ವಿಜಯಪುರ : ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾ ಅಧಿಕಾರಿಯಾಗಿರುವ ಲತಾಕುಮಾರಿ ಭಾ.ಆ.ಸೆ ನಿರ್ದೇಶಕರು ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲಿಕರಣ ಇಲಾಖೆಯಿಂದ ಅವರ ವರ್ಗಾವಣೆಯನ್ನು ಕೈ ಬಿಡಬೇಕು ಎಂದು ಪ್ರತಿಭಟಸಿ ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ದೇಶ (ಎಂಆರ್ .ಡಬ್ಲೂ) ಮತ್ತು ಗ್ರಾಮೀಣ ಪುನರ್ವಸತಿ ರಾಜ್ಯ ಒಕ್ಕೂಟ (ರಿ) ಜಿಲ್ಲಾ ಶಾಖೆ, ವಿಜಯಪುರ ಇವರು, ಜಿಲ್ಲಾ ಅಧಿಕಾರಿಗಳ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಸುಮಾರು 15 ವರ್ಷಗಳಿಂದ ಕಾರ್ಯಕರ್ತರು ಎಲೆಮರೆಯ ಕಾಯಿಗಳಂತೆ ಯಾವುದೇ ಕನಿಷ್ಠ ಸೌಲಭ್ಯಗಳಿಲ್ಲದೇ ಸುಮಾರು 6,424 ಕಾರ್ಯಕರ್ತರು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ನಿರ್ದೇಶನಾಲಯಕ್ಕೆ ಜನವರಿ 2022 ರಲ್ಲಿ ಹೊಸದಾಗಿ ಹುದ್ದೆಯನ್ನು ವಹಿಸಿಕೊಂಡ ಲತಾಕುಮಾರಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಾವಣೆ ಕ್ರಮವಹಿಸಿರುತ್ತಾರೆ.
ವಿಕಲಚೇತನರ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ಯೋಜನೆಗಳು ಹೆಚ್ಚಾಗಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಜಾರಿಯಾಗುತ್ತಿದ್ದು, ಕೆಲವು ಸಂಸ್ಥೆಗಳ ಹಗಲು ದರೋಡೆಗೆ ಬ್ರೇಕ್ ಹಾಕಿರುವುದು, ಇಲಾಖೆಯ ಎಲ್ಲಾ ಯೋಜನೆಗಳನ್ನು ಆನ್ ಲೈನ್ ಮೂಲಕ ಜಾರಿಗೊಳಿಸಲು ಕ್ರಮ ಕೈಗೊಂಡಿರುವುದು, ಅಲ್ಲದೇ ಇಲಾಖೆ ಮತ್ತು ಆಡಳಿತದಲ್ಲಿ ಪಾರದರ್ಶಕತೆ ತಂದಿರುವುದು ಕೆಲವು ಅಧಿಕಾರಿ, ಸಿಬ್ಬಂದಿಗಳು, ಸ್ವಯಂ ಸೇವಾ ಸಂಸ್ಥೆಗಳ ಕಣ್ಣು ಕೆಂಪಾಗುವಂತೆ ಆಗಿದೆ.
ಇದರಿಂದಾಗಿಯೇ ನಿರ್ದೇಶಕರ ವರ್ಗಾವಣೆಯ ಚಿತಾವಣೆಗೆ ಕೈ ಜೋಡಿಸಿರುವುದು ಗುಟ್ಟಾಗಿ ಉಳಿದಿಲ್ಲ ಈ ಹಿನ್ನಲೇಯಲ್ಲಿಯೇ ನಿರ್ದೇಶಕರ ವರ್ಗಾವಣೆ ಕೆಲವು ಪಟ್ಟ ಭದ್ರರ ಹಿತಾಸಕ್ತಿಯಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಈ ನಿರ್ದೇಶಕರ ವರ್ಗಾವಣೆಯ ಪ್ರಸ್ತಾಪವನ್ನು ಕೈ ಬಿಡಬೇಕೆಂದು ಮನವಿ ಮಾಡಿದರು.