ಇಂಡಿ : ಶಿವಯೋಗಿ ಸಿದ್ದರಾಮೇಶ್ವರ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಗಳ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಗ್ರೇಡ್ 2 ತಹಶೀಲ್ದಾರ ಧನಪಾಲಶೆಟ್ಟಿ ದೇವೂರ ಅವರು ಸೂಚನೆ ನೀಡಿದರು.
ಮಂಗಳವಾರ ತಾಲ್ಲೂಕು ಆಡಳಿತ ಸೌಧದಲ್ಲಿ ಶಿವಯೋಗಿ ಸಿದ್ದರಾಮೇಶ್ವರ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಪೂರ್ವ ಸಿದ್ದತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಮಾಜದ ಮುಖಂಡರ ಸಲಹೆಯದಂತೆ ಅಚ್ಚುಕಟ್ಟಾಗಿ ಯಾವುದೆ ಲೋಪವಾಗದಂತೆ ಕಾರ್ಯಕ್ರಮ ಜರುಗಬೇಕು ಎಂದು ಹೇಳಿದರು.
ಜ-14 ರಂದು ಶಿವಯೋಗಿ ಸಿದ್ದರಾಮ ಜಯಂತಿ, ಜ-19 ರಂದು ಮಹಾಯೋಗಿ ವೇಮನ ಜಯಂತಿ, ಜ-21 ಅಂಬಿಗರ ಚೌಡಯ್ಯ ಜಯಂತಿ ಸರಕಾರದ ನಿರ್ದೇಶನದಂತೆ ಜರುಗುತ್ತದೆ. ಅದಲ್ಲದೇ ಸರಕಾರದ ಆದೇಶದಂತೆ ಸ್ಥಳಿಯ ಸಂಘ ಸಂಸ್ಥೆಗಳು, ಗ್ರಾಮ ಪಂಚಾಯತ್,ಶಾಲಾ-ಕಾಲೇಜು ಸೇರಿದಂತೆ ಸರಕಾರಿ ಎಲ್ಲಾ ತಾಲೂಕು ಕಛೇರಿಯಲ್ಲಿ ನಿಗದಿತ ಸಮಯಕ್ಕೆ ಆಚರಣೆ ಮಾಡಬೇಕು. ತದನಂತರ ತಾಲ್ಲೂಕು ಆಡಳಿತ ಸೌಧದಲ್ಲಿ ಎಲ್ಲಾ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳಬೇಕು ಎಂದು ಹೇಳಿದರು. ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲಾ ಸಮಾಜದ ಮುಖಂಡರು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಇನ್ನೂ ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಹೊಸಮನಿ ಮಾತನಾಡಿ, ಮಹನೀಯರ ಜೀವನ ಶೈಲಿ, ಆದರ್ಶ, ಆಧ್ಯಾತ್ಮಿಕ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಮಹನೀಯರು ಯಾವುದೇ ನಿರೀಕ್ಷೆ ಇಲ್ಲದೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆಗಳು ಇನ್ನೂ ಜೀವಂತವಾಗಿವೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಪ್ರತಿಯೊಬ್ಬರು ಸಾಗಿ ಸಜ್ಜನ ವ್ಯಕ್ತಿಗಳಾಗಬೇಕು ಎನ್ನುವ ಗುರಿ ಉದ್ದೇಶದಿಂದ ಮಹನೀಯರ ಜಯಂತಿ ಆಚರಣೆಗೆ ತರುತ್ತಿವೆ. ಆದರೆ ಅನೇಕ ಇಲಾಖೆ ಅಧಿಕಾರಿಗಳು ಗೈರುಹಾಜರಿ ಇರುವುದರಿಂದ ಅವರ ಮಹನೀಯರ ಜಯಂತಿ ಆಚರಣೆಯ ಆಸಕ್ತಿ, ನಿರಾಸಕ್ತಿ ಎರಡು ವ್ಯಕ್ತವಾಗುತ್ತವೆ ಎಂದು ಸೂಕ್ಷ್ಮವಾಗಿ ಎಚ್ಚರಿಕೆ ಮೂಡಿಸಿದರು.