ಮುದ್ದೇಬಿಹಾಳ:ತಾಲೂಕಿನ ಅಮರಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಸರ್ಕಾರ ಉಚಿತವಾಗಿ ಪೂರೈಸಿದ್ದ ಬಿಸಿಯೂಟದ ಆಹಾರ ಧಾನ್ಯ ಸೇರಿ ಇನ್ನಿತರ ಸಾಮಗ್ರಿಗಳನ್ನು ಅಡುಗೆ ಸಿಬ್ಬಂದಿ ಕಳ್ಳತನದಿಂದ ಮನೆಗೆ ಸಾಗಿಸುತ್ತಿರುವಾಗ ಸಾಕ್ಷಿ ಸಮೇತ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದು ಇವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.
ಮಂಗಳವಾರ ಸಂಜೆ ಶಾಲೆ ಮುಗಿದ ನಂತರ ಮುಖ್ಯ ಅಡುಗೆ ಸಿಬ್ಬಂದಿ ಶಕುಂತಲಾ ರಾಂಪೂರ, ಅಡುಗೆ ಸಹಾಯಕರಾದ ಶಾಂತಮ್ಮ ಕುಂಟೋಜಿ, ಜೈನಾಬ್ಬಿ ನದಾಫ ಅವರು ತಲೆ ಮೇಲೆ ಬುಟ್ಟಿ ಹೊತ್ತು ಮನೆಗೆ ಹೋಗುತ್ತಿದ್ದರು. ಇದನ್ನು ಗಮನಿಸಿದ ಗ್ರಾಮದ ಕೆಲ ಯುವಕರು ಅವರೆಲ್ಲರನ್ನೂ ಮರಳಿ ಶಾಲೆಗೆ ಕರೆತಂದು ಬುಟ್ಟಿಯನ್ನು ಎಲ್ಲರ ಸಮ್ಮುಖದಲ್ಲಿ ಕೆಳಗೆ ಇಳಿಸಿ ಅದರಲ್ಲೇನಿದೆ ಎಂದು ಪರಿಶೀಲಿಸಲು ಮುಂದಾದರು.
ಮೂವರ ಬುಟ್ಟಿಗಳಲ್ಲೂ ಅಕ್ಕಿ, ಎಣ್ಣೆ, ತತ್ತಿ, ಹಾಲಿನಪುಡಿ, ಹಾಲು ಇನ್ನಿತರ ಬಿಸಿಯೂಟದ ಆಹಾರ ಸಾಮಗ್ರಿಗಳು ಪತ್ತೇ ಆದವು. ಇವನ್ನು ಎಲ್ಲಿಗೆ ಒಯ್ಯುತ್ತಿದ್ದೀರಿ ಎಂದು ಕೇಳಿದಾಗ ಶಾಲೆಯಲ್ಲಿ ಉಳಿದ ಇವುಗಳನ್ನು ಮನೆಗೆ ಒಯ್ಯುವಂತೆ ಶಿಕ್ಷಕರು ತಿಳಿಸಿದ್ದರಿಂದ ಒಯ್ಯುತ್ತಿದ್ದೇವೆ ಎಂದು ಅಡುಗೆಯವರು ತಿಳಿಸಿದರು.
ಈ ಘಟನೆಯನ್ನು ಮುದ್ದೇಬಿಹಾಳ ತಾಲೂಕು ಪಂಚಾಯಿತಿಯ ಬಿಸಿಯೂಟ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಅವರ ಗಮನಕ್ಕೆ ತಂದಾಗ ಅವರು ಸಾಕ್ಷಿ ಸಮೇತ ಅವರು ಸಿಕ್ಕಿ ಬಿದ್ದಿದ್ದರೆ ದಾಖಲೆ ಸಮೇತ ಲಿಖಿತ ದೂರು ಸಲ್ಲಿಸಿದಲ್ಲಿ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮದ ಯುವಕ ಹಣಮಂತ ಮಾಳಪ್ಪ ಯರಝರಿ ಅವರು, ಇದರಲ್ಲಿ ಶಾಲೆಯ ಮುಖ್ಯಾಧ್ಯಾಪಕ ವಿ.ಬಿ.ನಾಗೂರ ಮತ್ತು ಬಿಸಿಯೂಟದ ಉಸ್ತುವಾರಿ ನೋಡಿಕೊಳ್ಳುವ ಶಿಕ್ಷಕರ ಕೈವಾಡ ಇದೆ. ಈ ವ್ಯವಹಾರ ಬಹಳ ವರ್ಷದಿಂದ ನಡೆಯುತ್ತಿದೆ. ೧ ರಿಂದ ೮ನೇ ತರಗತಿಗೆ ೧೩೦ಕ್ಕೂ ಹೆಚ್ಚು ಹಾಜರಿ ಸಂಖ್ಯೆ ಇದ್ದರೂ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ೩೫-೪೦ ಮಾತ್ರ ಇದೆ. ಶಿಕ್ಷಕರು ೧೦೦ಕ್ಕೂ ಹೆಚ್ಚು ಮಕ್ಕಳ ಹಾಜರಾತಿ ಇದೆ ಎಂದು ದಾಖಲೆಯಲ್ಲಿ ತೋರಿಸುತ್ತಾರೆ. ಇದು ಹೆಚ್ಚುವರಿ ಆಹಾರ ಧಾನ್ಯ ಕಳ್ಳತನದಿಂದ ಸಾಗಿಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಮಕ್ಕಳಿಗೆ ಪೌಷ್ಠಿಕವಾಗಿ ಕೊಡಬೇಕಾದ ತತ್ತಿಗಳನ್ನು ಸ್ಥಳೀಯ ಹೊಟೇಲು, ಪಾನ್ಶಾಪ್ಗಳಲ್ಲಿ ಅಡುಗೆಯವರು ಮಾರಿಕೊಳ್ಳುತ್ತಾರೆ. ನಿತ್ಯವೂ ೩೦-೩೫ ಕೆಜಿ ಅಕ್ಕಿಯನ್ನು ಇದೇ ರೀತಿ ಒಯ್ಯುತ್ತಾರೆ. ಹಾಲಿನ ಪುಡಿ, ಎಣ್ಣೆ ಇನ್ನಿತರ ಸಾಮಗ್ರಿಗಳನ್ನೂ ಒಯ್ಯುತ್ತಾರೆ. ಹೀಗಾದರೆ ಸರ್ಕಾರದ ಯೋಜನೆ ಯಶಸ್ವಿಯಾಗುವುದು ಹೇಗೆ ಸಾಧ್ಯ. ಬಿಸಿಯೂಟದ ಆಹಾರ ಧಾನ್ಯವನ್ನು ಅಕ್ರಮವಾಗಿ ಮನೆಗೆ ಸಾಗಿಸುತ್ತಿದ್ದ ಬಿಸಿಯೂಟ ಸಿಬ್ಬಂದಿ ಮತ್ತು ಇದಕ್ಕೆ ನೇರವಾಗಿ ಕಾರಣವಾಗಿರುವ ಮುಖ್ಯಾಧ್ಯಾಪಕ, ಶಿಕ್ಷಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಹಾಯಕ ನಿರ್ದೇಶಕರ ಪ್ರತಿಕ್ರಿಯೆ: ಅಮರಗೋಳದ ಘಟನೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಅವರು, ಅಡುಗೆ ಸಿಬ್ಬಂದಿ ಕಳ್ಳತನದಿಂದ ಆಹಾರಧಾನ್ಯ ಮನೆಗೆ ಸಾಗಿಸುತ್ತಿರುವಾಗಲೇ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿರುವ ಮಾಹಿತಿ ಇದೆ. ಊರಿನವರು ಫೋನ್ ಮಾಡಿ ತಮ್ಮ ಹತ್ತಿರ ವಿಡಿಯೋ ಸಾಕ್ಷಿ ಇದೆ ಎಂದು ತಿಳಿಸಿದ್ದಾರೆ. ತಪ್ಪು ನಡೆದದ್ದು ನಿಜವೇ ಆಗಿದ್ದರೆ ಅವರ ವಿರುದ್ಧ ಕ್ರಮ ಕೈಕೊಳ್ಳಲು ಮುಖ್ಯಾಧ್ಯಾಪಕರಿಗೆ ತಿಳಿಸಿದ್ದೇನೆ. ಅಡುಗೆ ಸಿಬ್ಬಂದಿ ನೇಮಕ ಅಧಿಕಾರ ಗ್ರಾಮ ಪಂಚಾಯಿತಿಯವರಿಗೆ ಇರುತ್ತದೆ. ಹೀಗಾಗಿ ಗ್ರಾಪಂನವರಿಗೆ ಪತ್ರ ಬರೆಯುವಂತೆ ಹೇಳಿದ್ದೇನೆ. ನನಗೂ ಕ್ರಮಕ್ಕೆ ಶಿಫಾರಸು ಮಾಡಿ ಪತ್ರ ನೀಡಿದಲ್ಲಿ ನಾನೂ ಸಹಿತ ನಿಯಮದ ಪ್ರಕಾರ ಏನು ಕ್ರಮ ಕೈಕೊಳ್ಳಬೇಕೊ ಕೈಕೊಳ್ಳುತ್ತೇನೆ. ತಪ್ಪು ಮಾಡಿದ್ದು ಸಾಬೀತಾದರೆ ಅವರನ್ನು ವಜಾಗೊಳಿಸಲು ಅವಕಾಶವಿದೆ ಎಂದು ತಿಳಿಸಿದರು.