ಇಂಡಿ | ಶ್ರೀ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76 ನೇ ಗಣರಾಜ್ಯೋತ್ಸವ ಸಂಭ್ರಮ
ಇಂಡಿ : ಜನವರಿ 26 ರಂದು ಗಣರಾಜ್ಯ ದಿನವನ್ನು ನಮ್ಮ ದೇಶದಾದ್ಯಂತ ಆಚರಣೆ ಮಾಡುತ್ತೇವೆ. ಅಂದು ರಾಷ್ಟ್ರ ಧ್ವಜವನ್ನು ಆರಿಸುವ ಮೂಲಕ, ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ನೆನೆಯುವುದು ಭಾರತದಲ್ಲಿ 1950 ರಿಂದಲೂ ಭಾರತೀಯರ ಒಂದು ಹೆಮ್ಮೆಯ ಕರ್ತವ್ಯವೂ ಆಗಿದೆ ಎಂದು ರಾಜ್ಯ ಸರ್ಕಾರಿ ತಾಲ್ಲೂಕು ನೌಕರ ಸಂಘದ ಮಾಜಿ ಅಧ್ಯಕ್ಷ ಎಸ್ ಆರ್ ಪಾಟೀಲ ಭಾನುವಾರ ಮಾತನಾಡಿದರು .
ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಾಂತಿ ನಗರದಲ್ಲಿರುವ ಶ್ರೀ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ 76 ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.
ಇಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳ ಕ್ರಿಯಾಶೀಲತೆ ಗಮನಿಸಿದರೆ, ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತೀರುವುದು ಕಂಡುಬರುತ್ತದೆ ಎಂದು ಬಣ್ಣಿಸಿದರು.
ಇನ್ನೂ ಸಂಸ್ಥೆಯ ಉಪಾಧ್ಯಕ್ಷ ಸಂಗನಗೌಡ ಬಿರಾದಾರ ಶಾಲೆಯ ಆವರಣದಲ್ಲಿರುವ ಧ್ವಜಾರೋಹಣ ನೆರೆವೆರಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನ ರಚನಾ ಸಮಿತಿ ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ನಮ್ಮ ದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ, ಧಾರ್ಮಿಕ ವ್ಯವಸ್ಥೆಗೆ ಪೂರಕವಾದ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಈ ಸಂವಿಧಾನದ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಪರಿಕಲ್ಪನೆಯನ್ನು ಸಾಕಾರಗೊಳ್ಳುತ್ತಿದೆ ಎಂದರು.
ಸಂವಿಧಾನ ಭಾರತವನ್ನು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿಸಿದೆ. ಎಲ್ಲರಿಗೂ ಸಮಾನ ಹಕ್ಕುಗಳು ಹಾಗೂ ಅವಕಾಶಗಳನ್ನು ನೀಡಿದೆ ಎಂದ ಅವರು, ಜ.26, 1950ರಂದು ಅರ್ಥಪೂರ್ಣವಾದ ಲಿಖಿತ ಸಂವಿಧಾನವನ್ನು ದೇಶ ಅಳವಡಿಸಿಕೊಂಡಿದೆ. ಈ ದಿನ ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ದಿನವಾಗಿದೆ ಎಂದರು. ನಮ್ಮ ದೇಶದ ಲಕ್ಷಾಂತರ ದೇಶಪ್ರೇಮಿಗಳು ತಮ್ಮ ಜೀವನವನ್ನೇ ಪುಡಿಪಾಗಿಟ್ಟು ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅವರೆಲ್ಲರನ್ನೂ ನೆನಪಿಸಿಕೊಳ್ಳುವ ದಿನವಾಗಿದೆ. ಅವರ ತ್ಯಾಗ ಬಲಿದಾನದ ಜೊತೆಗೆ ಅವರು ಹಾಕಿಕೊಟ್ಟ ಮಾರ್ಗಗಳನ್ನು ಅನುಸರಿಸಿದರೆ ನಮ್ಮ ದೇಶ ಸುಭದ್ರವಾಗುವದಲ್ಲದೇ ಪ್ರಗತಿ ಸಾಧಿಸುತ್ತದೆ ಎಂದರು. ನಮ್ಮ ದೇಶದ ಸುರಕ್ಷತೆಗಾಗಿ ಹಗಲಿರುಳೂ ನಮ್ಮ ದೇಶವನ್ನು ಕಾಯುತ್ತಿರುವ ಸೈನಿಕರನ್ನೂ ಕೂಡಾ ಗೌರವಿಸಬೇಕು. ನಾವೆಲ್ಲರೂ ಶಾಂತಿ, ಸಹನೆ, ತಾಳ್ಮೆಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಶಾಲಾ ಮಕ್ಕಳಿಂದ ಪಥಸಂಚಲನ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ತಳವಾರ, ಪತ್ರಕರ್ತ ಶಂಕರ್ ಜಮಾದಾರ, ಗ್ರಾ.ಪಂ ಮಾಜಿ ಅಧ್ಯಕ್ಷ ರಾಜಶೇಖರ ಡಂಗಿ, ಗ್ರಾ.ಪಂ ಸದಸ್ಯ ಭೀಮಣ್ಣ ಜೇವೂರ, ನಿಸಾರ ಬಾಗವಾನ, ನಿಂಗಪ್ಪ ಪೂಜಾರಿ, ಸಂಜೀವ ರೂಗಿ, ಜೆಟ್ಟಪ್ಪ ಮೂಲಿಮನಿ, ಶಂಕರ್ ಮಡಿವಾಳ, ಮಲ್ಲಿಕಾರ್ಜುನ ಝಳಕಿ, ಪ್ರಭು ನಾಟೀಕಾರ ಶಂಕರ್ ದೇಸಾಯಿ, ಉಪನ್ಯಾಸಕ ಸಂತೋಷ ರೂಗಿ, ಬಸಣ್ಣ ರೂಗಿ, ಕೃಷ್ಣಾ ಬಾರಸಾಕಳೆ, ಪೈಗಂಬರ್ ನದಾಪ್, ಸಂತೋಷ ಪೂಜಾರಿ ಇನ್ನೂ ಅನೇಕರು ಉಪಸ್ಥಿತರಿದ್ದರು.


















