ವಿತರಣಾ ಕಾಲುವೆ ಸಂ-15ರಡಿಯ ಲ್ಯಾಟರಲ್ ಮೈನರ್ ಜಾಲಗಳನ್ನೊಳಗೊಂಡ ಕಾಮಗಾರಿ
ಬಬಲೇಶ್ವರ ಶಾಖಾ ಕಾಲುವೆ ಸಂ-1ರಡಿ ಬರುವ 5ಎ&5ಬಿ ಲಿಫ್ಟ್ ಕಾಮಗಾರಿಗೆ ಭೂಮಿಪೂಜೆ
ವಿಜಯಪುರ, ಮೇ.08: ನೀರಾವರಿ ಯೋಜನೆ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳಿಗೆ ಇಲ್ಲಿನ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಹಣ್ಣು ಹಂಪಲಗಳಿಂದ ತುಲಾಭಾರ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸುತ್ತಿರುವುದು, ಸಚಿವನಾಗಿ ನಾನು ಕೈಗೊಂಡ ಕಾರ್ಯಗಳಿಂದ ನನಗೆ ಸಂತೃಪ್ತಿ ಭಾವನೆ ಮೂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಎಂ.ಬಿ.ಪಾಟೀಲ ಹೇಳಿದರು.
ಬುಧವಾರ ಬಬಲೇಶ್ವರ ಮತಕ್ಷೇತ್ರದ ತಿಕೋಟಾ ತಾಲೂಕಿನ ನಿಡೋಣಿ ಗ್ರಾಮದಲ್ಲಿ ಕೆಬಿಜೆಎನ್ಎಲ್ ವತಿಯಿಂದ ಕೈಗೊಂಡ ಬಬಲೇಶ್ವರ ಶಾಖಾ ಕಾಲುವೆ ಸಂ-1ರ ಅಡಿಯಲ್ಲಿ ಬರುವ 5ಎ &5ಬಿ ಲಿಫ್ಟ್ಗಳ ಜಾಕವೆಲ್ ಹಾಗೂ ಪೈಪ್ಗಳ ಮೂಲಕ ವಿತರಣಾ ಜಾಲಗಳನ್ನೊಳಗೊಂಡ ಕಾಮಗಾರಿ ಮತ್ತು ವಿತರಣಾ ಕಾಲುವೆ ಸಂ-15 ಹಾಗೂ ಅದರಡಿಯ ಲ್ಯಾಟರಲ್ ಮೈನರ್ ಜಾಲಗಳನ್ನೊಳಗೊಂಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಬಲೇಶ್ವರ ಶಾಖಾ ಕಾಲುವೆಯ ಕಿ.ಮೀ. 40.920ರಲ್ಲಿ 5ಎ & ಕಿ.ಮೀ. 18.105ರಲ್ಲಿ 5ಬಿ ಲಿಫ್ಟ್ಗಳ ಜ್ಯಾಕವೆಲ್ ನಿರ್ಮಾಣ ಮಾಡಿ ಅಲ್ಲಿಂದ ನೀರನ್ನು ಎತ್ತಿ ಅನುಕ್ರಮವಾಗಿ ಹಾಗೂ ಪೈಪಗಳ ಮೂಲಕ ವಿತರಣಾ ಜಾಲಗಳನ್ನೊಳಗೊಂಡ ಕಾಮಗಾರಿಯಿಂದ ಈ ಭಾಗದ ಹಲವು ಗ್ರಾಮಗಳು ಸೇರಿದಂತೆ ಸಾವಿರಾರು ಎಕರೆ ನೀರಾವರಿಗೊಳಪಡಲಿದೆ. 124.76 ಕಿ.ಮೀ. ವಿತರಣಾ ಪೈಪಗಳ ಉದ್ದದ 5ಎ ಲಿಫ್ಟ್ ಕಾಮಗಾರಿಯಿಂದ ಬಬಲೇಶ್ವರ, ನಿಡೋಣಿ, ನಾಗರಾಳ ಹಾಗೂ ದಾಶ್ಯಾಳ ಗ್ರಾಮದ 8600 ಎಕರೆ ಹಾಗೂ 13.765 ಕಿ.ಮೀ. ವಿತರಣಾ ಪೈಪಗಳ ಉದ್ದದ 5ಬಿ ಲಿಫ್ಟ್ ಕಾಮಗಾರಿಯಿಂದ ಬಬಲೇಶ್ವರ, ಹಲಗಣಿ ಹಾಗೂ ಕಾಖಂಡಕಿ ಗ್ರಾಮದ ಒಟ್ಟು 1355 ಎಕರೆ ನೀರಾವರಿಗೊಳಪಡಲಿದೆ ಎಂದು ಹೇಳಿದರು.
ಅಂದಾಜು 102.95 ಕೋಟಿ ರೂ. ವೆಚ್ಚದ ವಿತರಣಾ ಕಾಲುವೆ-15ರ ಬಬಲೇಶ್ವರ ಶಾಖಾ ಕಾಲುವೆಯ ಕಿ.ಮೀ. 40.920 ರಲ್ಲಿ ವಿತರಣಾ ಕಾಲುವೆ-15 ಆರಂಭಗೊಂಡು ಒಟ್ಟು 25.470 ಕಿ.ಮೀ. ಚಲಿಸಿ ಮಲಘಾಣ ಪಶ್ಚಿಮ ಕಾಲುವೆ ಅಂಚಿನಲ್ಲಿ ಕೊನೆಗೊಳ್ಳುವುದು. ಒಟ್ಟು 3 ಉಪ ವಿತರಣಾ ಕಾಲುವೆಗಳು ಹಾಗೂ 20 ಮೈನರ್ಗಳ ವಿತರಣಾ ಕಾಲುವೆ ಜಾಲಗಳನ್ನೊಳಗೊಂಡ ಕಾಮಗಾರಿಯಿಂದ ಜಿಲ್ಲೆಯ ನಿಡೋಣಿ, ತಿಗಣಿಬಿದರಿ, ನಾಗರಾಳ, ಯಕ್ಕುಂಡಿ, ಹೊಕ್ಕುಂಡಿ, ಅರ್ಜುಣಗಿ ಹಾಗೂ ಕುಮಠೆ ಗ್ರಾಮದ 10182 ಎಕರೆ ಹಾಗೂ ಜಮಖಂಡಿ ತಾಲೂಕಿನ ಕಲಬೀಳಗಿ, ಗೋಠೆ, ಗದ್ಯಾಳ ಮತ್ತು ತೊದಲಬಾಗಿ ಗ್ರಾಮದ 2935 ಎಕರೆ ಜಮೀನು ನೀರಾವರಿಗೊಳಪಡಲಿದೆ ಎಂದು ಅವರು ಹೇಳಿದರು.
ಕಳೆದ 2013-18ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ ಕೈಗೊಂಡಿರುವ ನೀರಾವರಿ ಯೋಜನೆಗಳಿಂದ ಈ ಭಾಗದಲ್ಲಿ ಸಮೃದ್ದಿಯಾಗಿದೆ. ನೀರಾವರಿ ಯೋಜನೆಗಳಿಂದ ಈ ಭಾಗದ ರೈತರು ತಮ್ಮ ಬದುಕು ಹಸನ ಮಾಡಿಕೊಂಡು, ಆರ್ಥಿಕ ಮಟ್ಟ ಸುಧಾರಿಸಿಕೊಂಡು, ತಮ್ಮ ಜಮೀನುಗಳಲ್ಲಿ ಬೆಳೆದ ಫಲಗಳಿಂದಲೇ ನನ್ನ ತುಲಾಭಾರ ಮಾಡಿದ್ದು ನನ್ನ ಸೌಭಾಗ್ಯವಾಗಿದೆ. ಜಿಲ್ಲೆಯ ಅಭಿವೃದ್ದಿಗೆ ಹಗಲಿರುಳು ಶ್ರಮಿಸಿ, ರೈತರ ಬದುಕು ಹಸನಾಗಿಸಲು ಪಟ್ಟ ಶ್ರಮ, ಹಾಗೂ ನನ್ನ ಪ್ರಾಮಾಣಿಕ ಸೇವೆಗೆ ದೊರೆತಿರುವ ಪ್ರತಿಫಲವಾಗಿದೆ ಎಂದು ಹೇಳಿದರು.
ಕಳೆದ 2013-18ರ ಅವಧಿಯಲ್ಲಿ ಈ ರಾಜ್ಯದ ಜಲಸಂಪನ್ಮೂಲ ಸಚಿವನಾಗಲು ಅವಕಾಶ ದೊರೆತ ಸಂದರ್ಭದಲ್ಲಿ ಈ ಭಾಗದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು, ಜಿಲ್ಲೆಯ ಜನರು ಹಾಗೂ ರೈತರ ಆಶಯದಂತೆ ಹಾಗೂ ಈ ಭಾಗಕ್ಕೆ ಅವಶ್ಯಕತೆ ಇರುವ ಖಾತೆ ನಿಮಗೆ ಸಿಕ್ಕಿದೆ, ಈ ಅವಕಾಶದ ಪ್ರತಿಯೊಂದು ಕ್ಷಣವೂ ವ್ಯರ್ಥವಾಗದಂತೆ ದೊರೆತಿರುವ 5 ವರ್ಷಗಳ ಅವಧಿಯಲ್ಲಿ ದಿನಕ್ಕೆ 12 ರಿಂದ 13 ಗಂಟೆಗಳ ಕಾಲ ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನೀರಾವರಿಗೆ ಆದ್ಯತೆ ನೀಡುವಂತೆ ಶ್ರೀಗಳ ಕಿವಿಮಾತಿನಂತೆ ನಾನು ನಡೆದುಕೊಂಡು, ಅವರ ಮಾತನ್ನು ಚಾಚುತಪ್ಪದೇ ಪಾಲಿಸಿ ಜಿಲ್ಲೆಯಲ್ಲಿ ನೀರಾವರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಂದ ಹಳ್ಳ, ಕೆರೆ, ಇತ್ಯಾದಿ ಜಲಮೂಲಗಳು ತುಂಬಿರುವುದರಿಂದ ಅಂತರಜಲ ಮಟ್ಟ ಹೆಚ್ಚಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ನಿರುಪಯುಕ್ತ ಬೊರವೆಲ್ಗಳು ಮರುಪೂರಣಗೊಂಡಿವೆ. ಈ ಭಾಗದ ತಿಕೋಟಾ ಹೋಬಳಿಯೊಂದಕ್ಕೆ 3600 ಕೋಟಿ ರೂ. ವೆಚ್ಚ ಮಾಡಿ, ಬರಡು ಭೂಮಿಗೆ ನಿರೋದಗಿಸಿ ಈ ಭಾಗ ಹಸಿರಿನಿಂದ ಕಂಗೊಳಿಸಿ ಜನರು ಸಮದ್ದಿಯಿಂದ ಜೀವನ ಸಾಗಿಸುತ್ತಿರುವುದೇ ನೀರಾವರಿ ಯೋಜನೆಗೆ ಫಲಶೃತಿಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಿಡೋಣಿ ವಿರಕ್ತಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಬಾಲ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ, ಮಾಜಿಕ ಶಾಸಕ ರಾಜು ಆಲಗೂರ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಉಪಸ್ಥಿತರಿದ್ದರು.
ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರ ಪಿ.ಆರ್. ಹಿರೇಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಯಂತರ ರಾಜೇಂದ್ರ ರೂಢಗಿ ಸ್ವಾಗತಿಸಿದರು. ಹುಮಾಯೂನ ಮಮದಾಪುರ ನಿರೂಪಿಸಿದರು.


















