದೇಶದ ಸೈನಿಕರೆಂದರೆ ದೇವರ ಸಮಾನರು. ಶ್ರೀಶೈಲ ಹಿರೋಡಗಿ ಅವರಂಥ ಅಮರವೀರ ಯೋಧರನ್ನು ಪಡೆದಿರುವ ನಿವೇ ಧನ್ಯರು ಎಂದರು.
ಗ್ರಾಮದ ಹಿರಿಯರಾದ ಅಣ್ಣಾಸಾಹೇಬ ಎಂ.ಪಾಟೀಲ, ಪಂಡಿತ ಓಜಿ, ತಾ. ಪಂ. ಮಾಜಿ ಸದಸ್ಯ ಸುಭಾಶ ಕಲ್ಯಾಣಿ, ಉಕ್ಕಲಿ ಗ್ರಾ.ಪಂ. ಅಧ್ಯಕ್ಷ ಮುದಕಪ್ಪ ಸಿಂದಗಿ, ಗ್ರಾಮ ಪಂಚಾಯಿತಿ ಸದಸ್ಯರು, ಯೋಧನ ಕುಟುಂಬ ಸದಸ್ಯರ ರಾವುತ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಮುತ್ತಪ್ಪ ನಂದಿ, ಯಲ್ಲಪ್ಪ ಈಟಿ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.
ಸಿ.ಆರ್.ಪಿ.ಎಫ್. ಯೋಧರಾಗಿ ಸುದೀರ್ಘ ಸೇವೆಯ ಮೂಲಕ ಭಾರತ ಮಾತೆಯ ಸೇವೆ ಸಲ್ಲಿಸಿರುವ ಶ್ರೀಶೈಲ ಯಮನಪ್ಪ ಹಿರೋಡಗಿ ಅಪ್ರತಿಮ ಸೇನಾನಿಯಾಗಿದ್ದರು. ಹುತಾತ್ಮ ಯೋಧ ಶ್ರೀಶೈಲ ಅವರು ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿರುತ್ತಾರೆ.
ಬಸವನಬಾಗೇವಾಡಿ : ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಉಕ್ಕಲಿ ಗ್ರಾಮದಲ್ಲಿ ಹುತಾತ್ಮ ಯೋಧ ಶ್ರೀಶೈಲ ಯಮನಪ್ಪ ಹಿರೋಡಗಿ ಅವರ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.