ಮುದ್ದೇಬಿಹಾಳ:ಮುಂಬರುವ ರಾಜ್ಯ ಬಜೆಟ್ನಲ್ಲಿ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾರ್ಚ ೪, ೫ ರಂದು ಅಕ್ಷರ ದಾಸೋಹ ಬಿಸಿಯೂಟ ನೌಕರರು ನಿತ್ಯದ ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮುದ್ದೇಬಿಹಾಳ ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಸುವರ್ಣ ರಾಠೋಡ ತಿಳಿಸಿದರು. ಗುರುವಾರ ಇಲ್ಲಿನ ತಾಪಂ ಕಚೇರಿಗೆ ಆಗಮಿಸಿ ಸಹಾಯಕ ನಿರ್ದೇಶಕ ಖೂಬಾಸಿಂಗ್ ಜಾಧವರ ಅವರಿಗೆ ಹೋರಾಟದ ಮತ್ತು ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇತನ ಹೆಚ್ಚಳ ಮಾಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿದ್ದರೂ ಸರ್ಕಾರ ಸ್ಪಂಧಿಸುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭ ಬಿಸಿಯೂರ ನೌಕರರ ಬೇಡಿಕೆ ಈಡೇರಿಸುವ ಭರವಸೆ ನೀಡಲಾಗಿತ್ತು. ಆ ಭರವಸೆಯನ್ನು ಸರ್ಕಾರ ಬಜೆಟ್ನಲ್ಲಿ ಈಡೇರಿಸಿ ನುಡಿದಂತೆ ನಡೆದುಕೊಳ್ಳಬೇಕು. ಕಳೆದ ವರ್ಷ ಏಪ್ರೀಲ್-ಮೇ ತಿಂಗಳಲ್ಲಿ ಬರಗಾಲ ಘೋಷಿತ ಜಿಲ್ಲೆಗಳಲ್ಲಿ ಕೆಲಸ ಮಾಡಿರುವ ವೇತನ ಬಿಡುಗಡೆಗೊಳಿಸಬೇಕು. ಶಾಲೆಗಳಲ್ಲಿರುವ ಅಡುಗೆ ಕೇಂದ್ರಗಳ ಪುನಶ್ವೇತನಕ್ಕಾಗಿ, ಗುಣಮಟ್ಟದ ಆಹಾರ ಪದಾರ್ಥಗಳ ಸರಬರಾಜು, ತಿಂಗಳಿಗೆ ಸರಿಯಾಗಿ ಗೌರವಧನ, ಸಾದಿಲ್ವಾರು ಮತ್ತು ಮೊಟ್ಟೆ ಹಣವನ್ನು ಬಿಡುಗಡೆಗೊಳಿಸುವುದು ಮುಂತಾದ ಬೇಡಿಕೆಗಳನ್ನಿಟ್ಟು ಹೋರಾಟ ನಡೆಸಲಾಗುತ್ತಿದೆ. ಅಂದು ಎಲ್ಲ ಅಕ್ಷರ ದಾಸೋಹ ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿ ಹೋರಾಟಕ್ಕೆ ಧುಮುಕಲಿದ್ದಾರೆ ಎಂದವರು ತಿಳಿಸಿದರು.
ಸಂದರ್ಭದಲ್ಲಿ ತಾಪಂ ಎಫ್ಡಿಸಿ ಆನಂದ ಬಿರಾದಾರ, ಅಕ್ಷರ ದಾಸೋಹ ನೌಕರರಾದ ಬಸಮ್ಮ ಹಿರೇಮಠ, ರುದ್ರಮ್ಮ ಹಿರೇಮಠ, ಗೌರಮ್ಮ ಬೀಳಗಿ, ಲಕ್ಷ್ಮೀ ಲಮಾಣಿ, ನೀಲಮ್ಮ ವಿಜಯಕರ್, ಶಾರದಾದೇವಿ ಚಲವಾದಿ, ಮಾಲನಬಿ ಬಾಗವಾನ, ಶೋಭಾ ಬಿರಾದಾರ, ಅಕ್ಕಮಹದೇವಿ ವಠಾರ, ಭೀಮಕ್ಕ ದಾಸರ, ನೀಲಮ್ಮ ಹಿರೇಮಠ, ಶಮಶಾದಬೇಗಂ ಮಕಾನದಾರ, ಗಿರಿಜಾ ಕಿಣಗಿ, ಸಿದ್ದಮ್ಮ ವಾಲಿಕಾರ, ಎಸ್.ಎಸ್.ಕೊಣ್ಣೂರ, ಇನ್ನಿತರರು ಇದ್ದರು.