ಕಳೆದ 5 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿಯ ಧರಣಿ ಸತ್ಯಾಗ್ರಹ ಅಂತ್ಯ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ನಾಗಬೇನಾಳ ಗ್ರಾಮ ಪಂಚಾಯಿತಿಗೆ ಹಲವು ವರ್ಷಗಳಿಂದ ವಿದ್ಯುತ್ ಉತ್ಪಾದಿಸಿದ ತೆರಿಗೆ ತುಂಬದೆ ಕೋಟ್ಯಂತರ ರೂ. ವಂಚಿಸಿರುವ ನಾರಾಯಣಪುರ ಜಲಾಶಯದ ಕೃಷ್ಣಾ ನದಿಯ ಹಿನ್ನೀರು ಬಳಸಿ ವಿದ್ಯುತ್ ಉತ್ಪಾದಿಸುತ್ತಿರುವ ಮುರ್ಡೇಶ್ವರ ಪವರ್ ಕಾರ್ಪೋರೇಷನ್ ಕಂಪನಿ (ಎಂಪಿಸಿಎಲ್) ವಿರುದ್ಧ ತನಿಖೆ ನಡೆಸಿ 7 ದಿನಗಳೊಳಗಾಗಿ ವರದಿ ಸಲ್ಲಿಸಲು ಜಿಪಂ ಸಿಇಒ ಅವರು ಜಿಲ್ಲಾ ಮಟ್ಟದ ತಂಡ ರಚನೆ ಮಾಡಿದ್ದನ್ನು ಪರಿಗಣಿಸಿ ಯುವಜನ ಸೇನೆ ಸಂಘಟನೆ ಇಲ್ಲಿನ ತಾಪಂ ಎದುರು ಕಳೆದ 5 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿಯ ಧರಣಿ ಸತ್ಯಾಗ್ರಹ ಶನಿವಾರ ಅಂತ್ಯಗೊಂಡಿತು.
ತಾಪಂ ಇಒ ಎನ್.ಎಸ್.ಮಸಳಿ ಅವರು ಹೋರಾಟ ಗಾರರಿಗೆ ಜಿಪಂ ಸಿಇಒ ಆದೇಶ ಅವರು ಆದೇಶಿಸಿರುವತಂಡ ರಚನೆಯ ಪತ್ರ ಹಸ್ತಾಂತರಿಸಿ ಬೇಡಿಕೆ ಈಡೇರಿದ್ದರಿಂದ ಧರಣಿ ಅಂತ್ಯಗೊಳಿಸುವಂತೆ ಮನವಿ ಮಾಡಿದಕ್ಕೆ ಸ್ಪಂದಿಸಿ ಈ ತೀರ್ಮಾನ ಕೈಗೊ ಳ್ಳಲಾಯಿತು. ಮಸಳಿಯವರು ಎಲ್ಲರಿಗೂ ಕಬ್ಬಿನ ಹಾಲು ಕುಡಿಸಿ ಧರಣಿ ಅಂತ್ಯಕಗೊಳ್ಳಿಸಿದ್ದಾರೆ.
ಈ ವೇಳೆ ಧರಣಿ ಭೇಟಿ: ಶುಕ್ರವಾರ ಧರಣಿ ಸ್ಥಳಕ್ಕೆ ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಪಿಎಸೈ ಸಂಜಯ್ ತಿಪ್ಪರಡ್ಡಿ ಭೇಟಿ ನೀಡಿ ಹೋರಾಟಗಾರರ ಬೇಡಿಕೆ ಆಲಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಯುವಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ, ಗಂಗು ಗಂಗನಗೌಡ್ರ, ಶಿವು ವನಕಿಹಾಳ, ಮಾಜಿ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಮಲ್ಲು ತಳವಾರ ಬಿಜೂರ ಇನ್ನಿತರರು ಇದ್ದರು. ತನಿಖೆಯಲ್ಲಿ ಲೋಪ ಕಂಡು ಬಂದರೆ ಮತ್ತೇಹೋರಾಟಮುಂದುವರಿಸಬೇಕಾಗುತ್ತದೆ ಎಂದು ಶಿವಾನಂದ ವಾಲಿ ತಿಳಿಸಿದರು.
ತನಿಖಾ ತಂಡ ರಚನೆ: ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ ತನಿಖಾ ತಂಡದ ಮುಖ್ಯಸ್ಥರಾಗಿದ್ದಾರೆ. ಜಿಪಂ ಸಹಾಯಕ ನಿರ್ದೇಶಕ (ಆಡಳಿತ) ಡಿ.ಬಿ. ಮೇಂದಳೆ, ಜಿಪಂ ಪಿಡಿಓ (ಆಡಳಿತ) ಉಮೇಶ ರಾಠೋಡ, ಜಿಪಂ ಎಸ್ಡಿಸಿ (ಆಡಳಿತ ಶಾಖೆ) ಮಹೇಶ ಮಠಪತಿ, ಜಿಪಂ ಜಿಲ್ಲಾ ಯೋಜನಾ ವ್ಯವಸ್ಥಾಪಕ ಅರವಿಂದ ಬಿರಾದಾರ ತಂಡದ ಸದಸ್ಯರಾಗಿದ್ದಾರೆ.