ಮುದ್ದೇಬಿಹಾಳ | ಮದವೇರಿದ ಎಮ್ಮೆ ಕಟ್ಟಲು 1 ಗಂಟೆ ಕಾರ್ಯಾಚರಣೆ
ಮುದ್ದೇಬಿಹಾಳ: ಮದವೇರಿಸಿಕೊಂಡು ಸಾರ್ವಜನಿಕರಿಗೆ, ವಾಹನಗಳಿಗೆ ಸಿಕ್ಕಂತೆ ಗುದ್ದುತ್ತಾ ಹಾನಿ ಮಾಡುತ್ತ ಪುಂಡಾಟದಲ್ಲಿ ತೊಡಗಿದ್ದ ಎಮ್ಮೆಯೊಂದನ್ನು ಒಂದೂವರೆ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಜೆಸಿಬಿ ಯಂತ್ರದ ಬಕೆಟ್ ಬಳಸಿ ಉಪಾಯದಿಂದ ಸುರಕ್ಷಿತವಾಗಿ ಹಿಡಿದು ಕಟ್ಟಿ ಹಾಕಿದ ಘಟನೆ ಗುರುವಾರ ಪಟ್ಟಣದಲ್ಲಿ ನಡೆಯಿತು.
ಬಸ್ ನಿಲ್ದಾಣದಲ್ಲಿ ದಾಂಗುಡಿ ಇಡುತ್ತಿದ್ದ ಎಮ್ಮೆಯನ್ನು ಅಲ್ಲೇ ಹಿಡಿಯಲು ಯತ್ನಿಸಿದರೂ ತಪ್ಪಿಸಿಕೊಂಡು ಪುರಸಭೆ ಹತ್ತಿರದ ಮಾರ್ಗವಾಗಿ ಪದಕಿ ಆಸ್ಪತ್ರೆ ಬಡಾವಣೆಗಳಲ್ಲೆಲ್ಲ ಓಡಾಡುತ್ತ ವಾಲ್ಮೀಕಿ ವೃತ್ತದ ಬಳಿ ಇರುವ ಹಳೇ ಸರ್ಕಾರಿ ಆಸ್ಪತ್ರೆಯ (ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ) ಆವರಣದೊಳಕ್ಕೆ ನುಗ್ಗಿತು. ಇಲ್ಲಿ ಸುತ್ತಲೂ ಕಂಪೌಂಡ್ ಇದ್ದುದರಿಂದ ಹಿಡಿಯಲು ಸುಲಭ ಎಂದರಿತು ಕಾರ್ಯಾಚರಣೆಗೆ ತೀರ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅವರು ಪುರಸಭೆಯ ಜೆಸಿಬಿ ಮತ್ತು ದನ, ಎತ್ತು ಹಿಡಿದು ಪಳಗಿಸುವಲ್ಲಿ ನುರಿತ ತಮ್ಮ ಸ್ನೇಹಿತರ ತಂಡವನ್ನು ಬಲವಾದ ಹಗ್ಗದೊಂದಿಗೆ ಸ್ಥಳಕ್ಕೆ ಕರೆಸಿದರು. ಮಾನವ ಪ್ರಯತ್ನಕ್ಕೆ ಎಮ್ಮ ಬಗ್ಗುವ ಲಕ್ಷಣ ಕಾಣಲಿಲ್ಲ. ಎಲ್ಲರನ್ನೂ ಓಡಾಡಿಸುತ್ತ, ಎದುರಿಗೆ ಬಂದವರನ್ನು ಇರಿಯುತ್ತ ಮೊಂಡಾಟ ಹೆಚ್ಚು ಮಾಡಿತು. ಸಮಯ ನೋಡಿಕೊಂಡು ಪುರಸಭೆ ಜೆಸಿಬಿ ಚಾಲಕ ಯಮನಪ್ಪ ಬಿರಾದಾರ ಜಾಣತನದಿಂದ ಜೆಸಿಬಿಯ ಬಕೆಟ್ ಅನ್ನು ನಿಧಾನವಾಗಿ ಎಮ್ಮೆಯ ಮೇಲೆ ಇಳಿಸಿ ಏಕಾಏಕಿ ಮೇಲಿನಿಂದ ಒತ್ತಿ ಹಿಡಿದಾಗ ತಕ್ಷಣ ತಂಡದವರು ಹಗ್ಗದೊಂದಿಗೆ ಧಾವಿಸಿ ಕಟ್ಟಿ ಹಾಕಿದರು.
ಜೆಸಿಬಿ ಬಳಸಿದರೂ ಎಮ್ಮೆಗೆ ಯಾವುದೆ ತೊಂದರೆ ಆಗಲಿಲ್ಲ. ನಂತರ ಅದನ್ನು ಟಂಟಂ ವಾಹನದಲ್ಲಿ ಗೊಳಸಂಗಿ ಅವರು ಪೊಲೀಸರ ಸಲಹೆ ಮೇರೆಗೆ ತಮ್ಮ ಬಡಾವಣೆಗೆ ಕೊಂಡೊಯ್ದು ಮರವೊಂದಕ್ಕೆ ಕಟ್ಟಿ ಹಾಕಿ ಮೇವು, ನೀರಿನ ವ್ಯವಸ್ಥೆ ಕಲ್ಪಿಸಿದರು. ಸಿಪಿಐ ಮೊಹಮ್ಮದ್ ಫಸಿಯುದ್ದೀನ್, ಕಾನ್ಸಟೇಬಲ್ ಸಲೀಮ ಹತ್ತರಕಿಹಾಳ ಅವರು ಜನರು ಕಂಪೌಂಡ್ ಒಳಗೆ ಹೋಗದಂತೆ ನಿಯಂತ್ರಿಸಿ ಸಹಕರಿಸಿದರು. ಯಾಸೀನ್ ಅತ್ತಾರ, ಯಾಸೀರ್ ಢವಳಗಿ, ಶಬ್ಬೀರ ಪಡ್ನೂರೆ, ಸಲೀಮ ಬೇಪಾರಿ, ಮಕ್ತುಮ್ ಬೇಪಾರಿ ಇನ್ನಿತರ ಯುವಕರ ತಂಡ ಮತ್ತು ಪುರಸಭೆ ಪೌರ ಕಾರ್ಮಿಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಗುರುವಾರ ಸಂತೆಯ ದಿನವಾಗಿದ್ದರಿಂದ ಪಟ್ಟಣದಲ್ಲಿ ಹೆಚ್ಚಿನ ಜನದಟ್ಟಣೆ ಇತ್ತು. ಅಕಸ್ಮಾತ್ ಎಮ್ಮೆ ಜನದಟ್ಟಣೆ ಇರುವ ಬಜಾರಲ್ಲಿ ನುಗ್ಗಿದ್ದರೆ ಮಕ್ಕಳು, ಮಹಿಳೆಯರು, ವೃದ್ದರು ಸೇರಿ ಹಲವರ ಪ್ರಾಣಹಾನಿ ಆಗುವ ಸಂಭವ ಹೆಚ್ಚಾಗಿತ್ತು ಎಂದು ಪ್ರತ್ಯಕ್ಷದರ್ಶಿ ಲಾಡ್ಲೇಮಶ್ಯಾಕ ನದಾಫ ತಿಳಿಸಿದರು.
ಒಟ್ಟಿನಲ್ಲಿ ಬಹು ಹೊತ್ತಿನವರೆಗೆ ನಡೆದ ಕಾರ್ಯಾಚರಣೆಯಿಂದ ಎಮ್ಮೆ ಬಂಧಿಸಲ್ಪಟ್ಟು ಹಲವರ ಪ್ರಾಣ, ವಾಹನಗಳ ಹಾನಿ ತಪ್ಪಿದಂತಾಯಿತು. ಸೌಮ್ಯ ಸ್ವಭಾವದ ಸಾಕು ಎಮ್ಮೆ ಹೀಗೆ ಮದವೇರಿಸಿಕೊಂಡು ಪುಂಡಾಟ ನಡೆಸಿದ್ದಕ್ಕೆ ಸ್ಪಷ್ಟ ಕಾರಣ ತಿಳಿದುಬರಲಿಲ್ಲ.
ಎಮ್ಮೆಯನ್ನು ಸುರಕ್ಷಿತವಾಗಿ ಹಿಡಿದು ಜನರ ಪ್ರಾಣಕ್ಕೆ ಮತ್ತು ಸಾರ್ವಜನಿಕರ ವಾಹನಗಳಿಗೆ ಹಾನಿಯಾಗುವುದನ್ನು ತಪ್ಪಿಸಲಾಗಿದೆ. ಮಹೆಬೂಬನಗರದ ನಮ್ಮ ಮನೆಯ ಹತ್ತಿರ ಗಿಡವೊಂದಕ್ಕೆ ಎಮ್ಮೆ ಕಟ್ಟಿ ಮೇವು, ನೀರಿನ ವ್ಯವಸ್ಥೆ ಮಾಡಲಾಗಿದೆ. ಎಮ್ಮೆಯ ಮಾಲಿಕರು ಕಾರ್ಯಾಚರಣೆಗೆ ತಗುಲಿದ ಖರ್ಚು ಪುರಸಭೆಗೆ ಭರಿಸಿ ಒಯ್ಯಬಹುದು. ಮೂರು ದಿನಗಳೊಳಗಾಗಿ ಒಯ್ಯದಿದ್ದರೆ ಅದನ್ನು ಮಾರಾಟ ಮಾಡಿ ಬರುವ ಹಣವನ್ನು ಪುರಸಭೆಗೆ ಜಮಾ ಮಾಡಲಾಗುತ್ತದೆ.
–ಮಹಿಬೂಬ ಗೊಳಸಂಗಿ, ಅಧ್ಯಕ್ಷರು, ಪುರಸಭೆ, ಮುದ್ದೇಬಿಹಾಳ
ಮುದ್ದೇಬಿಹಾಳ: ಜೆಸಿಬಿ ಬಳಸಿ ಕಾರ್ಯಾಚರಣೆ ಮೂಲಕ ಪುಂಡಾಟ ನಡೆಸುತ್ತಿದ್ದ ಮದವೇರಿದ ಎಮ್ಮೆ ಸೆರೆ ಹಿಡಿಯಲಾಯಿತು.



















