ಬರಡು ನೆಲದ ಬಸವನಬಾಗೇವಾಡಿ ಬಂಗಾರದ ಕಡ್ಡಿಯಾಗಲಿದೆ: ಸಚಿವ ಶಿವಾನಂದ
ಕೊಲ್ಹಾರ ಪುನರ್ವಸತಿ ಕೇಂದ್ರಕ್ಕೆ ಬೆಳ್ಳಿಹಬ್ಬ, 23 ರಂದು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಡಿಸಿಎಂ ಡಿಕೆಶಿ ಚಾಲನೆ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿದರೂ ಪ್ರಚಾರ ಪಡೆದಿಲ್ಲ, ಜನರ ಹೃದಯ ಗೆದ್ದಿದ್ದೇನೆ
ಬಸವನಬಾಗೇವಾಡಿ : ಕೃಷ್ಣಾ ಮೇಲ್ದಂಡೆ ಯೋಜನೆಯಿಂದಾಗಿ ಮುಳುಗಡೆಯಾಗಿರುವ ಕೊಲ್ಹಾರ ಪುರ್ನವಸತಿ ಪಟ್ಟಣ ನಿರ್ಮಾಣವಾಗಿ 25 ವರ್ಷ ಕಳೆದಿವೆ. ಈ ನನ್ನ ಅವಧಿಯಲ್ಲಿ ಕೊಲ್ಹಾರ ಪಟ್ಟಣ ಸಮಗ್ರ ಅಭಿವೃದ್ಧಿಯಾಗಿದ್ದು, ಮೇ 23 ರಂದು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಬಸವನಬಾಗೇವಾಡಿ ಪಟ್ಟಣದ ಗವಿಮಠದ ಶ್ರೀಪವಾಡ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ದ್ವಿತಿಯ ವರ್ಷದ ಸಾಧನೆ ಸಮಾವೇಶ ನಡೆಯಲಿರುವ ಹೊಸಪೇಟೆ ಬೃಹತ್ ಸಮಾವೇಶದ ಪೂರ್ವ ಸಿದ್ಧತಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಲ್ಹಾರದಲ್ಲಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಸಮಾವೇಶಕ್ಕೆ ಶೀಘ್ರವೇ ಪೂರ್ವ ಸಿದ್ಧತಾ ಸಭೆ ಕರೆಯುವುದಾಗಿ ಹೇಳಿದರು.
ಸ್ವಯಂ ಕೊಲ್ಹಾರ ಪಟ್ಟಣದವರನ್ನೇ ಶಾಸಕರನ್ನಾಗಿ ಮಾಡಿದರೂ ಪುನರ್ವಸತಿ ಗ್ರಾಮದ ಅಭಿವೃದ್ಧಿ ಮಾಡಲಾಗಿರಲಿಲ್ಲ. ನಾನು ಬಸವನಬಾಗೇವಾಡಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗುತ್ತಲೇ ಕೊಲ್ಹಾರ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆಧ್ಯತೆ ನೀಡಿದ್ದೇನೆ. ಇಡೀ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳುಗಡೆ ಪ್ರದೇಶಗಳಲ್ಲಿ ಬಾಗಲಕೋಟೆ ನಗರವನ್ನು ಹೊರತುಪಡಿಸಿದರೆ ಕೊಲ್ಹಾರ ಪಟ್ಟಣವೇ ಸಮಗ್ರ ಅಭಿವೃದ್ಧಿ ಕಂಡಿರುವ ಬೃಹತ್ ಪುನರ್ವತಿ ಕೇಂದ್ರ ಎನಿಸಿದೆ. ಪಟ್ಟಣ ಪಂಚಾಯತ್ ದರ್ಜೆ ಸ್ಥಾನ ನೀಡಿದ್ದು, ತಾಲೂಕ ಕೇಂದ್ರವಾಗಿ ರೂಪಿಸಿ ಜನತೆ ಆಶಯದಂತೆ ಸಮಗ್ರ ಅಭಿವೃದ್ಧಿ ಮಾಡುವ ಬದ್ಧತೆ ತೋರಿದ್ದೇನೆ ಎಂದರು.
ನಿಯಮಿತವಾಗಿ ನಿರಂತರ ಸಂತೆ, ಅದರಲ್ಲೂ ಜಾನುವಾರು ಸಂತೆ ನಡೆಸುತ್ತ ಬಂದಿರುವ ಕೊಲ್ಹಾರ ಪಟ್ಟಣದಲ್ಲಿ ಕೃಷಿ ಮಾರುಕಟ್ಟೆ ಬಲವರ್ಧನೆಗಾಗಿ 7 ಕೋಟಿ ರೂ. ಅನುದಾನ ನೀಡಿದ್ದೇನೆ ಎಂದರು.
ನಿಮ್ಮೆಲ್ಲರ ಆಶೀರ್ವಾದ ಹಾಗೂ ಆಶಯದಂತೆ ಬಸವನಬಾಗೇವಾಡಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಮಾಡಿದ್ದು, ಪ್ರಚಾರ ಪಡೆಯಲಿಲ್ಲ. ಅಡಿಗಲ್ಲು, ಉದ್ಘಾಟನೆ ಅಂತೆಲ್ಲ ಕಾರ್ಯಕ್ರಮ ಮಾಡದೇ ಅಭಿವೃದ್ಧಿ ಮಾಡಿದ್ದು, ಕ್ಷೇತ್ರದ ಮತದಾರರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದ್ದೇನೆ. ಈ ಭಾಗದ ಬರಡು ಭೂಮಿಯನ್ನು ಬಂಗಾರದ ಕಡ್ಡಿ ಮಾಡುವುಕ್ಕಾಗಿ ಹಲವು ನೀರಾವರಿ ಯೋಜನೆ ಅನುಷ್ಠಾನಗೊಳಿಸಿದ್ದೇನೆ. ಕ್ಷೇತ್ರದಲ್ಲಿ ಪ್ರತಿ ವರ್ಷ ಒಂದು ಕೆರೆ ನಿರ್ಮಿಸುವ ಗುರಿ ಹೊಂದಿದ್ದು, ಇದರ ಭಾಗವಾಗಿ ಮನಗೂಳಿ ಪಟ್ಟಣ ಪ್ರದೇಶದಲ್ಲಿ ಮಾದರಿ ಕೆರೆಯೊಂದು ನಿರ್ಮಾಣಗೊಂಡಿದೆ. ಜಿಲ್ಲೆಯಲ್ಲಿ ಕೆರೆ ತುಂಬುವ ಯೋಜನೆ ವರ್ಷದಲ್ಲಿ 2-3 ಬಾರಿ ಕೆರೆಗೆ ನೀರು ತುಂಬುವುದರಿಂದ ಅಂತರ್ಜಲ ಹೆಚ್ಚಳವಾಗಿ ರೈತರ ಕೃಷಿ ಚಟುವಟಿಕೆಗೆ ಹಾಗೂ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಇದಲ್ಲದೇ ಇಡೀ ಕ್ಷೇತ್ರದಲ್ಲಿ ಅಗತ್ಯ ಇರುವ ಹಳ್ಳಿಗಳಲ್ಲಿ ಸರ್ಕಾರಿ ಹೈಸ್ಕೂಲ್, ಪದವಿ ಪೂರ್ವ, ಪದವಿ ಕಾಲೇಜುಗಳನ್ನು ಸ್ಥಾಪಿಸಿ, ಕಟ್ಟಸ ಸಹಿತ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಹಲವು ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸಿದ್ದು, ಶೈಕ್ಷಣಿಕ ಪ್ರಗತಿ ಸಾಧನೆ ಮಾಡಲಾಗಿದೆ. ಇಡೀ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಯಾಗಿದ್ದು, ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತೆ ಮಾಡಲಾಗಿದೆ ಎಂದು ವಿವರಿಸಿದರು.
ಎರಡು ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಕಾಂಗ್ರೆಸ್ ಪಕ್ಷ ಜನತೆಗೆ ನಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಅನುಷ್ಟಾನಕ್ಕೆ ತಂದಿದ್ದೇವೆ. ಬಡವರ ಪರವಾದ ಯಶಸ್ವಿ ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸದಾ ಜನಪರ ಎಂಬುದನ್ನು ಸಾಬೀತು ಪಡಿಸಿದೆ ಎಂದರು.
ಹುಸಿ ಭರವಸೆಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಾಜು ಪತ್ರಿಕೆಯೂ ಇಲ್ಲದೇ 70 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಘೋಷಿಸಿ, ಬಿಟ್ಟು ಹೋಗಿದ್ದರು. ಆದರೆ ನಾವು ಬಂದಮೇಲೆ ಅವರು ಘೋಷಿಸಿದ ಯೋಜನೆಗಳನ್ನು ಮುಗಿಸಿ, ಬಿಲ್ ಪಾವತಿಸಿದ್ದೇವೆ. ಬಿಜೆಪಿ ನಾಯಕರು ಪಂಚ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಬರಿದು ಎಂದು ಆರೋಪಿಸಿದರೂ, ಸಿದ್ಧರಾಮಯ್ಯ-ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ನಮ್ಮ ಸರ್ಕಾರ ಬಡವರು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದು, ಇತರೆ ಯೋಜನೆಗಳಿಗೂ ಅನುದಾನ ನೀಡುತ್ತಿದೆ. ಆದರೆ ಬಡವರ ಪರ ಕಾರ್ಯಕ್ರಮಗಳನ್ನು ಅಮರ್ಥವಾಗಿ ಅನುಷ್ಠಾನಕ್ಕೆ ತಂದಿರುವುದನ್ನು ಬಿಜೆಪಿ ಪಕ್ಷದವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜಿ.ಪಂ. ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ, ಜಿ.ಪಂ. ಮಾಜಿ ಸದಸ್ಯರಾದ ಕಲ್ಲಪ್ಪ ದೇಸಾಯಿ, ಬಸವನ ಬಾಗೇವಾಡಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವನಬಾಗೇವಾಡಿಯ ಅಶೋಕ ಹಾರಿವಾಳ, ಕೊಲ್ಹಾರದ ರಫೀಕ್ ಪಕಾಲಿ, ಪಕ್ಷದ ಮುಖಂಡರಾದ ಐ.ಸಿ.ಪಟ್ಟಣಶೆಟ್ಟಿ, ಎ.ಎಂ.ಪಾಟೀಲ ಉಕ್ಕಲಿ, ಗ್ರಾಮೀಣ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಸಿದ್ಧಣ್ಣ ನಾಗಠಾಣ, ಗಣ್ಯ ವ್ಯಾಪಾರಿಗಳಾದ ಲೋಕನಾಥ ಅಗರವಾಲ್, ರಮೇಶ ಸೂಳಿಭಾವಿ, ಸಂಗಮೇಶವ ಓಲೇಕಾರ, ಶ್ರೀಶಿವಾನಂದ ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ತಾನೋಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿಜಯಪುರದಲ್ಲಿ ಐತಿಹಾಸಿಕ ಸಂಪುಟ ಸಭೆ ನಾನು ಹಾಗೂ ಜಿಲ್ಲೆಯ ಸಚಿವ ಎಂ.ಬಿ.ಪಾಟೀಲ ಆಗ್ರಹದ ಮೇರೆಗೆ ವಿಜಯಪುರದಲ್ಲಿ ಸಂಪುಟ ಸಭೆ ನಡೆಸಲು ಮುಖ್ಯಮಂತ್ರಿಗಳು ಒಪ್ಪಿದ್ದು, ಶೀಘ್ರವೇ ನಮ್ಮ ಕ್ಷೇತ್ರವೂ ಸೇರಿದಂತೆ ಜಿಲ್ಲೆಯ ಹಲವು ಬೇಡಿಕೆಗಳಿಗೆ ಮನ್ನಣೆ ಸಿಗಲಿದೆ.
500 ಕೋಟಿ ರೂ. ಆದಾಯ ತರುತ್ತಿವೆ 176 ಎಪಿಎಂಸಿ ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಎಲ್ಲ ಕೃಷಿ ಮಾರುಕಟ್ಟೆಗಳನ್ನು ಮುಚ್ಚಿದ್ದು, ಸರ್ಕಾರಕ್ಕೆ ಬರುತ್ತಿದ್ದ ಆದಾಯ 180 ಕೋಟಿ ರೂ. ಇತ್ತು. ರಾಜ್ಯದಲ್ಲಿ ನಮ್ಮ ಸರ್ಕಾರ ಬರುತ್ತಲೇ ನಿಮ್ಮೆಲ್ಲರ ಆಶೀರ್ವಾದರಿಂದ ಸಚಿವನಾದ ನಾನು 176 ಕೃಷಿ ಮಾರುಕಟ್ಟೆಗಳನ್ನು ಆರಂಭಿಸಿ, ಹೊಸದಾಗಿ ಮತ್ತೆ 5 ಕೃಷಿ ಮಾರುಕಟ್ಟೆ ಸ್ಥಾಪನೆಗೆ ಮುಂದಾಗಿದ್ದೇನೆ. ಪರಿಣಾಮ ರಾಜ್ಯ ಸರ್ಕಾರಕ್ಕೆ ಇದೀಗ 500 ಕೋಟಿ ರೂ. ಆದಾಯ ಬರುತ್ತಿದೆ. ರೈತರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿದ್ದು, ಶೈತಾಗಾರ, ವೇಬ್ರಿಡ್ಜ್, ರಸ್ತೆ, ಕುಡಿಯುವ ನೀರಿನಂಥ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಇದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಮಾಡಿದ ಅಭಿವೃದ್ಧಿ ಅಲ್ಲವೇ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.
ಹೊಸಪೇಟೆಯ ಐತಿಹಾಸಿ ಸಮಾವೇಶಕ್ಕೆ ಸಾಕ್ಷಿಯಾಗಲು ಬನ್ನಿ : ಎಚ್.ಕೆ.ಪಿ.
ಸರ್ಕಾರದ ದ್ವಿತಿಯ ವರ್ಷದ ಸಾಧನಾ ಸಮಾವೇಶದ ಪೂರ್ವ ಸಿದ್ಧತಾ ಸಭೆಗೆ ಚಾಲನೆ ನೀಡಿದ ಕಾನೂನು, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಕುರಿತು ಚುನಾವಣೆಯಲ್ಲಿ ಸಂಕಲ್ಪ ಮಾಡಿದಂತೆ ನಾವು ನೀಡಿದ ಲಿಖಿತ ಭರವಸೆಗಳನ್ನು ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ಸಂಪೂರ್ಣ ಜಾರಿಗೆ ತಂದಿದ್ದೇವೆ. ಸರ್ಕಾರ ಎರಡು ವರ್ಷಗಳನ್ನು ಪೂರೈಸಿರುವ ಈ ಹಂತದಲ್ಲಿ ಹೊಸಪೇಟೆಯಲ್ಲಿ ಮೇ 20 ರಂದು ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ನಿಮಗೆಲ್ಲ ಆಹ್ವಾನ ಕೊಡಲು ಇಲ್ಲಿಗೆ ಬಂದಿದ್ದೇನೆ. ಐತಿಹಾಸಿಕವಾಗಲಿರುವ ಈ ಸಮಾವೇಶಕ್ಕೆ ಆಗಮಿಸಿ ನೀವೆಲ್ಲ ಸಾಕ್ಷಿಯಾಗಬೇಕು ಎಂದು ಮನವಿ ಮಾಡಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಬರಿದಾಗಿ, ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಟೀಕೆಗೆ ನಮ್ಮ ಸರ್ಕಾರ ಸತತ ಎರಡು ವರ್ಷವೂ ಯೋಜನೆ ಅನುಷ್ಠಾನ ಮಾಡಿ ತಕ್ಕ ಉತ್ತರ ನೀಡಿದೆ. ಸರ್ಕಾರವೂ ಸುಭದ್ರವಾಗಿದೆ, ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ, ಮಧ್ಯವರ್ತಿಗಳಿಲ್ಲದೇ ಪಂಚ ಗ್ಯಾರಂಟಿ ಯೋಜನೆಗಳನ್ನು ಶೇ.98.5 ರಷ್ಟು ಅನುಷ್ಠಾನ ಮಾಡಿದ್ದು, 1.20 ಕೋಟಿ ಕುಟುಂಬಗಳನ್ನು ಬಡತನರೇಖೆಗಿಂತ ಮೇಲೆತ್ತಿದ್ದು, ಇದು ನಮ್ಮ ಸರ್ಕಾರದ ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದರು.


















