ಹಿಂದೂ ವಿರೋಧಿ ರಾಜ್ಯ ಸರಕಾರ : ಡಾ. ವೃಷಭಲಿಂಗ ಮಹಾಶಿವಯೋಗಿಗಳು
ಇಂಡಿ: ಇತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣದ ವಿಚಾರವಾಗಿ ರಾಜ್ಯದ
ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು
ಕೀಳು ಹೇಳಿಕೆ ನೀಡಿರುವುದು ಸರಿಯಲ್ಲ. ಇಂತಹ
ಹೇಳಿಕೆಗಳನ್ನು ಗಮನಿಸಿದರೆ ರಾಜ್ಯ ಸರ್ಕಾರ ಹಿಂದೂ
ವಿರೋಧಿ ಸರ್ಕಾರ ಎನ್ನುವುದರಲ್ಲಿ ಎರಡು ಮಾತಿಲ್ಲ
ಎಂದು ಬಂಥನಾಳ ಹಾಗೂ ಲಚ್ಚಾಣ ಪೀಠದ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಹೇಳಿದರು.
ಸೋಮವಾರ ತಾಲೂಕಿನ ಇಂಗಳಗಿ ಗ್ರಾಮದ ಶ್ರೀ
ಅಲ್ಲಮಪ್ರಭು ಹಾಗೂ ಹನುಮ ಜಯಂತಿ ಮತ್ತು
ಗೈಬೂಸಾಬ್ ಜಾತ್ರಾ ಮಹೋತ್ಸವದ ಅಂಗವಾಗಿ
ಹಮ್ಮಿಕೊಂಡಿದ್ದ ಧರ್ಮ ಸಭೆಯ ಪಾವನ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಧರ್ಮದಲ್ಲಿ ರಾಜಕೀಯವಿರಬಾರದು ಆದರೆ ರಾಜಕಾರಣದಲ್ಲಿ ಧರ್ಮವಿರಬೇಕು. ಅದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಇಂಗಳಗಿ ಗ್ರಾಮಸ್ಥರು ಸೇರಿಕೊಂಡು ಸಾಮೂಹಿಕ
ವಿವಾಹದ ಜೊತೆಗೆ ಜಾತಿ, ಮತ, ಪಂಥ ಎನ್ನದೆ ಹಿಂದೂ
ಮುಸ್ಲಿಂ ಎರಡು ದೇವತೆಗಳ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಎಲ್ಲರೂ ಸೇರಿ ಆಚರಿಸುತ್ತಿರುವುದು ಸಂತಸ ತಂದಿದೆ. ಇಂಡಿ ತಾಲೂಕಿನಲ್ಲಿ ಇಂಗಳಗಿ ಗ್ರಾಮ ಆದರ್ಶ ಗ್ರಾಮವಾಗಿದೆ ಎಂದರು. ನೂತನವಾಗಿ ನವದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳು. ಉತ್ತಮವಾಗಿ ಧರ್ಮದ ಹಾದಿಯಲ್ಲಿ ಸಂಸಾರ ನಡೆಸಿಕೊಂಡು ಹೋಗಬೇಕು. ಸಂಸಾರದಲ್ಲಿ ಬಿರುಕು ಮೂಡದಂತೆ ಜೀವನ ನಡೆಸಬೇಕೆಂದು ಸಲಹೆ ನೀಡಿದರು.
ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ,
ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವವರು
ನಿಜಕ್ಕೂ ಭಾಗ್ಯಶಾಲಿಗಳು. ಅವರು ಒಂದೊಂದೇ
ವಿವಾಹಗಳನ್ನು ಮಾಡಿಕೊಂಡರೆ ಇಷ್ಟು ಜನಸಂಖ್ಯೆ
ಸೇರಲು ಸಾಧ್ಯವಾಗಲ್ಲ, ಅಲ್ಲದೆ ಹತ್ತಾರು ಸ್ವಾಮೀಜಿಗಳ
ಸಮ್ಮುಖದಲ್ಲಿ ಆಶೀರ್ವಾದ ಪಡೆದು ವಿವಾಹವಾದರೆ ಆ ವಿವಾಹ ಜೀವನ ಅತ್ಯುತ್ತಮವಾಗಿರುತ್ತದೆ ಎಂದ ಅವರು,
ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು
ಆರತಿಗೊಬ್ಬ, ಕೀರ್ತಿಗೊಬ್ಬಳು ಎಂದು ಎರಡೇ ಮಕ್ಕಳನ್ನು ಹೆರಬಾರದು. ಬದಲಾಗಿ ಧರ್ಮಕ್ಕೊಬ್ಬ,
ದೇಶಕೊಬ್ಬ ನಮ್ಮನ್ನು ನೋಡಿಕೊಳ್ಳಲು ಒಬ್ಬ,
ಸಾರ್ವಜನಿಕರ ಸೇವೆ ಮಾಡಲು ಒಬ್ಬ ಹೀಗೆ ಕನಿಷ್ಠ ನಾಲ್ಕು ಮಕ್ಕಳಿಗೆ ಜನ್ಮ ನೀಡಬೇಕು ಎಂದರು.
ಬಹುತೇಕರು ಸಾಮೂಹಿಕ ವಿವಾಹಗಳನ್ನು ಬಡವರ
ಮದುವೆ ಎನ್ನುತ್ತಾರೆ ಆದರೆ, ಸರಳ ಸಾಮೂಹಿಕ
ವಿವಾಹದಲ್ಲಿ ಮದುವೆಯಾಗುವವರು ನಿಜಕ್ಕೂ
ಪುಣ್ಯವಂತರು ಎಂದರು.
ಆಳೂರ ಸಿದ್ದಾರೂಢ ಮಠದ ಶಂಕರಾನಂದ ಶ್ರೀಗಳು ಮಾತನಾಡಿ, ಇಂಗಳಗಿ ಗ್ರಾಮದಲ್ಲಿ ಭಾವೈಕ್ಯತೆಯಿಂದ ಜಾತ್ರೆಯನ್ನು ಆಚರಿಸುತ್ತಿರುವುದು ಸಂತಸ ತಂದಿದೆ. ಈ ನಾಡಿನಾದ್ಯಂತ ಇದೇ ಗ್ರಾಮದಂತೆ ಭಾವೈಕ್ಯತೆಯಿಂದ ಜಾತ್ರೆ ಹಬ್ಬ ಹರಿದಿನಗಳನ್ನು ಆಚರಿಸುತ್ತಾ ಸಾಗಿದರೆ ಇಡೀ ದೇಶ ಸಮೃದ್ಧವಾಗಿರುತ್ತದೆ ಎಂದರು.
ಪಿಕೆಪಿಎಸ್ ಅಧ್ಯಕ್ಷ ಪ್ರಭು ಹೊಸಮನಿ ಪ್ರಾಸ್ತಾವಿಕವಾಗಿ
ಮಾತನಾಡಿದರು. ಗೋಳಸಾರದ ಅಭಿನವ ಪುಂಡಲಿಂಗ ಮಾಹಾರಾಜರು, ಇಂಡಿ ಓಂಕಾರಶ್ರಮದ ಡಾ. ಸ್ವೂರುಪಾನಂದ ಶ್ರೀಗಳು, ಖೇಡಗಿ ವಿರಕ್ತ ಮಠದ ಡಾ. ಶಿವ ಬಸವರಾಜೇಂದ್ರ ಶಿವಾಚಾರ್ಯರು ವೇದಿಕೆಯ ಸಾನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ನಿವೃತ್ತ ಪ್ರಾಚಾರ್ಯೆ ಶೈಲಜಾ ಬಿರಾದಾರ,
ಅಶೋಕ ಕುಲಕರ್ಣಿ, ದೇವೇಂದ್ರ ಕುಂಬಾರ, ಹಸನ್
ಮಣ್ಣೂರ, ಬಸವರಾಜ ಕಿತ್ತಲಿ, ಉಮೇಶ ಕುಲಕರ್ಣಿ,
ಉಮೇಶ ಬಳಬಟ್ಟಿ, ಅರ್ಜುನ ಪೂಜಾರಿ, ನರಸಿವಂರಾವ
ಕುಲಕರ್ಣಿ, ಅಶೋಕ ಬಳಬಟ್ಟಿ, ಯಲ್ಲಪ್ಪ ಸಾತಲಗಾಂವ,
ಅರ್ಜುನ ಜಾಧವ, ಅಣ್ಣರಾಯ ಅಹಿರಸಂಗ, ಬಸವರಾಜ ಜಾಧವ, ಸುಭಾಷ ಥೋರಾತ, ಜಕ್ಕಪ್ಪ ಪೂಜಾರಿ, ಸಿದ್ದು ಹಂದ್ರಾಳ, ಮಾಹಾವಿರ ಪಾಟೀಲ, ಶಿವಾನಂದ ತಾವರಖೇಡ, ವಿಷ್ಣು ವಾಘಮೋರೆ, ಭೀಮರಾಯ ವಾಲೀಕಾರ ಸೇರಿದಂತೆ
ಮತ್ತಿತರರು ಇದ್ದರು. ರಾಜಕುಮಾರ್ ಚಾಬುಕಸವಾರ ನಿರೂಪಿಸಿದರು. ಅಶೋಕ ಬಳಬಟ್ಟಿ ಸ್ವಾಗತಿಸಿ ವಂದಿಸಿದರು.
ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ಶ್ರೀ ಅಲ್ಲಮಪ್ರಭು ಹಾಗೂ ಹನುಮ ಜಯಂತಿ ಮತ್ತು ಗೈಬುಸಾಬ್ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ ಧರ್ಮಸಭೆಯ ಪಾವನ ಸಾನಿಧ್ಯ ವಹಿಸಿ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಆಶೀರ್ವಚನ ನೀಡಿದರು.
ಇಂಡಿ: ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟ 6 ಜೋಡಿಗಳು.