ಅಭಿವೃದ್ದಿಗೆ ಎಷ್ಟು ಅನುದಾನ ತಂದಿದ್ದೇನೆ ಎನ್ನುವ ಕುರಿತು ಶ್ವೇತಪತ್ರ ಹೊರಡಿಸಲು ಸಿದ್ದನಿದ್ದೇನೆ.
ಯಾರೋ ರಾಜಕಾರಣಿಗಳಿಗೆ ಉತ್ತರ ಕೊಡೊಲ್ಲ, ಜನತೆಗೆ ಉತ್ತರ ಕೊಡುತ್ತೇನೆ.
ರಾಜಕಾರಣಿಗಳಾದವರು ಬಾಯಿಗೆ ಬಂದಂತೆ ಮಾತನಾಡದೆ ಸೈದ್ದಾಂತಿಕವಾಗಿ ಮಾತನಾಡಬೇಕು.
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ರಾಜಕಾರಣಿಗಳಾದವರು ಬಾಯಿಗೆ ಬಂದಂತೆ ಮಾತನಾಡದೆ ಸೈದ್ದಾಂತಿಕವಾಗಿ ಮಾತನಾಡಬೇಕು. ಮಾರ್ಚ್ ಬಜೆಟ್ ನಂತರ ಅಭಿವೃದ್ದಿಗೆ ಎಷ್ಟು ಅನುದಾನ ತಂದಿದ್ದೇನೆ ಎನ್ನುವ ಕುರಿತು ಶ್ವೇತಪತ್ರ ಹೊರಡಿಸಲು ಸಿದ್ದನಿದ್ದೇನೆ. ಯಾರೋ ರಾಜಕಾರಣಿಗಳಿಗೆ ಉತ್ತರ ಕೊಡೊಲ್ಲ, ಜನತೆಗೆ ಉತ್ತರ ಕೊಡುತ್ತೇನೆ ಎಂದು ಶಾಸಕ, ಕೆಎಸ್ಡಿ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.
ಇಲ್ಲಿನ ಗ್ರಾಮದೇವತೆ ಕಟ್ಟೆ ಎದುರು ಪುರಸಭೆ ಅಧೀನದ ಮೆಗಾ ಮಾರುಕಟ್ಟೆ ಕಟ್ಟಡ ಕಾಮಗಾರಿಗೆ ಗುರುವಾರ ಸಂಜೆ ಭೂಮಿ ಪೂಜೆ ನೆರವೇರಿಸಿ, ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಟೀಕೆ ಇರದಿದ್ದರೆ ರಾಜಕಾರಣಿಗಳು ಎಚ್ಚರದಿಂದ ಇರೊಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳು ಬೆಳವಣಿಗೆಗೆ ಆಧಾರವಾಗುವಂತಿರಬೇಕು. ಚಪಲದಿಂದ ಕೂಡಿದ, ಜನರ ದಾರಿ ತಪ್ಪಿಸುವ ಟೀಕೆಗಳಿರಬಾರದು. ಶಾಸಕನಾದ ನಾನು ನಿಮಿತ್ಯ. ಪ್ರಜಾಪ್ರತಿನಿಧಿಯಾಗಿ ನನ್ನ ಕೆಲಸ ಮಾಡುತ್ತೇನೆ. ಜನರ ಬೇಡಿಕೆ, ಆಶಯ ಸರ್ಕಾರದ ಮಟ್ಟಕ್ಕೆ ಒಯ್ದು ಮಾಡಿಸಿಕೊಡುವುದು ನನ್ನ ಕರ್ತವ್ಯ. ಶಾಸಕನಾದ ಕೂಡಲೆ ನನ್ನ ಆಕಾರ ಬದಲಾಗುವುದಿಲ್ಲ. ಜನಪ್ರತಿನಿಧಿ ಸರಳವಾಗಿರಬೇಕು ಎಂದರು.
ಜನಸಂಖ್ಯೆ ಬೆಳೆದಂತೆ ಅಭಿವೃದ್ದಿ, ಮೂಲಸೌಕರ್ಯಗಳ ಬೇಡಿಕೆ ಹೆಚ್ಚುತ್ತದೆ. ಊರಿನ ಬೆಳವಣಿಗೆಯಲ್ಲಿ ಹಿಂದೆ ಶಾಸಕರಾಗಿದ್ದವರೆಲ್ಲರ ಪಾಲಿದೆ. ರಾಜಕಾರಣದಲ್ಲಿ ನಾನು, ನನ್ನಿಂದ ಅನ್ನೋದು ಇರಬಾರದು. ನನ್ನ ಪಾತ್ರವೂ ಇದೆ ಅನ್ನಬೇಕು. ಅಭಿವೃದ್ದಿಗೆ ಜನರ ಸಹಕಾರ ಬಹಳ ಮುಖ್ಯ. ಹಣಕಾಸಿನ ವ್ಯವಸ್ಥೆಯಲ್ಲಿ ಸರ್ಕಾರದ ಸ್ಥಿತಿ ತಂತಿಯ ಮೇಲಿನ ನಡಿಗೆಯಂತಾಗಿದೆ ಎಂದರು.
ಸೋರಿಕೆ ತಡೆದು, ಬಡವರ ಅಭಿವೃದ್ದಿಗಾಗಿ ಪಂಚ ಗ್ಯಾರಂಟಿಗೆ ವಾರ್ಷಿಕ ೬೩೦೦೦ ಕೋಟಿ ಖರ್ಚಾಗುತ್ತದೆ. ಮುದ್ದೇಬಿಹಾಳದಲ್ಲಿ ೧೨೫೪೯ ಮನೆಗಳು ಉಚಿತ ವಿದ್ಯುತ್, ೭೧೧೫ ಮಹಿಳೆಯರು ಗೃಹ ಲಕ್ಷ್ಮಿ ಸೌಲಭ್ಯ ಪಡೆಯುತ್ತಿದ್ದಾರೆ. ಮತಕ್ಷೇತ್ರದಾದ್ಯಂತ ೪೦೨೦೮ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಮಾಸಿಕ ೮.೪೨ ಕೋಟ ಹಣ ಜಮಾ ಆಗುತ್ತಿದೆ. ಸರ್ಕಾರದ ದಿವಾಳಿ ಏಳುತ್ತೆ ಎಂದವರೆ ಇಂದು ಅದನ್ನು ಅಳವಡಿಸಿಕೊಳ್ತಿದ್ದಾರೆ. ಸಮಾಜದಲ್ಲಿ ಎಲ್ಲರೂ ಸಮನಾಗಿ ಬಾಳಿದಾಗ ಮಾತ್ರ ಸಮಾನತೆ ಸಾಧ್ಯ. ಬಸವಣ್ಣನವರು ಹೇಳಿದ್ದೂ ಇದನ್ನೆ. ಸಿಎಂ ಸಿದ್ದರಾಮಯ್ಯನವರು, ಕಾಂಗ್ರೆಸ್ ಪಕ್ಷದ ಸಿದ್ದಾಂತವಾಗಿರುವ ಇದು ದೇಶದ ಸಿದ್ದಾಂತ ಆಗಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ೧೯೬೦ರಲ್ಲಿ ಆಗಿನ ಶಾಸಕ ಎಸ್.ಎಂ. ಗುರಡ್ಡಿಯವರ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ಮಾರ್ಕೆಟ್ನ್ನು ೬೦ ವರ್ಷದ ಸತ್ವ ಕಳೆದುಕೊಂಡಿದ್ದರಿಂದ ಪಿಡಬ್ಲುಡಿ ಇಂಜಿನೀಯರುಗಳ ಸಲಹೆ ಮೇರೆಗೆ ೨೦೨೨ರಲ್ಲಿ ನೆಲಸಮಗೊಳಿಸಲಾಯಿತು. ಶಾಸಕರ ಸತತ ಪ್ರಯತ್ನದಿಂದ ೧೫ ಕೋಟಿ ಅನುದಾನದಲ್ಲಿ ಮೂರು ಅಂತಸ್ತಿನ, ೪೬ ಮಳಿಗೆಯುಳ್ಳ ಸುಸಜ್ಜಿತ ಮಾರ್ಕೆಟ್ ನಿರ್ಮಿಸಲಾಗುತ್ತಿದೆ ಎಂದರು.
ಕಸಾಪ ಗೌರವಾಧ್ಯಕ್ಷ ಎಂ.ಬಿ.ನಾವದಗಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಅವರು ನಾಡಗೌಡರ ಅಭಿವೃದ್ದಿಶೀಲ ನಿಲುವನ್ನು ಶ್ಲಾಘಿಸಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಊರಿನ ಹಿರಿಯರು, ಗಣ್ಯರಾದ ಬಸವರಾಜ ಮೋಟಗಿ, ಪ್ರೋ|ಬಿ.ಎಂ.ಹಿರೇಮಠ, ದಾನಪ್ಪ ನಾಗಠಾಣ, ಬಸನಗೌಡ ಪಾಟೀಲ, ಹಣಮಂತ್ರಾಯ ಬಿರಾದಾರ, ಪ್ರಭು ಕಡಿ, ಗುಲಾಬಚಂದ ಓಸ್ವಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಇಂಗಳಗೇರಿ, ಎನ್.ಎಸ್.ಚಟ್ಟೇರ, ಗಫೂರ ಮಕಾನದಾರ, ಸತೀಶ ಓಸ್ವಾಲ್, ಬಾಪೂರಾವ ದೇಸಾಯಿ, ರುದ್ರಗೌಡ ಅಂಗಡಗೇರಿ, ವೈ.ಎಚ್.ವಿಜಯಕರ್, ಪಿಂಟು ಸಾಲಿಮನಿ, ಆಲೂರು ಗ್ರಾಪಂ ಅಧ್ಯಕ್ಷೆ ಶೋಭಾ ಶಳ್ಳಗಿ, ನೀಲಮ್ಮ ಚಲವಾದಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ ಸೇರಿ ಎಲ್ಲ ಚುನಾಯಿತ, ನಾಮನಿರ್ದೇಶಿತ ಸದಸ್ಯರು, ನಗರ ಆಶ್ರಯ ಸಮಿತಿ ಸದಸ್ಯರು ವೇದಿಕೆಯಲ್ಲಿದ್ದರು.
ಬಾಲ ಗಾಯಕಿ ಮಹನ್ಯಾ ಪಾಟೀಲ ಪ್ರಾರ್ಥಿಸಿದರು. ಗಾಯಕ ಮ್ಯೂಜಿಕ್ ಮೈಲಾರಿ ಶಾಸಕರ ಕುರಿತ ಸ್ವರಚಿತ ಜಾನಪದ ಗೀತೆ ಹಾಡಿದರು. ಬಿಆರ್ಪಿ ಸಿದ್ದನಗೌಡ ಬಿಜ್ಜೂರ ಸ್ವಾಗತಿಸಿದರು. ಸಿಆರ್ಪಿ ಜಿ.ಎಚ್.ಚವ್ಹಾಣ, ಕಿರು ತೆರೆಯ ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕರನ್ನು ಡೊಳ್ಳು ಮೆರವಣಿಗೆಯೊಂದಿಗೆ ಸ್ವಾಗತಿಸಿಕೊಳ್ಳಲಾಯಿತು. ದುರ್ಗಾದೇವಿಗೆ ಪೂಜೆ ಸಲ್ಲಿಸಲಾಯಿತು. ಶ್ರೀಶೈಲ ಹೂಗಾರ ನೇತೃತ್ವದ ಇಂಚರ ಮೆಲೋಡಿಸ್ ಕಲಾ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಮುದ್ದೇಬಿಹಾಳದಲ್ಲಿ ಶೀಘ್ರವೇ ಸಿಟಿ ಬಸ್ ಸಂಚರಿಸಲಿದ್ದು ಘಟಕ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುತ್ತದೆ. ಮೆಗಾ ಮಾರ್ಕೆಟ್ ೧೦೦ ವರ್ಷಗಳಾದರೂ ಗಟ್ಟಿಯಾಗಿ ನಿಲ್ಲುವಂತ ಕಟ್ಟಡವಾಗಬೇಕಿದ್ದು ಸಾರ್ವಜನಿಕರ ಕಣ್ಣು ಕೆಲಸದ ಗುಣಮಟ್ಟದ ಮೇಲಿರಬೇಕು.
-ಸಿ.ಎಸ್.ನಾಡಗೌಡ, ಶಾಸಕರು.
ಮುದ್ದೇಬಿಹಾಳ: ಭೂಮಿ ಪೂಜೆ ಸಮಾರಂಭದ ವೇದಿಕೆಯ ಜ್ಯೋತಿಯನ್ನು ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಜಂಟಿಯಾಗಿ ಬೆಳಗಿಸಿದರು. ಶಾಸಕ ಸಿ.ಎಸ್.ನಾಡಗೌಡ, ಗಣ್ಯರು, ಪುರಸಭೆ ಸದಸ್ಯರು ಇದ್ದಾರೆ.

ಕಣ್ಣೀರಾದ ಶಾಸಕರು: ಹಿಂದಿನ ರಾಜಕಾರಣ ನೆನಪಿಸಿಕೊಂಡು ರಾಜಕಾರಣದಲ್ಲಿ ಸಿದ್ಧಾಂತದ ಕುರಿತು ಮಾತನಾಡುವಾಗ ಜನರ ಮಧ್ಯೆ ಸುದೀರ್ಘ ರಾಜಕಾರಣಕ್ಕೆ ಅವಕಾಶ ಕೊಟ್ಟಿದ್ದು ನನ್ನ ಪೂರ್ವಜನ್ಮದ ಪುಣ್ಯ ಎನ್ನುತ್ತಲೇ ಭಾವುಕರಾದ ಶಾಸಕರ ಕಣ್ಣುಗಳಿಂದ ನೀರು ಜಿನುಗಿತು. ಒರೆಸಿಕೊಳ್ಳದೆ ಗದ್ಗದಿತರಾಗಿಯೇ ಮಾತು ಮುಂದುವರೆಸಿದರು. ಕಣ್ಣೀರು ಜಿನುಗುವ ದೃಶ್ಯ ವೇದಿಕೆಯಲ್ಲಿ ಅಳವಡಿಸಿದ್ದ ಬೃಹತ್ ಎಲ್ಇಡಿ ಪರದೆಯಲ್ಲಿ ಸ್ಪಷ್ಟವಾಗಿ ಕಂಡಾಗ ಸೇರಿದ್ದ ಜನ ಕೂಡ ಕೆಲ ಕ್ಷಣ ಭಾವುಕರಾದರು.


















