ಮುದ್ದೇಬಿಹಾಳ:ಮುದ್ದೇಬಿಹಾಳ ಪಟ್ಟಣದಲ್ಲಿರುವವ ಬಡಾವಣೆಗಳಲ್ಲಿ ಉದ್ಯಾನವನಕ್ಕೆಂದು ಮೀಸಲಿಟ್ಟ ಜಾಗಗಳಲ್ಲಿ ಇನ್ನೂ ಗಿಡಗಳನ್ನು ಹಚ್ಚಿಲ್ಲ. ಅವುಗಳನ್ನು ಗುರುತಿಸಿ, ಗಿಡಗಳನ್ನು ನೆಡುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಪುರಸಭೆಯ ಸದಸ್ಯೆ ಸಂಗಮ್ಮ ದೇವರಳ್ಳಿ ಕರೆ ನೀಡಿದರು. ಅವರು ಶುಕ್ರವಾರ ಪಟ್ಟಣದ ಮಾರುತಿ ನಗರದಲ್ಲಿ ಇರುವ ವರದಾನೇಶ್ವರಿ ಬಡಾವಣೆಯಲ್ಲಿ ಅರಣ್ಯ ಇಲಾಖೆ, ಪುರಸಭೆ, ಹಸಿರು ತೋರಣ ಗೆಳೆಯರ ಬಳಗ, ವರದಾನೇಶ್ವರಿ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಸಿರು ತೋರಣ ಗೆಳೆಯರ ಬಳಗ ಕಳೆದ ಹತ್ತು ವರ್ಷಗಳಿಂದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗಿಡಗಳನ್ನು ನೆಡಲು ಸತತ ಶ್ರಮಿಸುತ್ತಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಬಳಗದ ಸದಸ್ಯರು ಮಾಡುತ್ತಿರುವ ಕೆಲಸ ಮಾದರಿಯಾಗಿದೆ ಎಂದರು. ಪುರಸಭೆ ಉಪಾಧ್ಯಕ್ಷೆ ಪ್ರೀತಿ ಶರಣು ದೇಗಿನಾಳ ಮಾತನಾಡಿ, ಪಟ್ಟಣದಲ್ಲಿರುವ ಉದ್ಯಾನವನಗಳಲ್ಲಿ ಅರಣ್ಯ ಇಲಾಖೆಯ ಗಿಡಗಳನ್ನು ನೆಡುವ ಕೆಲಸಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದರು. ವರದಾನೇಶ್ವರಿ ಸೇವಾ ಸಂಸ್ಥೆ ಅಧ್ಯಕ್ಷ ಸಿದ್ದಯ್ಯ ಕಲ್ಯಾಣಮಠ ಮಾತನಾಡಿ, ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಹಸಿರು ತೋರಣ ಬಳಗ ಮುದ್ದೇಬಿಹಾಳ ಪಟ್ಟಣದ ತುಂಬೆಲ್ಲ ಗಿಡಗಳನ್ನು ನೆಡುವ ಕೆಲಸ ಮಾಡುತ್ತಿದೆ. ಗಿಡಗಳಿಂದ ಎಲ್ಲೆಡೆ ಒಳ್ಳೆಯ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಗಿರೀಶ ಆಲಕುಡೆ ಮಾತನಾಡಿ, ಈ ವರ್ಷ ಸಾಮಾಜಿಕ ಅರಣ್ಯ ವಿಭಾಗದಿಂದ 1500, ಪ್ರಾದೇಶಿಕ ಅರಣ್ಯ ವಿಭಾಗದಿಂದ 1800 ಗಿಡಗಳನ್ನು ನೆಡುವ ಕೆಲಸ ನಡೆಯಲಿದೆ. ಹಸಿರು ತೋರಣ ಬಳಗದ ಸಹಕಾರ ದೊಡ್ಡದು ಎಂದರು. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ ಮಾತನಾಡಿ, ಎಲ್ಲ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಹಸಿರು ತೋರಣ ಬಳಗದ ಸದಸ್ಯರು ಪಟ್ಟಣದ ಎಲ್ಲರನ್ನೂ ಜೊತೆಗೂಡಿಸಿಕೊಂಡು ಗಿಡಗಳನ್ನು ನೆಡುವ ಅರಣ್ಯ ಇಲಾಖೆಯ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ. ಈ ಸಮಾಜಮುಖಿ ಕೆಲಸ ಮುಂದೊಂದು ದಿನ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದರು. ಹಸಿರು ತೋರಣ ಬಳಗದ ಅಧ್ಯಕ್ಷ ಬಿ.ಎಚ್.ಬಳಬಟ್ಟಿ ಮಾತನಾಡಿ, ಬಳಗವು ಪಟ್ಟಣದ ಬಡಾವಣೆಗಳ ಮಾಲೀಕರ ಜೊತೆ ಸಮಾಲೋಚಿಸಿ, ಮನವೊಲಿಸಿ ಗಿಡಗಳನ್ನು ನೆಡುವಂತೆ ಪ್ರೇರೇಪಣೆ ನೀಡುತ್ತ ನಡೆದಿದೆ ಎಂದರು. ಹಸಿರು ತೋರಣದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಗಿಡಗಳನ್ನು ನೆಡುವ ಕೆಲಸದಲ್ಲಿ ಈ ವರ್ಷ ಪುರಸಭೆಯ ಸಿಬ್ಬಂದಿ ಸಹ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಬಡಾವಣೆಯಲ್ಲಿ ಇರುವ ಉದ್ಯಾನವನಗಳಲ್ಲಿ ಗಿಡಗಳನ್ನು ನೆಡಲು ನೀಡುತ್ತಿರುವ ಸಹಕಾರ ದೊಡ್ಡದು. ಬಡಾವಣೆಗಳಲ್ಲಿ ಗಿಡಗಳನ್ನು ನೆಡಲು ಎಲ್ಲರೂ ಮುಂದೆ ಬರಬೇಕು ಎಂದರು. ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ನೀರೆರೆಯುವ ಮೂಲಕ ಈ ವರ್ಷದ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆಯ ಸದಸ್ಯೆ ಪ್ರತಿಭಾ ಅಂಗಡಗೇರಿ, ಸಹನಾ ಬಡಿಗೇರ, ಭಾರತಿ ಪಾಟೀಲ, ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಶ್ರೀಶೈಲ ಮರೋಳ, ಆರೋಗ್ಯ ನಿರೀಕ್ಷಕ ಮಹಾಂತೇಶ ಕಟ್ಟಿಮನಿ, ಗಣ್ಯರಾದ ಭರತ್ ಭೋಸಲೆ, ಉಮೇಶ ನಾಗಠಾಣ, ಮಹಾಂತೇಶ ಬಸನಗೌಡ್ರ, ಹತೋಗೆಬ ಕಾರ್ಯದರ್ಶಿ ಅಮರೇಶ ಗೂಳಿ, ಉಪಾಧ್ಯಕ್ಷ ಸೋಮಶೇಖರ ಚೀರಲದಿನ್ನಿ, ಮಾಜಿ ಅಧ್ಯಕ್ಷರಾದ ಅಶೋಕ ರೇವಡಿ, ರವಿ ಗೂಳಿ, ರಾಜಶೇಖರ ಕಲ್ಯಾಣಮಠ, ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ಬಸವರಾಜ ಬಿಜ್ಜೂರ, ಕಿರಣ ಕಡಿ, ರವಿ ತಡಸದ, ಡಾ. ಚಂದ್ರಶೇಖರ ಶಿವಯೋಗಿಮಠ, ಕಿರಣ ಪಾಟೀಲ, ಸಂಜೀವ ಕಡೂರ, ಶಿವಾನಂದ ಇಂಡಿ, ವಿನಯ ಹಿರೇಮಠ, ಶಿವನಗೌಡ ಪಾಟೀಲ, ಲೋಹಿತ್ ನಾಲತವಾಡ, ವೀರೇಶ ಇಲಕಲ್ಲ, ಸುನೀಲ್ ಮನಗೂಳಿ, ಎಂ.ಬಿ.ಗುಡಗುಂಟಿ, ಮಹಾಂತೇಶ ಮೋಟಗಿ, ಜಾವೇದ ನಾಯ್ಕೋಡಿ ಸೇರಿದಂತೆ ಅರಣ್ಯ ಇಲಾಖೆ, ಪುರಸಭೆ, ಹಸಿರು ತೋರಣ ಬಳಗದ ಸದಸ್ಯರಿದ್ದರು. ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಸ್ವಾಗತಿಸಿ, ನಿರೂಪಿಸಿದರು. ಪರಮಾನಂದ ಪಾಟೀಲ ವಂದಿಸಿದರು.