ನಾಗಠಾಣದಲ್ಲಿ ಸಂಭ್ರಮದ ಚೌಡೇಶ್ವರಿ ದೇವಿಯ ಜಾತ್ರೆ
ವಿಜಯಪುರ: ಬಾದ್ಮಿ ಅಮಾವಾಸ್ಯೆ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನದ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ 5 ದಿನಗಳವರೆಗೆ ಜರುಗಿತು.
ಸೋಮವಾರದಂದು ಶ್ರೀ ಷ ಬ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರ ನೇತೃತ್ವದಲ್ಲಿ ನೂತನ ಚೌಡೇಶ್ವರಿ ಮೂರ್ತಿ ಹಾಗೂ ಕಳಸದ ಭವ್ಯ ಮೆರವಣಿಗೆಯು ನೂರಾರು ತಾಯಂದಿರ ಕುಂಭ ಹಾಗೂ ಆರತಿ ಮೇಳದೊಂದಿಗೆ ಗ್ರಾಮದ ಬಜಾರ ಮಾರ್ಗವಾಗಿ ಸಾಗಿ, ಗಂಗೆ ಸೀತಾಳ ಪೂಜೆ ಮುಗಿಸಿಕೊಂಡು ಮರಳಿ ಗುಡಿಗೆ ಆಗಮಿಸಿತು. ನಂತರ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಡೆಯಿತು.
ಹಾಗೆಯೇ ನೂರಾರು ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ಕೂಡ ನೆರವೇರಿತು. ಸಂಜೆ ಭಕ್ತ ಮಹಿಳೆಯರು ಅಂಬಲಿ ಬಿಂದಿಗೆ ಹೊತ್ತು, ಬಾಸಿಂಗ, ಕಳಸದ ಮೆರವಣಿಗೆಯು ಗುಡಿ ತಲುಪಿ, ಅಲ್ಲಿ ಎಲ್ಲರೂ ಅಂಬಲಿ ಅರ್ಪಿಸಿದರು.
ಮಂಗಳವಾರದಂದು ಬೆಳಿಗ್ಗೆ ಗುಡಿಯಲ್ಲಿ ಹೋಮ ಹವನ ಮಾಡಿ, ಶ್ರೀ ಷ ಬ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹಾಗೂ ಬೊಮ್ಮನಹಳ್ಳಿಯ ಗುರುಶಾಂತ ಶಿವಾಚಾರ್ಯರ ನೇತೃತ್ವದಲ್ಲಿ ಧರ್ಮ ಸಭೆ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ 5 ದಿನಗಳ ಕಾಲ ಗುಡೂರಿನ ಅನ್ನದಾನ ಶಾಸ್ತ್ರಿಗಳಿಂದ ಹಾಗೂ ಪ್ರೌಢಶಾಲಾ ಶಿಕ್ಷಕ ಪರಶುರಾಮ ಕುಂಬಾರ ಅವರಿಂದ ತಾಯಿ ಚೌಡೇಶ್ವರಿ ದೇವಿಯ ಪುರಾಣ ಜರುಗಿತು. ದೇವಿಯ ಮುಖವಾಡ ಹೊತ್ತವರು ಅಪಾರ ಸಂಖ್ಯೆಯ ಭಕ್ತರು, ವಾದ್ಯ ಮೇಳದೊಂದಿಗೆ ಸಾಗುತ್ತಾ, ಇಡೀ ಗ್ರಾಮದ ಭಕ್ತರ ಮನೆ ಮನೆಗೆ ಭೇಟಿ ನೀಡಿ, ಕಾಯಿ-ಕರ್ಪೂರದೊಂದಿಗೆ ನೈವೇದ್ಯ ಸ್ವೀಕರಿಸಿ, ಉಡಿ ತುಂಬಿಕೊಂಡು ಆಶೀರ್ವದಿಸುವ ದೃಶ್ಯ ವಿಶೇಷವಾಗಿತ್ತು.
ಕುಂಬಾರ ಮನೆತನದ ಮಹಿಳೆಯರು ಬಜಾರಕ್ಕೆ ಗುಡಿಯಿಂದ ಕಿಚಡಿ ತರುವರು. ಅಲ್ಲಿ ಔಡಲ ಕಟ್ಟಿಗೆಯ ಹಂದರದಲ್ಲಿ ಮಜ್ಜಿಗೆ ಕಡಿಯುವಳು. ತದನಂತರ ಅಲ್ಲಿಂದ ಕುಣಿಯುತ್ತಾ ಗುಡಿಗೆ ಮರಳಿ ಬರುವದು ಪ್ರತಿವರ್ಷದ ಸಂಪ್ರದಾಯವಾಗಿದೆ.
ಚೌಡೇಶ್ವರಿಯು ಅತ್ಯಂತ ಶಕ್ತಿಶಾಲಿ ದೇವತೆಗಳಲ್ಲಿ ಒಬ್ಬಳಾಗಿದ್ದು, ಈಕೆಯ ಬಳಿ ಏನೇ ಬೇಡಿಕೊಂಡರೂ ಅದು ಈಡೇರುತ್ತದೆ ಎನ್ನುವ ನಂಬಿಕೆ ನಾಗಠಾಣ ಗ್ರಾಮದ ಭಕ್ತರಲ್ಲಿ ಈಗಲೂ ಜನಜನಿತವಾಗಿದೆ.
ಕುಂಬಾರ ಮನೆತನದ ಭೀಮರಾಯ, ಅಮೋಘಸಿದ್ದ, ಪವಾಡೇಶ, ಶಿವಾನಂದ, ಅಮೋಘಸಿದ್ದ, ಮಲ್ಲು, ಶರಣು,
ಸೋಮನಿಂಗ,ಶ್ರೀಶೈಲ, ಸಿದ್ದು, ಪುಂಡಲೀಕ, ವಿಠಲ,ಬಾಬು,
ಮಹಾಂತೇಶ,ನರಸಪ್ಪ, ಹನಮಂತ, ಬಸವರಾಜ, ಪಿಂಟು, ಗಿರಮಲ್ಲ, ಚವಡಪ್ಪ, ಅರವಿಂದ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.


















