ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿಪೂಜೆ
ವಿಜಯಪುರ: ನಗರದಲ್ಲಿ ಸಿದ್ದಸಿರಿ ಸೌಹಾರ್ದ ಸಹಕಾರಿ ವತಿಯಿಂದ ನೂತನವಾಗಿ ನಿರ್ಮಾಣ ಮಾಡಲಾದ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಸೋಮವಾರ ಭೂಮಿಪೂಜೆ ನೆರವೇರಿಸಿದರು.
ನಗರದ ವಾರ್ಡ ನಂ.5 ರಲ್ಲಿ ಬರುವ ಆದರ್ಶ ನಗರದ ಬಸವಣ್ಣ ದೇವಸ್ಥಾನ ಹತ್ತಿರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ.10 ಲಕ್ಷ ಮೊತ್ತದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ನಂತರ ಆದರ್ಶ ನಗರ ಶಿವಾಲಯ ಗುಡಿ ಹತ್ತಿರ ಸಿದ್ದಸಿರಿ ಸೌಹಾರ್ದ ಸಹಕಾರಿಯಿಂದ ನೂತನವಾಗಿ ನಿರ್ಮಿಸಲಾದ ಶುದ್ದ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ವಾರ್ಡ ನಂ.5 ಮತ್ತು 6 ರಲ್ಲಿ ಬರುವ ಕೆ.ಸಿ ನಗರ, ಯಲ್ಲಾಲಿಂಗ ನಗರದಿಂದ ನಾಲಾವರೆಗೆ ಮತ್ತು ಇತರೆ ಅವಶ್ಯಕ ಸ್ಥಳಗಳಲ್ಲಿ ರೂ.1 ಕೋಟಿ ಮೊತ್ತದಲ್ಲಿ ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿಗೆ ಶಿರೂರ ಕಾಲೊನಿಯ ಕೆ.ಸಿ.ನಗರ ಹನುಮಾನ್ ಗುಡಿ ಹತ್ತಿರ ಭೂಮಿಪೂಜೆ ನೆರವೇರಿಸಿದರು.
ಪ್ರತಿ ಕಾರ್ಯಕ್ರಮಗಳ ಬಳಿ ನೆರೆದ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಸ್ಥಳದಲ್ಲೇ ಕೆಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರು. ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ಮಳುಗೌಡ ಪಾಟೀಲ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.