ಮೂರನೇ ಬಾರಿಗೆ ವಿನಯ್ ಕುಮಾರ್ ನಾಮಪತ್ರ ಸಲ್ಲಿಕೆ..
ಪ್ರಜ್ಞಾವಂತ ಮತದಾರರು ಪಾಠ ಕಲಿಸಲಿದ್ದಾರೆ..!
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು ಇಂದು ನಾಮಪತ್ರ ಸಲ್ಲಿಸಿದರು.
ಏಪ್ರಿಲ್ 17ರಂದು ರೋಡ್ ಶೋ ನಡೆಸಿ ಅದ್ದೂರಿಯಾಗಿ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದ್ದ ವಿನಯ್ ಕುಮಾರ್ ಮತ್ತೊಮ್ಮೆ ಅಂದರೆ ಮೂರನೇ ಬಾರಿ ನಾಮಪತ್ರ ಸಲ್ಲಿಕೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಿದ್ದೇನೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳು, ಸಂಕಷ್ಟಗಳನ್ನು ಅರಿತಿದ್ದೇನೆ. ಕುಟುಂಬ ರಾಜಕಾರಣದ ವಿರುದ್ದದ ಸಿಟ್ಟು ಹಳ್ಳಿ ಮಾತ್ರವಲ್ಲ, ದಾವಣಗೆರೆ ನಗರದಲ್ಲಿಯೂ ಜನರು ಬಹಿರಂಗವಾಗಿ ಹೇಳದಿದ್ದರೂ ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರಲ್ಲಿಯೂ ಅಸಮಾಧಾನ ಇದೆ. ಜನರು ಸ್ವಾಭಿಮಾನಿಯ ಸ್ವಾಭಿಮಾನದ ಸ್ಪರ್ಧೆ ಕುರಿತಂತೆ ಎಲ್ಲೆಡೆ ಮಾತನಾಡುತ್ತಿದ್ದಾರೆ. ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ಹಾಗಾಗಿ, ಈ ಬಾರಿ ಗೆಲುವು
ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ಎಷ್ಟೇ ಒತ್ತಡ ಬಂದರೂ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹಲವಾರು ಬಾರಿ ಒತ್ತಡ ಬಂದಿದೆ. ತಲೆಕೆಡಿಸಿಕೊಳ್ಳುವುದಿಲ್ಲ. ಇದಕ್ಕೆಲ್ಲಾ ಜನಾದೇಶ, ಜನಾಭಿಪ್ರಾಯದಂತೆ ಕಣಕ್ಕೆ ಇಳಿಯುತ್ತಿದ್ದು, ಜಿಲ್ಲೆಯ ಜನರು ಕೈಹಿಡಿಯುವ ವಿಶ್ವಾಸ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿದ ಮೇಲೆಯೂ ಜನರ ಬಳಿ ಹೋಗಿದ್ದೆ. ಆಗ ಜನರು ಸ್ಪರ್ಧೆ ಮಾಡಲೇಬೇಕೆಂದು ಶೇಕಡಾ 99ರಷ್ಟು ಜನರು ಸಲಹೆ ನೀಡಿದರು. ಈ ಕಾರಣಕ್ಕಾಗಿ ಸ್ವಾಭಿಮಾನಿಯಾಗಿ ಸ್ಪರ್ಧೆ ಮಾಡಿದ್ದು, ಕುಟುಂಬ ರಾಜಕಾರಣಕ್ಕೆ ತಕ್ಕ ಪಾಠವನ್ನು ಪ್ರಜ್ಞಾವಂತ ಮತದಾರರು ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.